×
Ad

ರಿಫಾರ್ಮ್ ಎಕ್ಸ್‌ಪ್ರೆಸ್ ಹೋಗಿ ರಿಪೇರಿ ಎಕ್ಸ್‌ಪ್ರೆಸ್ ಆಯ್ತು!

Update: 2026-02-02 11:00 IST

ಮೊನ್ನೆ ಬಜೆಟ್ ಅಧಿವೇಶನದ ಆರಂಭದಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದ ಪ್ರಧಾನಮಂತ್ರಿಯವರು ‘‘ರಿಫಾರ್ಮ್’’ ‘‘ಪರ್‌ಫಾರ್ಮ್’’ ಮತ್ತು ‘‘ಟ್ರಾನ್ಸ್ ಫಾರ್ಮ್’’ ಎಂಬ ಮಂತ್ರವೇ ತನ್ನ ಸರ್ಕಾರದ ಹೆಗ್ಗುರುತಾಗಿದ್ದು, ದೇಶ ‘‘ರಿಫಾರ್ಮ್ ಎಕ್ಸ್‌ಪ್ರೆಸ್’’ ಹತ್ತಿ ವೇಗವಾಗಿ ಸಾಗತೊಡಗಿದೆ ಎಂದು ಹೇಳಿದ್ದರು. ದೇಶವೀಗ ದೀರ್ಘಕಾಲಿಕ ಸಮಸ್ಯೆಗಳ ಬದಲು ದೀರ್ಘಕಾಲಿಕ ಪರಿಹಾರಗಳತ್ತ ಸಾಗುತ್ತಿದೆ ಎಂದು ಅವರು ಅಂದು ಸೂಚ್ಯವಾಗಿ ಹೇಳಿದ್ದರು. (PM@ Shohbh MB:2219910)

ಪ್ರಧಾನಮಂತ್ರಿಯವರ ಆ ಮಾತುಗಳಲ್ಲಿ ಮೊದಲರ್ಧವನ್ನಷ್ಟೇ ಸ್ವೀಕರಿಸಿದ್ದ ಮಾಧ್ಯಮಗಳು, ಈ ಬಾರಿಯ ಬಜೆಟ್ ಮಹತ್ವದ ‘ರಿಫಾರ್ಮ್’ಗಳನ್ನು ತರ ಬಹುದು ಎಂಬ ನಿರೀಕ್ಷೆಗಳನ್ನು ಬಿತ್ತಿತ್ತು. ಆದರೆ ಹಣಕಾಸು ಸಚಿವರು ಮಂಡಿಸಿದ 2026-27ರ ಬಜೆಟ್ ಈಗಾಗಲೇ ಆಗಿರುವ ನೀತ್ಯಾತ್ಮಕ ತಪ್ಪುಗಳಿಗೆ ತಿದ್ದುಪಡಿ (ರಿಪೇರಿ) ಮಾಡುವ ಒಂದು ಅಸಹಾಯಕ, ವಿಫಲ ಪ್ರಯತ್ನದಂತೆ ಕಾಣಿಸಿದೆ.

2014ರಿಂದೀಚೆಗೆ, ತನ್ನ ಸಾಧನೆಯ ಹಾದಿಯಲ್ಲಿನ ವೈಫಲ್ಯಗಳಿಗೆಲ್ಲ ಒಂದಿಲ್ಲೊಂದು ಕಾರಣವನ್ನು ಬೆಟ್ಟು ಮಾಡುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಸರಕಾರಕ್ಕೆ ‘ನೋಟು ರದ್ಧತಿ’, ‘‘ಕೋವಿಡ್ ಜಗನ್ಮಾರಿ’’ಗಳ ಬಳಿಕ, ಈಗ ‘‘ಜಾಗತಿಕ ರಾಜಕೀಯ ಅಸ್ಥಿರತೆ ಮತ್ತು ಅಮೆರಿಕದ ತಾರಿಫ್ ದಾಳಿ’’ ಹೊಸ ಹೆಳೆಯಾಗಿ ಸಿಕ್ಕಿದೆ. ತಮ್ಮ ಪ್ರಯತ್ನಗಳನ್ನೆಲ್ಲ ತಾವು ಮಾಡಿದ್ದೇವೆ. ವೈಫಲ್ಯವೇನಿದ್ದರೂ ಬಾಹ್ಯ ಕಾರಣಗಳದು ಎಂದು ಈ ಬಾರಿಯ ಬಜೆಟ್ ಹೇಳಲೆತ್ನಿಸಿದೆ. ಆರ್ಥಿಕತೆಯನ್ನು ಬಾಹ್ಯ ಹೊಡೆತಗಳಿಂದ ರಕ್ಷಿಸಲು, ಆರ್ಥಿಕ ಬೆಳವಣಿಗೆಗೆ ಪೂರಕವಾದ ಹೂಡಿಕೆಗಳ ಜೊತೆ ಹಣಕಾಸಿನ ಶಿಸ್ತನ್ನು ಬೆಸೆದುಕೊಳ್ಳ ಬೇಕೆಂಬುದು ತನ್ನ ಇರಾದೆ ಎಂದು ಸರಕಾರ ತನ್ನ ಬಜೆಟ್ ದಾಖಲೆಗಳ ಭಾಗವಾಗಿರುವ ಹಣಕಾಸಿನ ಹೊಣೆಗಾರಿಕೆ ಹೇಳಿಕೆಯಲ್ಲಿ ಹೇಳಿಕೊಂಡಿದೆ.

‘‘ರಿಫಾರ್ಮ್’’ ಪ್ರಕ್ರಿಯೆಯಲ್ಲಿ ದೇಶದ ಬಡ ಮತ್ತು ಕೆಳ ಮಧ್ಯಮವರ್ಗದ 70ಶೇ. ಜನರನ್ನು ಒಳಗೊಳ್ಳಬೇಕೆಂದರೆ, ಅವರ ದೈನಂದಿನ ಬದುಕಿನ ಮೇಲೆ ನೇರ ಪರಿಣಾಮ ಬೀರಬಲ್ಲ ಸಂಗತಿಗಳತ್ತ ಸರಕಾರ ಗಮನ ಹರಿಸಬೇಕೆಂಬ ನಿರೀಕ್ಷೆ ಸಹಜ. ಆದರೆ ಬಯೊಫಾರ್ಮಾ ಶಕ್ತಿ, ಸೆಮಿ ಕಂಡಕ್ಟರ್, ಇಲೆಕ್ಟ್ರಾನಿಕ್ ಬಿಡಿಭಾಗಗಳು, ಕೆಮಿಕಲ್ ಪಾರ್ಕ್, ಹೈಟೆಕ್ ಟೂಲ್‌ರೂಂ, ಕಟ್ಟಡ ನಿರ್ಮಾಣ ಯಂತ್ರೋಪಕರಣಗಳು, ಕಂಟೇನರ್ ಉತ್ಪಾದನೆ, ಹಡಗು ರಿಪೇರಿ, ಜಲಮಾರ್ಗ ಸುಧಾರಣೆ ಇತ್ಯಾದಿಗಳೆಲ್ಲವೂ ‘‘ಆನಿ ಉದ್ಯಮಗಳು’’ ಮತ್ತು ಮೇಲು ಮಧ್ಯಮ ವರ್ಗದತ್ತ ಗಮನ ಕೇಂದ್ರೀಕರಿಸಿರುವ ನವ ಉದ್ಯಮ ವಲಯಗಳು. ಅವುಗಳಲ್ಲಿ ಜವುಳಿ ಬಿಟ್ಟರೆ ಬೇರೆ ಕಾರ್ಮಿಕ ಸಾಂದ್ರತೆ ಇರುವ ವಲಯಗಳತ್ತ ಸರಕಾರ ಕಣ್ಣು ಹಾಯಿಸಿದಂತಿಲ್ಲ. ಕಸ್ಟಮ್ಸ್ ಸುಂಕ ರಿಯಾಯಿತಿಗಳು ದೊರೆತಿರುವ ಲೀಥಿಯಂ ಅಯಾನ್ ಬ್ಯಾಟರಿ, ನ್ಯೂಕ್ಲಿಯರ್ ವಿದ್ಯುತ್, ಕ್ರಿಟಿಕಲ್ ಮಿನರಲ್ಸ್, ಏವಿಯೇಷನ್, ಇಲೆಕ್ಟ್ರಾನಿಕ್ಸ್ ವಲಯಗಳೆಲ್ಲ ಸರಕಾರದ ಕ್ರೋನಿಗಳ ಹಿತಾಸಕ್ತಿ ನೆಟ್ಟಿರುವ ಉದ್ಯಮಗಳೇ ಆಗಿವೆ. ನಿರ್ಮಲಾ ಸೀತಾರಾಮನ್ ಅವರು ಈ ಬಜೆಟ್‌ನಲ್ಲಿ JTJC ಗಳಿಗೆ, ಜನಸಾಮಾನ್ಯರ ಕೌಶಲ ವೃದ್ಧಿಗೆ ಸಂಬಂಧಿಸಿದಂತೆ ನೀಡಿರುವ ಭರವಸೆಗಳು ಕೇವಲ ಬಾಯುಪಚಾರದಂತೆ ಕಾಣಿಸುತ್ತಿವೆ. ಸರಕಾರದ ಗಮನವೆಲ್ಲ ‘‘ನೇರ ತೆರಿಗೆದಾರರ’’ ಮತ್ತು ‘‘ಉದ್ಯಮಪತಿಗಳ’’ ಸಂತುಷ್ಟಿ ಆಗಿರುವುದರಿಂದ, ಅವರಿಗೆ ಅನುಕೂಲ ಆಗುವಂತೆ ಪೆನಾಲ್ಟಿಗಳಿಂದ ವಿನಾಯಿತಿ, ಶಿಕ್ಷೆಗಳನ್ನು ದಂಡಕ್ಕೆ ಸೀಮಿತಗೊಳಿಸುವುದು ಮತ್ತಿತರ ಹಲವು ಕ್ರಮಗಳನ್ನು ಪ್ರಕಟಿಸಲಾಗಿದೆ.

ಜನಸಾಮಾನ್ಯರು, ಎಳೆಯರು ‘ಎಂಪ್ಲಾಯೆಬಲ್’ ಅನ್ನಿಸಿಕೊಳ್ಳುವುದಕ್ಕೆ, ಅವರ ಕೌಶಲ ವೃದ್ಧಿ ಅನಿವಾರ್ಯ. ಅದು ಆಗಬೇಕೆಂದರೆ, ಶಿಕ್ಷಣ ಕ್ಷೇತ್ರದಲ್ಲಿ ಮೂಲಭೂತ ಬದಲಾವಣೆಗಳ ಅಗತ್ಯವಿದೆ. ಆ ಕಷ್ಟದ ಹಾದಿಯ ಬದಲು ಅಲೈಡ್ ಹೆಲ್ತ್ ಕೆಲಸ, ಹೋಂ ನರ್ಸಿಂಗ್, ಆನಿಮೇಶನ್, ಗೇಮಿಂಗ್, ಕಾಮಿಕ್ಸ್ ಕಾರ್ಮಿಕರು, ಪ್ರವಾಸೋದ್ಯಮ ಗೈಡ್‌ಗಳು, ಸ್ಕ್ರೂಡ್ರೈವರ್ ಕಾರ್ಮಿಕರು, ಇ-ಕಾಮರ್ಸ್, ಹೋಟೆಲು ಕಾರ್ಮಿಕರಂತಹ ಸುಲಭ ಹಾದಿಗಳಲ್ಲಿ ದೇಶದ ‘‘ಡೆಮೊಗ್ರಾಫಿಕ್ ಡಿವಿಡೆಂಡ್’’ಅನ್ನು ವ್ಯರ್ಥವಾಗಿ ಕಳೆದುಕೊಳ್ಳುವುದನ್ನು ಸರಕಾರ ಆರಿಸಿಕೊಂಡಂತಿದೆ. ಕೃಷಿಗೆ ಸಂಬಂಧಿಸಿದಂತೆಯೂ ತೆಂಗು, ಗೇರು, ಗಂಧ, ಡ್ರೈ ಫ್ರುಟ್ಸ್ ಇತ್ಯಾದಿ ವಾಣಿಜ್ಯ ಬೆಳೆಗಳತ್ತ ಗಮನ ಕೇಂದ್ರೀಕರಿಸುವಿಕೆಯಂತಹ ತೇಪೆಕಾರ್ಯಗಳತ್ತ ಹೆಚ್ಚು ಗಮನ ಹರಿಸಲಾಗಿದೆ. ಇಡಿಯ ಬಜೆಟ್‌ನಲ್ಲಿ ಸ್ವಾಗತಾರ್ಹವಾದ ಒಂದು ಅಂಶ ಎಂದರೆ, ಉತ್ತರಭಾರತದಲ್ಲಿ ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಲು ತೆಗೆದುಕೊಂಡಿರುವ ತೀರ್ಮಾನ!

ಮುಕ್ತ ವಾಣಿಜ್ಯ ಒಪ್ಪಂದಗಳು (DUi) ಹಾಗೂ ರಫ್ತು ಮಾಡುವ ದೇಶಗಳ ಹೆಚ್ಚಳದ ಮೂಲಕ ಅಮೆರಿಕದ ತಾರಿಫ್ ಬಿಸಿ ತಗ್ಗಿಸಿಕೊಳ್ಳಬಹುದಾದರೂ, ಆ ಹೊರೆ ದೇಶದಲ್ಲಿ ಹೂಡಿಕೆದಾರರ ಆಸಕ್ತಿ ತಗ್ಗಿಸುವುದಲ್ಲದೇ ಬಂಡವಾಳ ಒಳಹರಿದು ಬರಲು ಅಡಚಣೆ ಆಗುತ್ತದೆ. ಇದರಿಂದಾಗಿ ದೇಶದ ಉದ್ಯಮಗಳು ಕಡಿಮೆ ತಾರಿಫ್ ಇರುವ ದೇಶಗಳನ್ನು ಅಥವಾ ಅಮೆರಿಕದ್ದೇ ಮಾರುಕಟ್ಟೆಯನ್ನು ಆಯ್ದುಕೊಳ್ಳಬೇಕಾಗುತ್ತದೆ. ಹಾಗಾಗಿ ಬಂಡವಾಳ ಒಳಹರಿವು ದುರ್ಬಲವಾದಾಗ ದೇಶದ ಕರೆನ್ಸಿಯ ಮೇಲೆ (ಡಾಲರ್ ಎದುರು ರೂಪಾಯಿ ಈ ವರ್ಷ 4.9ಶೇ. ಸವಕಳಿ ಆಗಿದೆ) ಅದು ಪ್ರಭಾವ ಬೀರುತ್ತದೆ ಎಂದು ತನ್ನ ಹೊಣೆಗಾರಿಕೆ ವರದಿಯಲ್ಲಿ ಹೇಳಿಕೊಂಡಿರುವ ಸರಕಾರ ತನ್ನದೇ ಅಂಕಿ ಅಂಶಗಳ ಕುರಿತು ಎಷ್ಟು ಆತಂಕದಿಂದಿದೆ ಎಂದರೆ, DSJ@ ಕಾಯ್ದೆಯ ಅನ್ವಯ ಮುಂದಿನ ಎರಡು (27-28, 28-29) ಸಾಲುಗಳ ಹಣಕಾಸು ಕೊರತೆ, ಆದಾಯ ಕೊರತೆ, ಸಾಲದ EBP ಶೇಕಡಾವಾರು ಗುರಿಗಳನ್ನು ನೀಡಿಲ್ಲ ಎಂದು ಸಂಸತ್ತಿಗೆ ಅಲವತ್ತುಕೊಂಡಿದೆ!

ಬಜೆಟ್ ಅಧಿವೇಶನದಲ್ಲಿ, ಇಂದು ಬಜೆಟ್ ಜೊತೆ 16ನೇ ಹಣಕಾಸು ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಲಾಗಿದ್ದು, ಸರ್ಕಾರ ಆ ಶಿಫಾರಸುಗಳನ್ನು ಬಹುತೇಕ ಒಪ್ಪಿದೆ. ಅದರನ್ವಯ ರಾಜ್ಯಗಳ ತೆರಿಗೆ ಪಾಲನ್ನು 15ನೇ ಆಯೋಗದಲ್ಲಿದ್ದಂತೆ 41ಶೇ. ದಲ್ಲೇ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಕರ್ನಾಟಕವು ತನಗೆ 14ನೇ ಆಯೋಗ ನೀಡಿದ್ದ 4.72ಶೇ. ಪಾಲು ನೀಡಬೇಕೆಂಬ ಬೇಡಿಕೆ ಇಟ್ಟಿದ್ದರೆ, ಸಿಕ್ಕಿರುವುದು 4.131ಶೇ. ಮಾತ್ರ. 15ನೇ ಹಣಕಾಸು ಆಯೋಗದ ಲೆಕ್ಕಾಚಾರಕ್ಕೆ ಹೋಲಿಸಿದರೆ (3.647ಶೇ,) ಇದು ಕಿಂಚಿತ್ ಹೆಚ್ಚಿ ನದಾ ದರೂ, ಒಕ್ಕೂಟ ಸರಕಾರ ಮತ್ತು ರಾಜ್ಯಗಳ ನಡುವೆ ಇನ್ನೊಂ ದು ಸುತ್ತಿ ನ ತಿಕ್ಕಾಟಕ್ಕೆ ಕಾರಣ ಆಗ ಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಾಜಾರಾಂ ತಲ್ಲೂರು

contributor

Similar News