×
Ad

Sindhanur | ಶಿವನಗೌಡ ನಾಯಕರ ಜನ್ಮದಿನದಂದು ‘ಅಭಿವೃದ್ಧಿ ಸಂಕಲ್ಪ ಸಮಾಗಮ’

ನೀರಾವರಿ–ಏಮ್ಸ್ ಸೇರಿ ನಾಲ್ಕು ಜಿಲ್ಲೆಗಳ ಅಭಿವೃದ್ಧಿ ಸಂಕಲ್ಪಕ್ಕೆ ವೇದಿಕೆ

Update: 2026-07-09 18:23 IST

ಸಿಂಧನೂರು: ದೇವದುರ್ಗದ ಮಾಜಿ ಸಚಿವ ಶಿವನಗೌಡ ನಾಯಕ ಅವರ 49ನೇ ಜನ್ಮದಿನದ ಅಂಗವಾಗಿ ಜುಲೈ 14ರಂದು ಕವಿತಾಳದಲ್ಲಿ ‘ಅಭಿವೃದ್ಧಿ ಸಂಕಲ್ಪ ಸಮಾಗಮ’ ಆಯೋಜಿಸಲಾಗಿದ್ದು, ನಾಲ್ಕು ಜಿಲ್ಲೆಗಳ ನೀರಾವರಿ, ಆರೋಗ್ಯ ಹಾಗೂ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಸಂಕಲ್ಪಗಳನ್ನು ಕೈಗೊಳ್ಳಲಾಗುವುದು ಎಂದು ನಗರಸಭೆ ಮಾಜಿ ಸದಸ್ಯ ಹಾಗೂ ಕೆಎಸ್‌ಎನ್ ಸೇವಾ ಸಮಿತಿ ಸಿಂಧನೂರು ಸಂಚಾಲಕ ನಿರುಪಾದಿ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯಕ್ಕೆ ಪರ್ಯಾಯವಾಗಿ ನವಲಿ ಸಮಾನಾಂತರ ಜಲಾಶಯ ನಿರ್ಮಾಣ, ಕೃಷ್ಣಾ ನದಿಗೆ ತಿಂಥಿಣಿ ಸಮೀಪ ಹೊಸ ಜಲಾಶಯ ನಿರ್ಮಾಣ ಹಾಗೂ ಏಮ್ಸ್ ಆಸ್ಪತ್ರೆ ಮಂಜೂರು ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.

ಇದು ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ. ರೈತರ ನೀರಾವರಿ, ಆರೋಗ್ಯ ಹಾಗೂ ಅಭಿವೃದ್ಧಿ ಹಕ್ಕುಗಳಿಗಾಗಿ ಹಮ್ಮಿಕೊಂಡಿರುವ ಪಕ್ಷಾತೀತ ಜನಾಂದೋಲನವಾಗಿದ್ದು, ರೈತರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಮುಖಂಡ ಗಂಗಣ್ಣ ಡಿಶ್ ಮಾತನಾಡಿ, ಕಾರ್ಯಕ್ರಮದಲ್ಲಿ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಹಾಗೂ ತುರ್ವಿಹಾಳದ ಮಾದಯ್ಯ ಗುರೂಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೆಎಸ್ ಎನ್ ಸೇವಾ ಸಮಿತಿ ಸದಸ್ಯರಾದ ಬೀರಪ್ಪ ಹೊಸಳ್ಳಿ, ಅಮರೇಶ ಸುಕಾಲಪೇಟೆ, ರಾಮಕೃಷ್ಣ ಭಜಂತ್ರಿ, ಯಲ್ಲಪ್ಪ ಯದ್ದಲದೊಡ್ಡಿ, ಮೌನೇಶ ಬರ್ಮಾಕ್ಯಾಂಪ್, ಮಣಿ ಆರ್.ಎಚ್, ಮುದಿಯಪ್ಪ ಸುಕಾಲಪೇಟೆ, ರಾಮು ಕೆಎಂಎಸ್ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News