ವಾರ್ತಾಭಾರತಿ ವರದಿ ಫಲಶ್ರುತಿ : ಹರಿದ ಸೂರಿನಲ್ಲಿ ಬದುಕುತ್ತಿದ್ದ ರಂಗಮ್ಮರಿಗೆ ಮನೆ
ಸಮಾಜಸೇವಕ ಭೀಮಣ್ಣ ಕಾಚಾಪುರ್ ಕಾರ್ಯಕ್ಕೆ ಮೆಚ್ಚುಗೆ
ಮಸ್ಕಿ: ಮೇಲ್ಛಾವಣಿಯೇ ಇಲ್ಲದೆ ಹರಕು ಮನೆಯಲ್ಲಿ ಬದುಕು ಸಾಗಿಸುತ್ತಿದ್ದ ತುಗ್ಗಲದಿನ್ನಿ ಗ್ರಾಮದ ರಂಗಮ್ಮ ನಾಯಕ ಅಜ್ಜಿಗೆ ಇದೀಗ ಸಮಾಜ ಸೇವಕ ಭೀಮಣ್ಣ ಕಾಚಾಪುರ್ ಅವರ ಸಹಾಯದಿಂದ ಮನೆ ದೊರೆತಿದ್ದು, ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ವರದಿಗೆ ಫಲ ಸಿಕ್ಕಂತಾಗಿದೆ. ಹಲವು ವರ್ಷಗಳಿಂದ ಕಷ್ಟದಲ್ಲಿ ಜೀವನ ನಡೆಸುತ್ತಿದ್ದ ರಂಗಮ್ಮಳಿಗೆ ನಾಲ್ಕು ಗೋಡೆ ಹಾಗೂ ಮೇಲ್ಛಾವಣಿಯೊಂದಿಗೆ ಮನೆ ನಿರ್ಮಿಸಿ ಕೊಟ್ಟಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಾಲಾಪುರ ಗ್ರಾಪಂ ವ್ಯಾಪ್ತಿಯ ತುಗ್ಗಲದಿನ್ನಿ ಗ್ರಾಮದಲ್ಲಿ ಸ್ಮಶಾನದ ಸರಕಾರಿ ಜಾಗದಲ್ಲಿ ರಂಗಮ್ಮ ಅಜ್ಜಿ ಸುಮಾರು 30 ವರ್ಷಗಳಿಂದ ಆಸರೆ ಇಲ್ಲದೆ ಬದುಕು ಸಾಗಿಸುತ್ತಿದ್ದರು. ಮೇಲ್ಛಾವಣಿಯಿಲ್ಲದೆ ಆಕಾಶವೇ ಸೂರಾಗಿ ಕಚ್ಚಾ ಮನೆಯಲ್ಲಿ ವಾಸವಾಗಿದ್ದ ಅವರ ಸ್ಥಿತಿ ಕುರಿತು ಎಪ್ರಿಲ್ 22ರಂದು ‘ಮೇಲ್ಛಾವಣಿ ಇಲ್ಲದ ಮನೆಯಲ್ಲಿ ಬದುಕು’ ಹಾಗೂ ‘ಸ್ವಾಭಿಮಾನದಿಂದ ಏಕಾಂಗಿಯಾಗಿ ಬದುಕುತ್ತಿರುವ ರಂಗಮ್ಮ’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ ಸಮಾಜಸೇವಕ ಹಾಗೂ ನಟ ಭೀಮಣ್ಣ ಕಾಚಾಪುರ್ ತಮ್ಮ ಸ್ವಂತ ಹಣದಲ್ಲಿ ಮನೆ ನಿರ್ಮಿಸಿ ಗೃಹಪ್ರವೇಶ ನೆರವೇರಿಸಿದ್ದು, ಗ್ರಾಮಸ್ಥರು ಮತ್ತು ಸಮಾಜಸೇವಕರು ಅವರನ್ನು ಸನ್ಮಾನಿಸಿದ್ದಾರೆ.
ವರದಿ ಓದಿದ ಬಳಿಕ ರಂಗಮ್ಮಳ ಪರಿಸ್ಥಿತಿ ಮನಸ್ಸಿಗೆ ನೋವು ತಂದಿತ್ತು. ಗ್ರಾಮಕ್ಕೆ ಬಂದಾಗ ಸ್ಥಳೀಯರಿಂದ ಮಾಹಿತಿ ಪಡೆದು ತಡ ಮಾಡದೆ ಸ್ವಇಚ್ಛೆಯಿಂದ ಸುಮಾರು 70 ಸಾವಿರ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಟ್ಟಿದ್ದೇನೆ ಎಂದು ಭೀಮಣ್ಣ ಕಾಚಾಪುರ್ ಹೇಳಿದರು.
ರಂಗಮ್ಮಳಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಹೆಣ್ಣು ಮಕ್ಕಳನ್ನು ಮದುವೆ ಮಾಡಿಸಿದ್ದರೂ, ಮಗ ಬೆಂಗಳೂರಿನಲ್ಲಿ ವಾಸವಾಗಿದ್ದಾನೆ. ಮಗನೊಂದಿಗೆ ಹೋಗಲು ಅವಕಾಶ ಇದ್ದರೂ ಸ್ವಾಭಿಮಾನದಿಂದ ಊರಲ್ಲೇ ಉಳಿದಿದ್ದ ರಂಗಮ್ಮ, ಕಳೆದ ಹಲವು ವರ್ಷಗಳಿಂದ ಮೇಲ್ಛಾವಣಿಯಿಲ್ಲದ ಮನೆಯಲ್ಲಿ ಕಷ್ಟಪಡುತ್ತಿದ್ದರು. ಗಾಳಿ-ಮಳೆಯಿಂದ ಹಾಳಾದ ಗುಡಿಸಲಿನ ಬಳಿಕ ಸುಮಾರು 10 ವರ್ಷಗಳಿಂದ ತಾತ್ಕಾಲಿಕ ತಾಡಪಾಲ್ ಅಡಿ ವಾಸವಾಗಿದ್ದ ಅವರಿಗೆ ಈಗ ಶಾಶ್ವತ ಆಸರೆ ದೊರೆತಿದೆ.
ಸುಮಾರು 20 ವರ್ಷಗಳಿಂದ ಸಮಾಜಸೇವೆ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಶ್ರೀಮಂತನಲ್ಲ. ರೈತ ಕುಟುಂಬದಿಂದ ಬಂದವನು. ರಂಗಮ್ಮ ಅವರ ಬದುಕಿನ ಹೋರಾಟ ನೋಡಿ ಮರುಕಗೊಂಡು ಮನೆ ನಿರ್ಮಿಸಿಕೊಟ್ಟಿದ್ದೇನೆ.
-ಭೀಮಣ್ಣ ನಾಯಕ್ ಕಾಚಾಪುರ್
ನನ್ನ ಸಂಕಷ್ಟವನ್ನು ಅರಿತು ವರದಿ ಪ್ರಕಟಿಸಿದವರಿಗೆ ಹಾಗೂ ಮನೆ ನಿರ್ಮಿಸಿ ಕೊಟ್ಟ ಭೀಮಣ್ಣ ನಾಯಕ್ ಕಾಚಾಪುರ್ ಅವರಿಗೆ ದೇವರು ಒಳ್ಳೆಯದು ಮಾಡಲಿ. ಈಗ ನನಗೆ ಸಂಪೂರ್ಣ ಮನೆ ಸಿಕ್ಕಿರುವುದು ಸಂತಸದ ವಿಷಯ.
-ರಂಗಮ್ಮ, ಅಜ್ಜಿ