ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಹಿರಿಯೂರು–ಜೇವರ್ಗಿ ರಾಷ್ಟ್ರೀಯ ಹೆದ್ದಾರಿ
ಅತ್ಯಾಧುನಿಕ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ ಅಧಿಸೂಚನೆ
ಸಿಂಧನೂರು: ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕವನ್ನು ಬೆಸೆಯುವ ಪ್ರಮುಖ ರಸ್ತೆ ಸಂಪರ್ಕವಾಗಿರುವ ಜೇವರ್ಗಿ-ಹಿರಿಯೂರುವರೆಗಿನ ರಾಷ್ಟ್ರೀಯ ಹೆದ್ದಾರಿ-150 ಇದೀಗ ಹೈಟೆಕ್ ಸ್ಪರ್ಶ ಪಡೆಯಲು ಸಜ್ಜಾಗಿದೆ. ಸಿಂಧನೂರು ಮಾರ್ಗವಾಗಿ ಹಾದು ಹೋಗಿರುವ ಈ ಪ್ರಮುಖ ರಸ್ತೆಯು ಶೀಘ್ರದಲ್ಲೇ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಹೆದ್ದಾರಿಯಾಗಿ ಮೇಲ್ದರ್ಜೆಗೇರಲಿದೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ಈ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಕುರಿತು ಭಾರತ ಸರಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಳೆದ ಎ. 30ರಂದೇ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧೀನದಲ್ಲಿದ್ದ ಈ ರಸ್ತೆಯನ್ನು ಇದೀಗ ಅಭಿವೃದ್ಧಿ ದೃಷ್ಟಿಯಿಂದ ನೇರವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಹಸ್ತಾಂತರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜೇವರ್ಗಿ ಚಾಮರಾಜನಗರ ಸುಮಾರು 950 ಕಿ.ಮೀ ಉದ್ದದ 150 (ಎ) ರಾಷ್ಟ್ರೀಯ ಹೆದ್ದಾರಿಯಲ್ಲಿ ಜೇವರ್ಗಿಯಿಂದ ಬಳ್ಳಾರಿಯವರೆಗೆ ಸುಮಾರು 250 ಕಿ.ಮೀ ದ್ವಿಪಥ ರಸ್ತೆಯಿದ್ದು, ಕಳೆದ ಎರಡು ದಶಕಗಳಿಂದ ಅಭಿವೃದ್ದಿ ಕಾಣದೇ ಜಿಲ್ಲಾ ಹೆದ್ದಾರಿಗಿಂತಲೂ ಕೆಳಮಟ್ಟದಲ್ಲಿತ್ತು. ಈ ರಸ್ತೆ ಚತುಸ್ಪಥ ರಸ್ತೆಯಾಗಿ ಅಭಿವೃದ್ಧಿಗೊಳಿಸುವಂತೆ ಹಿಂದಿನ ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ರಾಯಚೂರು ಸಂಸದರಾಗಿದ್ದ ಅಮರೇಶ್ವರ ನಾಯಕ ಪತ್ರಬರೆದು, ರಾಜ್ಯ ಸರಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮಾಡುವಲ್ಲಿ ಶ್ರಮಿಸಿದ್ದರು. ಈಗಿನ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ, ರಾಯಚೂರು ಸಂಸದ ಕುಮಾರ ನಾಯಕ್ ಶ್ರಮಿಸಿ ಪ್ರಾಧಿಕಾರದ ವ್ಯಾಪ್ತಿಗೆ ವರ್ಗಾಯಿಸಲು ಶ್ರಮಿಸಿದ್ದಾರೆ.
ಪ್ರಾಧಿಕಾರದ ತೆಕ್ಕೆಗೆ: ಹೆದ್ದಾರಿ ವಿಭಾಗದ ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಮಸ್ಕಿ ಮತ್ತು ಸಿಂಧನೂರು ಬೈಪಾಸ್ ರಸ್ತೆಗಳನ್ನು ಒಳಗೊಂಡಂತೆ ಒಟ್ಟು 409 ಕಿಲೋಮೀಟರ್ ಉದ್ದದ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಇದುವರೆಗೆ ಕೇವಲ ನಿರ್ವಹಣೆಗಷ್ಟೇ ಸೀಮಿತವಾಗಿದ್ದ ಈ ಮಾರ್ಗವು, ಪ್ರಾಧಿಕಾರದ ಆಡಳಿತಕ್ಕೆ ಒಳಪಡುವುದರಿಂದ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆದುಕೊಳ್ಳಲಿವೆ. ರಾಷ್ಟ್ರೀಯ ಹೆದ್ದಾರಿ 150 ಅಧಿಕೃತವಾಗಿ ಹೆದ್ದಾರಿಯಾಗಿ ಪರಿವರ್ತನೆಗೊಂಡರೆ, ಜೇವರ್ಗಿ-ಹಿರಿಯೂರು ಮಾರ್ಗ ಸಂಪೂರ್ಣವಾಗಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಗೊಳ್ಳಲಿದೆ ಎನ್ನುವ ಆಶಾಭಾವನೆ ಮೂಡಿದೆ.
ಹೈಟೆಕ್ ತಂತ್ರಜ್ಞಾನ: ಹೆದ್ದಾರಿಯೆಂದರೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಂಡು ಸಂಚಾರ ದಟ್ಟಣೆ ನಿರ್ವಹಣೆ, ಅಪಘಾತಗಳ ತಡೆಗೆ ಸ್ಮಾರ್ಟ್ ಕ್ಯಾಮೆರಾಗಳ ಅಳವಡಿಕೆ, ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಶನ್ ಸಿಸ್ಟಮ್ ಮತ್ತು ವೇಗದ ಮಿತಿ ನಿಯಂತ್ರಣದಂತಹ ಹೈಟೆಕ್ ಸೌಲಭ್ಯಗಳನ್ನು ಈ ರಸ್ತೆ ಹೊಂದಿರಲಿದೆ. ಇದರಿಂದ ಪ್ರಯಾಣದ ಅವಧಿ ಕಡಿತಗೊಳ್ಳುವುದರ ಜೊತೆಗೆ, ಪ್ರಯಾಣಿಕರ ಸುರಕ್ಷತೆಯೂ ಹೆಚ್ಚಾಗಲಿದೆ. ರಾಷ್ಟ್ರೀಯ ಹೆದ್ದಾರಿ 150 ಇದೀಗ ಮೇಲ್ದರ್ಜೆಗೇರುತ್ತಿರುವ ಹಿನ್ನೆಲೆಯಲ್ಲಿ, ಈ ಸಂಪೂರ್ಣ ಮಾರ್ಗವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಲಿದೆ. ಕೇವಲ ಒಂದು ವಾರದೊಳಗೆ ಈ ರಸ್ತೆಯನ್ನು ಪ್ರಾಧಿಕಾರಕ್ಕೆ ಅಧಿಕೃತವಾಗಿ ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೆದ್ದಾರಿ ಇಲಾಖೆಯ ವಿಜಯಪುರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ವಿಜಯ ಪಾಟೀಲ್ ಮಾಹಿತಿ ನೀಡಿದ್ದಾರೆ.
ಒಟ್ಟಾರೆಯಾಗಿ ಜೇವರ್ಗಿ-ಹಿರಿಯೂರು ಹೆದ್ದಾರಿಯ ಈ ಬೃಹತ್ ಬದಲಾವಣೆಯು ಕೇವಲ ಸಾರಿಗೆ ವ್ಯವಸ್ಥೆಯನ್ನಷ್ಟೇ ಅಲ್ಲದೆ, ಈ ಭಾಗದ ಆರ್ಥಿಕ, ಕೃಷಿ ಮತ್ತು ವಾಣಿಜ್ಯ ಚಟುವಟಿಕೆಗಳಿಗೂ ದೊಡ್ಡ ಮಟ್ಟದ ಉತ್ತೇಜನ ನೀಡಲಿದೆ ಎಂದು ಸ್ಥಳೀಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗಂಗಾವತಿ, ಕುಷ್ಟಗಿ ರಸ್ತೆ ಅಭಿವೃದ್ಧಿಯಾಗಲಿ
ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲಿ ರಾಯಚೂರು-ಸಿಂಧನೂರು ಚತುಸ್ಪಥ ಅಭಿವೃದ್ದಿ ಕೆಲಸ ಭರದಿಂದ ಸಾಗಿದೆ. ಸಿಂಧನೂರು-ಗಂಗಾವತಿ-ಬೂದಗುಂಪಾ ರಾಷ್ಟ್ರೀಯ ಹೆದ್ದಾರಿಯೂ ವಾಹನಗಳ ಸಂದಣಿಯಿಂದ ತುಂಬಿ ತುಳುಕುತ್ತಿದ್ದು, ಈ ರಸ್ತೆ ಹಾಗೂ ಸಿಂಧನೂರು-ಕುಷ್ಟಗಿ ರಸ್ತೆಯೂ ಚತುಸ್ಪರ್ಥ ರಸ್ತೆಯಾಗಿ ಅಭಿವೃದ್ಧಇಯಾಗುವ ಅಗತ್ಯವಿದೆ. ಈ ಬಗ್ಗೆ ಈ ಭಾಗದ ಜನಪ್ರತಿನಿಧಿಗಳ ಶ್ರಮ ಅಗತ್ಯವಾಗಿದೆ.
ರಾಷ್ಟ್ರೀಯ ಹೆದ್ದಾರಿ 150 (ಎ)ಯನ್ನು ಹೈಟೆಕ್ ಹೆದ್ದಾರಿಯಾಗಿ ಮಾರ್ಪಾಡು ಮಾಡಿ, ಅಭಿವೃದ್ಧಿಗೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಎಐ ರಸ್ತೆಯಾಗಿ ಅಭಿವೃದ್ಧಿಯಾದರೆ ಈ ಭಾಗದ ಕೃಷಿ, ಆರ್ಥಿಕತೆ, ವಾಣಿಜ್ಯ ಬೆಳವಣಿಗೆಗೆ ಬಹುದೊಡ್ಡ ಉತ್ತೇಜನ ನೀಡಲಿದೆ. ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳಲು ಕೇಂದ್ರ ಸರಕಾರದ ಮೇಲೆ ನಮ್ಮ ಭಾಗದ ಸಂಸದರು ಒತ್ತಡ ಹಾಕಲಿ.
-ರಾಜಶೇಖರ ಪಾಟೀಲ್,
ರಾಜ್ಯ ಮಾಜಿ ಉಪಾಧ್ಯಕ್ಷ, ಎಪಿಎಂಸಿ ಬೆಂಗಳೂರು