ಸಾವಿರಾರು ಮೀನುಗಳ ಸಾವು; ನದಿ ತಟದಲ್ಲಿ ದುರ್ವಾಸನೆ

ನಿಟ್ಟೂರು-ಸಿಂಗಾಪುರ ಬಳಿಯೂ ಬತ್ತಿದ ತುಂಗಭದ್ರಾ

Update: 2026-07-23 15:05 IST

ಸಿರುಗುಪ್ಪ: ಮುಂಗಾರು ಮಳೆ ಕೈಕೊಟ್ಟಿದ್ದು, ಜಲಾಶಯದಿಂದ ನೀರು ಬಿಡುಗಡೆಯಾಗದ ಪರಿಣಾಮ ತಾಲೂಕಿನ ನಿಟ್ಟೂರು-ಸಿಂಗಾಪುರ ಗ್ರಾಮಗಳ ಬಳಿಯ ತುಂಗಭದ್ರಾ ನದಿ ಬಹುತೇಕ ಬತ್ತಿಹೋಗಿದೆ. ನೀರಿನ ಅಭಾವದಿಂದ ಈ ಪ್ರದೇಶದಲ್ಲಿ ಸಾವಿರಾರು ಮೀನುಗಳು ಹಾಗೂ ಇತರ ಜಲಚರಗಳು ಸಾವಿಗೀಡಾಗಿದ್ದು, ಕೃಷಿ ಚಟುವಟಿಕೆಗಳಿಗೂ ತೀವ್ರ ಹಿನ್ನಡೆಯಾಗಿದೆ.

ಸಾಮಾನ್ಯವಾಗಿ ಮುಂಗಾರು ಅವಧಿಯಲ್ಲಿ ಉಕ್ಕಿ ಹರಿಯುವ ತುಂಗಭದ್ರಾ ನದಿಪಾತ್ರ ಈ ಬಾರಿ ಮರಳುಮಯವಾಗಿ ಕಾಣಿಸುತ್ತಿದೆ. ಕಿಲೋಮೀಟರ್‌ಗಟ್ಟಲೆ ಹರಡಿರುವ ನದಿಪಾತ್ರದಲ್ಲಿ ಒಂದೆಡೆ ಮಾತ್ರ ಸಣ್ಣ ತೊರೆಯಂತೆ ನೀರು ಹರಿಯುತ್ತಿದೆ. ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗಿದ್ದ ನೀರೂ ಸಂಪೂರ್ಣ ಬರಿದಾಗಿದೆ. ಪರಿಣಾಮ ಮೀನುಗಳು ಸಾಮೂಹಿಕವಾಗಿ ಸಾವನ್ನಪ್ಪಿದ್ದು, ನದಿತಟದಲ್ಲಿ ದುರ್ವಾಸನೆ ಹರಡಿದೆ.

ಮುಂಗಾರು ಆರಂಭದಲ್ಲಿ ಸುರಿದ ಒಂದೆರಡು ಉತ್ತಮ ಮಳೆಯನ್ನು ನಂಬಿ ರೈತರು ಭತ್ತ, ಹತ್ತಿ, ತೊಗರಿ, ಮೆಕ್ಕೆಜೋಳ, ಸಜ್ಜೆ ಹಾಗೂ ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ನಂತರ ಮಳೆ ಸಂಪೂರ್ಣ ಕೈಕೊಟ್ಟಿರುವುದರಿಂದ ಬೆಳೆಗಳು ಒಣಗುವ ಹಂತ ತಲುಪಿವೆ. ಭತ್ತದ ನಾಟಿಗಾಗಿ ಸಸಿಮಡಿ ಸಿದ್ಧಪಡಿಸಿರುವ ರೈತರು ನೀರಿಲ್ಲದೆ ಕಂಗಾಲಾಗಿದ್ದಾರೆ.

ಸಿರುಗುಪ್ಪ ತಾಲೂಕಿನಲ್ಲಿ ಜೂನ್-ಜುಲೈ ಅವಧಿಯಲ್ಲಿ ವಾಡಿಕೆಯ 28 ಮಿ.ಮೀ. ಮಳೆಯ ಬದಲಿಗೆ ಕೇವಲ 4.8 ಮಿ.ಮೀ. ಮಳೆಯಾಗಿದ್ದು, ಶೇ.83ರಷ್ಟು ಮಳೆ ಕೊರತೆ ದಾಖಲಾಗಿದೆ. ತೆಕ್ಕಲಕೋಟೆ ಮತ್ತು ಕರೂರು ಹೋಬಳಿಗಳಲ್ಲಿಯೂ ಮಳೆ ಕೊರತೆ ಕಂಡುಬಂದಿದೆ. ಆಹಾರ ಧಾನ್ಯಗಳ ಬಿತ್ತನೆ ಗುರಿಯ ಪೈಕಿ ಕೇವಲ ಶೇ.15ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿರುವುದು ಕೃಷಿ ಸಂಕಷ್ಟದ ತೀವ್ರತೆಯನ್ನು ಬಿಂಬಿಸುತ್ತಿದೆ.

ಮಳೆ ಕೊರತೆ, ನದಿಯಲ್ಲಿ ನೀರಿನ ಅಭಾವ ಹಾಗೂ ಬೆಳೆಗಳು ಒಣಗುತ್ತಿರುವುದು ಸಿರುಗುಪ್ಪ ಭಾಗದಲ್ಲಿ ಬರದ ಪರಿಸ್ಥಿತಿ ಗಂಭೀರವಾಗುತ್ತಿರುವ ಮುನ್ಸೂಚನೆಯಾಗಿದೆ. ಸರಕಾರ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

37,403 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಗೆ ಗುರಿ ಹೊಂದಲಾಗಿದ್ದು, ಕೇವಲ 2984 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ತೊಗರಿ 2,233 ಹೆ., ಸಜ್ಜೆ 1,389 ಹೆ., ಮೆಕ್ಕೆಜೋಳ 2,785 ಹೆ., ಆಹಾರ ಧಾನ್ಯಗಳು 45,066 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಕ್ರಮವಾಗಿ ತೊಗರಿ 1,552, ಸಜ್ಜೆ 537, ಮೆಕ್ಕೆಜೋಳ 1,552 ಹಾಗೂ ಆಹಾರ ಧಾನ್ಯಗಳು ಕೇವಲ 6,596 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ಮಳೆ ಕೊರತೆಯ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿಯನ್ನು ತಾತ್ಕಾಲಿಕವಾಗಿ ಮುಂದೂಡಬೇಕು. ನೀರಿನ ಲಭ್ಯತೆ ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕು. ಹನಿ ನೀರಾವರಿ ಹಾಗೂ ಸ್ಪ್ರಿಂಕ್ಲರ್ ಪದ್ಧತಿಯ ಮೂಲಕ ಮಿತವಾಗಿ ನೀರು ಬಳಸುವುದು ಅಗತ್ಯ.

-ಮಂಜುನಾಥ ರೆಡ್ಡಿ

ಕೃಷಿ ಸಹಾಯಕ ನಿರ್ದೇಶಕ, ಸಿರುಗುಪ್ಪ

ಸಕಾಲದಲ್ಲಿ ಮುಂಗಾರು ಮಳೆಯಾಗದಿದ್ದರೂ ತುಂಗಭದ್ರಾ ನದಿಪಾತ್ರದ ರೈತರು ಭತ್ತದ ಸಸಿಮಡಿ ಹಾಕಿ ಸಾಕಷ್ಟು ಖರ್ಚು ಮಾಡಿದ್ದಾರೆ. ಈಗ ಮಳೆಯೂ ಇಲ್ಲ, ನದಿಯಲ್ಲೂ ನೀರಿಲ್ಲ. ಆದ್ದರಿಂದ ಸರಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕು.

-ಶಿವಕುಮಾರ, ನಿಟ್ಟೂರು ರೈತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News