×
Ad

ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿಯ ಸಂದೇಶ ಸಾರಿದ ಬೋಳಬಂಡೆಪ್ಪ: ಅಲ್ಲಮಪ್ರಭು ಬೆಟ್ಟದೂರು

Update: 2026-06-14 21:17 IST

ರಾಯಚೂರು, ಜೂ.14: ಸಮಾಜದ ಅಸಮಾನತೆ, ಶೋಷಣೆ ಮತ್ತು ಅನ್ಯಾಯದ ವಿರುದ್ಧ ಸಾಹಿತ್ಯವನ್ನು ಶಕ್ತಿಯುತ ಆಯುಧವನ್ನಾಗಿ ಬಳಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಿದ ಅಪರೂಪದ ವ್ಯಕ್ತಿತ್ವ ದಲಿತ ಕವಿ ಬೋಳಬಂಡೆಪ್ಪ ಅವರದು ಎಂದು ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ನಗರದ ಕನ್ನಡ ಭವನದಲ್ಲಿ ದಲಿತ ಕವಿ ಬೋಳಬಂಡೆಪ್ಪ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ರವಿವಾರ ಆಯೋಜಿಸಿದ್ದ ‘ಕ್ರಾಂತಿ ನಿನಾದಿಸಲಿ’ ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯವು ಕೇವಲ ಮನರಂಜನೆಯ ಮಾಧ್ಯಮವಲ್ಲ; ಅದು ಸಮಾಜವನ್ನು ಬದಲಾಯಿಸುವ ಶಕ್ತಿಯಾಗಿದೆ. ಈ ಶಕ್ತಿಯನ್ನು ಅರ್ಥಪೂರ್ಣವಾಗಿ ಬಳಸಿಕೊಂಡ ಬೋಳಬಂಡೆಪ್ಪ ಅವರು ತಮ್ಮ ಕವಿತೆಗಳ ಮೂಲಕ ದಲಿತರು, ಶೋಷಿತರು ಮತ್ತು ಅಂಚಿನ ಸಮುದಾಯಗಳ ಧ್ವನಿಯಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾನತೆಯ ತತ್ವಗಳು, ಸಾಮಾಜಿಕ ನ್ಯಾಯದ ಪರಿಕಲ್ಪನೆ ಹಾಗೂ ಶೋಷಿತ ವರ್ಗಗಳ ಹಕ್ಕುಗಳ ಹೋರಾಟವನ್ನು ಬೋಳಬಂಡೆಪ್ಪ ತಮ್ಮ ಕಾವ್ಯಗಳಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಅಂಬೇಡ್ಕರ್ ಅವರ ಜೀವನ, ಹೋರಾಟ ಮತ್ತು ಚಿಂತನೆಗಳನ್ನು ಆಧರಿಸಿ ಅವರು ರಚಿಸಿರುವ ಪದ್ಯಗಳು ಹೊಸ ಪೀಳಿಗೆಗೆ ಮಾರ್ಗದರ್ಶನ ನೀಡುವಂತಿವೆ ಎಂದು ಅಭಿಪ್ರಾಯಪಟ್ಟರು.

ಅಂಬೇಡ್ಕರ್ ಅವರು ಜಾತಿ ಆಧಾರಿತ ಅಸಮಾನತೆಯನ್ನು ಪ್ರಶ್ನಿಸಿ, ಮನುಸ್ಮೃತಿಯ ವಿರುದ್ಧ ಹೋರಾಟ ನಡೆಸಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳಿಗಾಗಿ ಬದುಕಿನುದ್ದಕ್ಕೂ ಶ್ರಮಿಸಿದರು. ಆ ಮಹಾನ್ ಚಿಂತನೆಯನ್ನೇ ಬೋಳಬಂಡೆಪ್ಪ ಅವರು ತಮ್ಮ ಕಾವ್ಯದ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಟಿ.ಆರ್. ಶಾಂತಕುಮಾರ, ಬೋಳಬಂಡೆಪ್ಪ ಅವರ ಸಾಹಿತ್ಯಿಕ ಪಯಣ, ಸಾಮಾಜಿಕ ಕಾಳಜಿ ಮತ್ತು ದಲಿತ ಚಳವಳಿಯಲ್ಲಿ ಅವರ ಪಾತ್ರದ ಕುರಿತು ವಿವರಿಸಿದರು. ‘ಕ್ರಾಂತಿ ನಿನಾದಿಸಲಿ’ ಕವನ ಸಂಕಲನವು ಕೇವಲ ಕವಿತೆಗಳ ಸಂಗ್ರಹವಲ್ಲ; ಅದು ಸಮಾಜ ಪರಿವರ್ತನೆಗೆ ಕರೆ ನೀಡುವ ಚಿಂತನಾತ್ಮಕ ಕೃತಿ ಎಂದು ಹೇಳಿದರು.

ಸಮಾರಂಭದಲ್ಲಿ ಮಾತನಾಡಿದ ವಿವಿಧ ಸಾಹಿತಿಗಳು ಮತ್ತು ಗಣ್ಯರು, ಬೋಳಬಂಡೆಪ್ಪ ಅವರ ಕೃತಿಗಳು ಸಮಾನತೆ, ಮಾನವ ಹಕ್ಕುಗಳು, ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿಯ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಸಾಹಿತ್ಯದ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂಬುದಕ್ಕೆ ಅವರ ಬರಹಗಳು ಉತ್ತಮ ಉದಾಹರಣೆಯಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಸಿ. ದಾನಪ್ಪ ಮಸ್ಕಿ, ಬಾಬು ಭಂಡಾರಿಗಲ್, ಭಗವತರಾಜ್ ನಿಜಾಮಕಾರಿ, ಆಂಜನೇಯ ಜಾಲಿಬೆಂಚಿ, ವೀರ ಹನುಮಾನ್, ವೆಂಕಟೇಶ ಬೇವಿನಬೆಂಚಿ, ಮಾನ್ವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಜೆ.ಎಲ್. ಈರಣ್ಣ, ವಕೀಲ ಎಸ್. ಮಾರೆಪ್ಪ, ಹೋರಾಟಗಾರರಾದ ಎಂ. ವಿರೂಪಾಕ್ಷಿ, ವೈ. ನರಸಪ್ಪ, ಅಂಬಣ್ಣ ಅರೋಲಿಕರ್, ಎಂ.ಆರ್. ಬೇರಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News