ಲಿಂಗಸುಗೂರು ಕೊಲೆ ಪ್ರಕರಣ: ಸಂತ್ರಸ್ತ ಕುಟುಂಬಕ್ಕೆ ಅಂಜುಮನ್ ಸಮಿತಿಯಿಂದ ಸಾಂತ್ವನ, ನೆರವು
ಲಿಂಗಸುಗೂರು: ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ ನಂ. 1ರ ಕರಡಕಲ್–ಜಾಲಿಬೆಂಚಿ ರಸ್ತೆಯ ಪಕ್ಕದ ಖಾಸಗಿ ಜಮೀನಿನಲ್ಲಿ ಕೊಲೆಯಾಗಿದ್ದ ಕರಡಕಲ್ ನಿವಾಸಿ ರಾಣಿ ಅವರ ಸಾವಿಗೆ ಕೊನೆಗೂ ನ್ಯಾಯ ದೊರೆತಿದೆ ಎಂದು ಅಂಜುಮನ್ ಸಮಿತಿ ತಿಳಿಸಿದೆ.
ಬಡ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತು, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರೆಯುವವರೆಗೂ ನಿರಂತರವಾಗಿ ಧ್ವನಿ ಎತ್ತಿ ಹೋರಾಡಿದ ಕರಡಕಲ್ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಸಮಿತಿ ನಾಮನಿರ್ದೇಶಿತ ಸದಸ್ಯ ಮೋಹನ್ ಗೋಸ್ಲೆ ಹಾಗೂ ಅವರ ತಂಡದ ಎಲ್ಲ ನಾಯಕರಿಗೆ ಅಂಜುಮನ್ ಸಮಿತಿ ಅಭಿನಂದನೆ ಸಲ್ಲಿಸಿದೆ.
ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ, ನೆರವು
ಅಂಜುಮನ್ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಕರಡಕಲ್ ಗ್ರಾಮದಲ್ಲಿರುವ ಸಂತ್ರಸ್ತ ಕುಟುಂಬದ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿ, ರೇಷನ್ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸುಗೂರು ತಾಲೂಕು ಸಮಿತಿಯ ನಾಯಕರು, "ಹುಟ್ಟು-ಸಾವು ಎಂಬುದು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ದಿನ ಬಂದೇ ಬರುತ್ತದೆ. ಆದರೆ ಯಾವುದೇ ಸಮುದಾಯದ ಮೇಲಾದರೂ ಅನ್ಯಾಯ, ದೌರ್ಜನ್ಯ ಹಾಗೂ ಕೊಲೆಯಂತಹ ಘಟನೆಗಳು ನಡೆದಾಗ ಯುವಕರು ಅದನ್ನು ಸಹಿಸದೆ ನ್ಯಾಯಕ್ಕಾಗಿ ಧ್ವನಿ ಎತ್ತಬೇಕು" ಎಂದರು.
ಕುಟುಂಬಕ್ಕೆ ಯಾವುದೇ ರೀತಿಯ ತೊಂದರೆ ಅಥವಾ ಸಮಸ್ಯೆ ಎದುರಾದರೆ ತಕ್ಷಣ ಅಂಜುಮನ್ ಸಮಿತಿಗೆ ಅಥವಾ ತಮ್ಮೊಂದಿಗೆ ಇರುವ ನಾಯಕರಿಗೆ ಫೋನ್ ಮಾಡಿ ತಿಳಿಸುವಂತೆ ಅಂಜುಮನ್ ಸಮಿತಿ ಅಧ್ಯಕ್ಷರು ಮನವಿ ಮಾಡಿದರು.
"ನ್ಯಾಯ ಸಿಗುವವರೆಗೆ ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ" ಎಂದು ಅಂಜುಮನ್ ಸಮಿತಿ ಪದಾಧಿಕಾರಿಗಳು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸುಗೂರು ತಾಲೂಕು ಕಮಿಟಿಯ ಅಧ್ಯಕ್ಷ ಹುಸೇನ್ ಭಾಷಾ, ಉಪಾಧ್ಯಕ್ಷ ಮುಸ್ತಫಾ, ಅಂಜುಮನ್ ಕಮಿಟಿಯ ಸದಸ್ಯರಾದ ವಸೀಮ್ ಭಾಯಿ, ಅಲ್ಲಾಸಾಬ್, ಅಮೀನ್ ಭಾಯಿ, ಉಬೆದ್ ಖುರೇಶಿ, ಅಲ್ಲಾಬಕ್ಷ, ಸಾಬೀರ್ ಖುರೇಶಿ, ಸಿಕಂದರ್ ಮನಿಯಾರ್, ರಹೇಮಾನ್, ಸಲೀಂ, ಅಕ್ಬರ್, ಮಹೇಬೂಬ್, ಮೊಹಮ್ಮದ್, ಅಜ್ಮಿರ್, ಸದ್ದಾಂ, ಸಾದಿಕ್, ಉಮರ್, ವಸೀಮ್ ಅಕ್ರಂ, ಅಬ್ಬಾಸ್, ಹಜರತ್, ಉಮರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.