Raichuru | ಆನ್ ಲೈನ್ ಔಷಧಿ ಮಾರಾಟ ಖಂಡಿಸಿ ಔಷಧಿ ಅಂಗಡಿ ಮಾಲಕರ ಸಂಘದಿಂದ ಪ್ರತಿಭಟನೆ
ರಾಯಚೂರು: ಆನ್ ಲೈನ್ ಔಷಧ ಮಾರಾಟ ಬಂದ್ ಮಾಡಬೇಕು. ಕಾರ್ಪೊರೇಟ್ ಡಿಸ್ಕೌಂಟ್ ವಿರೋಧಿಸಿ ಬುಧವಾರ ರಾಯಚೂರಿನ ಪ್ರಮುಖ ಔಷಧಿ ಅಂಗಡಿಗಳ ಮಾಲಕರು ಔಷಧಿ ಅಂಗಡಿಗಳಿಗೆ ಬೀಗ ಹಾಕಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಡಾಕ್ಟರ್ ಲೇನ್, ಪೆಟ್ಲಾ ಬುರ್ಜ್, ಜೈನ್ ಟೆಂಪಲ್ ರೋಡ್, ಸ್ಟೇಷನ್ ರಸ್ತೆ, ಚಂದ್ರಮೌಳೇಶ್ವರ ರಸ್ತೆ, ಶೆಟ್ಟಿ ಭಾವಿ ಚೌಕ್ ಸೇರಿ ಹಲವೆಡೆ ಮೆಡಿಕಲ್ ಶಾಪ್ ಗಳು ಬಂದ್ ಮಾಡಲಾಗಿತ್ತು.
ದೇಶವ್ಯಾಪಿ ಔಷಧ ವ್ಯಾಪಾರಿಗಳ ಮುಷ್ಕರಕ್ಕೆ ಕರೆ ನೀಡಿದ ಭಾಗವಾಗಿ ಈ ಹೋರಾಟ ಹಮ್ಮಿಕೊಂಡಿದ್ದು, ಬಳಿಕ ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ಸ್ ಆಂಡ್ ಡ್ರಗ್ಗಿಸ್ಟ್ಸ್ (AIOCD) ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಆನ್ ಲೈನ್ ಮೂಲಕ ಔಷಧ ಮಾರಾಟ ನಿಲ್ಲಿಸುವುದು, ಕಾರ್ಪೊರೇಟ್ ಕಂಪೆನಿಗಳ ಭಾರೀ ರಿಯಾಯಿತಿ ಮಾರಾಟಕ್ಕೆ ತಡೆಹಾಕುವುದು ಹಾಗೂ ನಕಲಿ ಔಷಧಗಳ ನಿಯಂತ್ರಣ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.
ಆನ್ಲೈನ್ ಔಷಧ ಮಾರಾಟಕ್ಕೆ ಅವಕಾಶ ನೀಡಿರುವ ಜಿಎಸ್ಆರ್ 817 ನಿಯಮ ಹಿಂಪಡೆಯಬೇಕು. ಕಾರ್ಪೊರೇಟ್ ಸಂಸ್ಥೆಗಳ ಡೀಪ್ ಡಿಸ್ಕೌಂಟ್ ನೀತಿ ನಿಲ್ಲಿಸಬೇಕು, ನಕಲಿ ಔಷಧ ಮಾರಾಟ ತಡೆಯಲು ಜಿಎಸ್ಆರ್ 220 ನಿಯಮ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮುಷ್ಕರದ ಹಿನ್ನೆಲೆಯಲ್ಲಿ ಔಷಧ ಅಂಗಡಿಗಳು ಬಂದ್ ಆಗಿದ್ದು ರೋಗಿಗಳಿಗೆ ಆಗುವ ಸಮಸ್ಯೆಗಳಿಗೆ ಸಂಘದಿಂದ ಕ್ಷಮೆ ಯಾಚಿಸಲಾಯಿತು.
ರಾಯಚೂರು ಆರ್ ಡಿ ಸಿಡಬ್ಲ್ಯುಎ ಅಧ್ಯಕ್ಷ ವೈ.ಎಂ.ಮುರಳೀಧರ್ ಮತ್ತು ಕಾರ್ಯದರ್ಶಿ ಪಿ. ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.