ಕಬ್ಬಿನಾಲೆ ಮಳೆ ನಡಿಗೆಗೆ ಪರಿಸರ ಹೋರಾಟಗಾರರ ತೀವ್ರ ವಿರೋಧ
ಬೆಂಗಳೂರಿನ ಸಂಸ್ಥೆಯ ಆ.1ರ ರೈನಥಾನ್ ವಿವಾದ
ಉಡುಪಿ: ‘ಮಳೆಯಲ್ಲಿ ನಡಿಗೆ’ ಎಂಬ ರಮ್ಯ ಹಾಗೂ ರೋಮ್ಯಾಂಟಿಕ್ ಪರಿಕಲ್ಪನೆ ಇದೀಗ ಉಡುಪಿ ಜಿಲ್ಲೆಯಲ್ಲಿ ವಿವಾದದ ಕೇಂದ್ರ ಬಿಂದುವಾಗಿದೆ. ಕರಾವಳಿ ಹಾಗೂ ಮಲೆನಾಡಿ ನವರನ್ನು ಹೊರತು ಪಡಿಸಿ ಉಳಿದ ಕಡೆಗಳ ನಗರವಾಸಿಗಳು ‘ಮಳೆ ನಡಿಗೆ’ ಎಂಬ ಕಲ್ಪನೆಯಿಂದ ರೋಮಾಂಚನಗೊಳ್ಳಬಹುದಾದರೂ, ಬೆಂಗಳೂರಿನ ಖಾಸಗಿ ಸಂಘಟನೆಯೊಂದು ಭಾಗವಹಿಸುವ ಪ್ರತಿಯೊಬ್ಬರಿಗೂ 1,600ರೂ.ನಿಂದ ರೂ.4,100 ವರೆಗೆ ಶುಲ್ಕ ನಿಗದಿಪಡಿಸಿ ಕಬ್ಬಿನಾಲೆಯ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅನಧಿಕೃತವಾಗಿ ಆಗಸ್ಟ್ 1ರಂದು ಆಯೋಜಿಸಿರುವ ಕಬ್ಬಿನಾಲೆ ರೈನಥಾನ್ಗೆ ಪರಿಸರ ಹೋರಾಟಗಾರರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.
ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಪಂ ವ್ಯಾಪ್ತಿ ಯಲ್ಲಿ ಬರುವ ಕಬ್ಬಿನಾಲೆ, ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ಸೋಮೇಶ್ವರ ವನ್ಯಜೀವಿ ಧಾಮದಲ್ಲಿ ಬರುವ ಪರಿಸರ ಸೂಕ್ಷ್ಮವಾದ ಸಮೃದ್ಧ ಮಳೆಕಾಡು ಪ್ರದೇಶ. ಇದು ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರಾಗಿದೆ. ಇದು ದಟ್ಟವಾದ ಮಳೆಕಾಡು, ನೈಸರ್ಗಿಕ ಜಲಪಾತ ಗಳು, ತೊರೆಗಳು, ಅಪರೂಪದ ವನ್ಯಜೀವಿ ಗಳಿಗೆ ಆವಾಸಸ್ಥಾನವಾಗಿದೆ. ಪಶ್ಚಿಮ ಘಟ್ಟದ ಇಲ್ಲಿನ ಸೂಕ್ಷ್ಮಪರಿಸರದ ಕಾರಣಕ್ಕಾಗಿಯೇ ಇದನ್ನು ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಸೇರಿಸಿ ವಿಶೇಷ ಮುತುವರ್ಜಿಯಿಂದ ಸಂರಕ್ಷಣೆ ಮಾಡಲಾಗುತ್ತಿದೆ.
ಆದ್ದರಿಂದಲೇ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದು ಸಂಬಂಧಿಸಿದ ಯಾವುದೇ ಇಲಾಖೆಗಳಿಂದ, ವನ್ಯಜೀವಿ ವಿಭಾಗದಿಂದ, ಅರಣ್ಯ ಇಲಾಖೆಯಿಂದ, ಸ್ಥಳೀಯ ಆಡಳಿತ (ಗ್ರಾಪಂ)ದಿಂದ, ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆಯದೇ ‘ರೈನಥಾನ್’ ಎಂಬ ಪರಿಸರ ಹಾಗೂ ವನ್ಯಜೀವಿ ಕೇಂದ್ರಿತ ಆಕರ್ಷಣೆಯ ವಿವಿಧ ಚಟುವಟಿಕೆಗಳನ್ನು ಈ ಮಳೆಕಾಡು ಪ್ರದೇಶದಲ್ಲಿ ಹಮ್ಮಿಕೊಂಡಿರುವುದು ಪರಿಸರಾಸಕ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು ಮಲ್ಲೇಶ್ವರಂನ ಕಿಶೋರ್ ಪಟವರ್ಧನ್ ಎಂಬವರು 2011ರಲ್ಲಿ ಪ್ರಾರಂಭಿ ಸಿರುವ ಖಾಸಗಿ ಸಂಸ್ಥೆ ಈ ರೈನಥಾನ್ನ್ನು ಆಗಸ್ಟ್ 1ರಂದು ಆಯೋಜಿಸಿದೆ. ಈ ಸಂಘಟನೆ ಅಂದಿ ನಿಂದ ಇದುವರೆಗೆ ಇಂಥ 18 ಮಳೆ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ತನ್ನ ವೆಬ್ಸೈಟ್ನಲ್ಲಿ ಹೇಳಿಕೊಂಡಿದೆ. 2024ರಲ್ಲಿ ದ.ಕ.ದ ನೆರಿಯದ ಬಳಿ ಹಾಗೂ 2026ರ ಜೂನ್ 27ರಂದು ತೀರ್ಥಹಳ್ಳಿ ಬಳಿಯ ಹುರುಳಿಯಲ್ಲಿ ಇಂಥ ಮಳೆ ನಡಿಗೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಾಗಿ ಹೇಳಿಕೊಂಡಿದೆ. ಇದರಲ್ಲಿ ರಾಜ್ಯದ ‘ನೂರಾರು’ ಪರಿಸರಾಸಕ್ತರು ವಯಸ್ಸಿನ ನಿರ್ಬಂಧಗಳಿಲ್ಲದೇ ಭಾಗವಹಿಸಿದ್ದಾರೆ ಎಂದೂ ಹೇಳಿದೆ.
ಆದರೆ ಈ ಬಾರಿ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರದಲ್ಲಿ ಯಾವುದೇ ‘ಅನುಮತಿ’
ಪಡೆಯದೇ ಆಯೋಜಿಸಿರುವ ಕಬ್ಬಿನಾಲೆ ಮಳೆ
ನಡಿಗೆ ಪರಿಸರ ಹೋರಾಟಗಾರರ ಗಮನಕ್ಕೆ ಬಂದು ವಿವಾದಕ್ಕೊಳಗಾಗಿದೆ. ಸಂಸ್ಥೆ ಈ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಸಿದ ವ್ಯಾಪಕ ಪ್ರಚಾರ ಅದಕ್ಕೀಗ ಮುಳುವಾಗಿದೆ. ನೂರಾರು ಮಂದಿ ಈ ಬಾರಿ ಭಾಗವಹಿಸುವ ಸಾಧ್ಯತೆ ಇದ್ದು, ಇದಕ್ಕಾಗಿ ಭಾರೀ ಮೊತ್ತದ ಶುಲ್ಕ ಸಂಗ್ರಹಿಸಿರುವ ಆರೋಪವೂ ಹೋರಾಟಗಾರರ ಕಣ್ಣು ಕೆಂಪಾಗಿಸಿದೆ.
‘ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಇದೊಂದು ವಾಣಿಜ್ಯಿಕ ಉದ್ದೇಶದ ಚಟುವಟಿಕೆ ಎಂಬುದು ಇವರು ನೀಡಿದ ಜಾಹೀರಾತುಗಳಿಂದ ಸ್ಪಷ್ಟವಾಗಿದೆ. ವಾರಾಂತ್ಯದ ಮನರಂಜನೆ ಇದರ ಉದ್ದೇಶ ಎಂಬುದೂ ಗೊತ್ತಾಗುತ್ತದೆ. ಇದರಿಂದ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಗೆ ಯಾವುದೇ ಉಪಯೋಗವಿಲ್ಲ. ಜೊತೆಗೆ ಮನುಷ್ಯರ ಗುಂಪು ಕಟ್ಟಿಕೊಂಡು ಕಾಡಿಗೆ ಹೋಗುವುದು ಅಥವಾ ಕಾಡಂಚಿಗೆ ತೆರಳುವುದು ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮ ಹೇಗಾಗುತ್ತದೆ?’ ಎಂದು ಪ್ರಶ್ನಿಸುತ್ತಾರೆ ಪಶ್ಚಿಮಘಟ್ಟ ಪರಿಸರ ಸಂರಕ್ಷಣೆಯಲ್ಲಿ ವಿಶೇಷ ಮುತುವರ್ಜಿಯಿಂದ ಕೆಲಸ ಮಾಡುತ್ತಿರುವ ಪರಿಸರ ಹೋರಾಟಗಾರ ಮೂಡಿಗೆರೆಯ ನಾಗರಾಜ ಕೂವೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಸ್ಥೆಯ ಅಬ್ಬರದ ಪ್ರಚಾರವನ್ನು ಗಮನಿಸಿ ತಕ್ಷಣ ಕಾರ್ಯಪ್ರವೃತ್ತರಾದ ನಾಗರಾಜ ಕೂವೆ, ಇದರಿಂದ ಪರಿಸರಕ್ಕೆ ಹಾನಿಯೇ ಹೊರತು ಯಾವುದೇ ಉಪಯೋಗವಿಲ್ಲ ಎಂಬುದನ್ನು ವಿವರಿಸಿ, ಮಳೆ ನಡಿಗೆ ಕಾರ್ಯಕ್ರಮವನ್ನು ನಿಲ್ಲಿಸಿ, ಆಯೋಜಕರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕುದುರೆಮುಖ ವನ್ಯಜೀವಿ ವಿಭಾಗ, ಅರಣ್ಯ ಇಲಾಖೆ, ಮುದ್ರಾಡಿ ಗ್ರಾಪಂನ ಪಿಡಿಒ, ಹೆಬ್ರಿ ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದರಿಂದ ನಾಡಿನ ಅನೇಕ ಕಡೆ 18 ಬಾರಿ ಯಶಸ್ವಿಯಾಗಿ ನಡೆದ ಮಳೆ ನಡಿಗೆ ಹೆಬ್ರಿಯಲ್ಲಿ ವಿವಾದಕ್ಕೆ ಸಿಲುಕಿಕೊಂಡು ಸಾರ್ವಜನಿಕರ ಅವಗಾಹನೆಗೆ ಬರುವಂತಾಯಿತು.
ಪರಿಸರ ಸೂಕ್ಷ್ಮಪ್ರದೇಶದಲ್ಲಿ ಯಾವುದೇ ಕಾರ್ಯಕ್ರಮ ನಡೆಸುವ ಮೊದಲು ‘ಪರಿಸರ ಸೂಕ್ಷ್ಮ ಪ್ರದೇಶ ಮೇಲ್ವಿಚಾರಣಾ ಸಮಿತಿ’ಯಿಂದ ಲಿಖಿತ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಆಯೋಜಕರು ಈ ಸಮಿತಿ ಬಿಡಿ, ಗ್ರಾಪಂ, ಪೊಲೀಸ್ ಠಾಣೆ, ಅರಣ್ಯ ಇಲಾಖೆ ಯಾರೊಬ್ಬರ ಅನುಮತಿಯನ್ನೂ ಪಡೆದಿಲ್ಲ. ಇದೀಗ ವಿವಾದಕ್ಕೊಳಗಾದ ಬಳಿಕ ಅಲ್ಲಿಗೆಲ್ಲಾ ದೂರವಾಣಿ ಕರೆ ಮಾಡಿ ಅನುಮತಿ ಕೇಳುತಿ ದ್ದಾರೆ ಎಂದು ಗೊತ್ತಾಗಿದೆ ಎಂದು ಅವರು ಆರೋಪಿಸಿದರು.
ವನ್ಯಜೀವಿ ವಿಭಾಗದಿಂದ ಅನುಮತಿ ಇಲ್ಲ: ವನ್ಯಜೀವಿ ವಿಭಾಗದಿಂದ ಪೂರ್ವಾನುಮತಿ ಯನ್ನೇನೂ ಅವರು ಪಡೆದಿಲ್ಲ. ಆದರೆ ಕರೆ ಮಾಡಿದ್ದಾರೆ. ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ನಾವು ಖಾಸಗಿಯವರ ಜಾಗದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದ್ದೇವೆ ಎಂದು ಕಾರ್ಕಳ ವನ್ಯಜೀವಿ ವಿಭಾಗದ ಆರ್ಎಫ್ಒ ಸುಬ್ರಹ್ಮಣ್ಯ ಆಚಾರ್ ತಿಳಿಸಿದರು.
ಇದೇ ಮಾತನ್ನು ಹೆಬ್ರಿ ಠಾಣಾಧಿಕಾರಿಗಳು ಪುನರುಚ್ಛರಿಸಿದರು. ನಮ್ಮಲ್ಲಿ ಅನುಮತಿಗೆ ಮೊದಲು ವನ್ಯಜೀವಿ ವಿಭಾಗ, ಅರಣ್ಯ ಇಲಾಖೆ ಹಾಗೂ ಮುದ್ರಾಡಿ ಗ್ರಾಪಂನಿಂದ ಪರವಾನಿಗೆ ಪಡೆದುಕೊಂಡು ಬನ್ನಿ ಎಂದಿದ್ದೇವೆ. ತಾವು ಖಾಸಗಿಯವರ ಜಾಗದಲ್ಲಿ ಕಾರ್ಯಕ್ರಮ ಮಾಡುತ್ತಿರುವುದಾಗಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಈ ಕುರಿತು ಮುದ್ರಾಡಿ ಗ್ರಾಪಂ ಪಿಡಿಒ ಸುಭಾಸ್ರನ್ನು ಸಂಪರ್ಕಿಸಿದಾಗ, ಆಯೋಜಕರು ಇಂದು ತಮ್ಮನ್ನು ಸಂಪರ್ಕಿಸಿದ್ದು, ವನ್ಯಜೀವಿ ವಲಯ ಹಾಗೂ ಅರಣ್ಯ ವಲಯ ವ್ಯಾಪ್ತಿಯಲ್ಲಿ ಇಂಥ ಕಾರ್ಯಕ್ರಮ ಆಯೋಜನೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ಖಾಸಗಿಯವರ ಮನೆಯಲ್ಲಿ, ಗದ್ದೆಯಲ್ಲಿ ಕಾರ್ಯಕ್ರಮ ಮಾಡುವುದಾದರೆ ಅದಕ್ಕೆ ನಮ್ಮ ವಿರೋಧವಿಲ್ಲ ಎಂದು ತಿಳಿಸಿದ್ದೇನೆ ಎಂದರು.
ಪರಿಸರ ಸೂಕ್ಷ್ಮ ಪ್ರದೇಶದ ಪಾವಿತ್ರ್ಯತೆ ಉಳಿವಿನ ದೃಷ್ಟಿಯಿಂದ ಸಂಬಂಧಿಸಿದ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಗ್ರಾಮ ಪಂಚಾಯತ್ ಕಬ್ಬಿನಾಲೆ ರೈನಥಾನ್ಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಕಾಡಿನಲ್ಲಿರುವ ಹಲವು ಜೀವಿಗಳಿಗೆ ಮಳೆಗಾಲ ಸಂತಾನೋತ್ಪತ್ತಿಯ ಕಾಲ. ಇಂಥ ಸಮಯದಲ್ಲಿ ನೂರಾರು ಮಂದಿ ಕಾಡಿನಲ್ಲಿ ಗದ್ದಲ ಎಬ್ಬಿಸುವುದು, ಪ್ಲಾಸ್ಟಿಕ್ ತ್ಯಾಜ್ಯ ಎಸೆದು ಹೋಗುವುದು. ಇದರ ಪರಿಣಾಮವನ್ನು ನಾವು ಈಗಾಗಲೇ ಅಲ್ಲಿ ನೋಡಿದ್ದೇವೆ. ಅಲ್ಲದೇ ಮಳೆಗಾಲದಲ್ಲಿ ಜಲಪಾತ ಹಾಗೂ ನೀರಿರುವ ಪ್ರದೇಶಕ್ಕೆ ಹೋಗುವುದು ಅಪಾಯ ಕೂಡಾ. ಇವರ ಮಳೆ ನಡಿಗೆ ಕಾರ್ಯಕ್ರಮ ಪರಿಸರಕ್ಕೆ ಕಂಟಕವಾಗುವ ಅಪಾಯವೇ ಹೆಚ್ಚು.
-ನಾಗರಾಜ್ ಕೂವೆ,
ಪರಿಸರ ಹೋರಾಟಗಾರ
ವಿವಾದದ ಬಳಿಕ ಕಾರ್ಯಕ್ರಮ ಬದಲು?
ಕಬ್ಬಿನಾಲೆ ರೈನಥಾನ್ ವಿವಾದಕ್ಕೊಳಗಾದ ಬಳಿಕ ಆಯೋಜಕರು ಆ.1ರ ಕಾರ್ಯಕ್ರಮದ ರೂಪುರೇಷೆಯನ್ನು ಬದಲಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಮೊದಲು ಕಾಡಿನೊಳಗೆ ಮಳೆಯಲ್ಲಿ 15ರಿಂದ 20ಕಿ.ಮೀ. ನಡಿಗೆ ಎಂದು ಪ್ರಚಾರದಲ್ಲಿ ಹೇಳಲಾಗಿತ್ತು. ಇದಕ್ಕಾಗಿ ಯಾರು ಸಹ ಕೊಡೆ, ರೈನ್ಕೋಟ್ ಸೇರಿದಂತೆ ಮಳೆಯಿಂದ ರಕ್ಷಣೆಗೆ ಏನನ್ನೂ ತರಬಾರದು, ಮಳೆಯಲ್ಲೇ ನೆನೆಯುತ್ತಾ ಸಾಗಬೇಕು ಎಂದು ತಿಳಿಸಲಾಗಿತ್ತು.
ಇದೀಗ ಕಬ್ಬಿನಾಲೆಯಲ್ಲಿ ದೇವಸ್ಥಾನ, ಶಾಲೆಯಲ್ಲಿ ವಿವಿಧ ಕಾರ್ಯಕ್ರಮ, ಖಾಸಗಿಯವರ ಗದ್ದೆಯಲ್ಲಿ ನೇಜಿ ನೆಡುವ ಹಾಗೂ ಇತರ ಚಟುವಟಿಕೆಗಳ ನ್ನು ನಡೆಸುವ ಸೂಚನೆ ನೀಡಿದ್ದಾರೆ ಎಂದು ಕಾರ್ಕಳ ಆರ್ಎಫ್ಒ ಹಾಗೂ ಹೆಬ್ರಿ ಠಾಣಾಧಿಕಾರಿಗಳು ತಿಳಿಸಿದ್ದಾರೆ. ಖಾಸಗಿಯವರ ಜಾಗದಲ್ಲಿ ಕಾರ್ಯಕ್ರಮ ಮಾಡಿದರೆ ನಮ್ಮ ಅಭ್ಯಂತರವಿಲ್ಲ ಎಂದವರು ಹೇಳಿದ್ದಾರೆ.