×
Ad

ಜಾಗತಿಕ, ಪ್ರಾದೇಶಿಕ ಸಂಘರ್ಷಗಳ ಮೇಲೆ ಬೆಳಕು ಚೆಲ್ಲುವ ಮಾನವ್ ಕೌಲ್‌ರ ‘ಪಾರ್ಕ್’

Update: 2026-02-09 15:22 IST

ಮಾನವ್ ಕೌಲ್ ಅವರ ‘ಪಾರ್ಕ್’ ಹಿಂದಿ ನಾಟಕವು ಅದರ ಹೆಸರಿಗೆ ತಕ್ಕಂತೆ ಇದೆ. ಉದ್ಯಾನವನದಲ್ಲಿ ಮೂರು ಬೆಂಚುಗಳನ್ನು ಹೊಂದಿರುವ 90 ನಿಮಿಷಗಳ ನಾಟಕವು ತಮ್ಮ ನೆಚ್ಚಿನ ಬೆಂಚುಗಳಿಗಾಗಿ ಜಗಳವಾಡುವ ಮೂವರು ಪುರುಷರ ನಡುವಿನ ಘರ್ಷಣೆಗಳ ಮೇಲೆ ನಿಂತಿದೆ. ನಾಟಕವು ಮೂರು ಚೆಂಚುಗಳಿಗಾಗಿ ಹೋರಾಡುವ ಮೂವರು ಪುರುಷರ ಮೂಲಕ ನಗರೀಕರಣ, ಜಾಗದ ಕೊರತೆ ಮತ್ತು ಅಸ್ತಿತ್ವದ ರಾಜಕೀಯವನ್ನು ಹಾಸ್ಯದ ಮೂಲಕ ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದೆ.

ಒಂದು ಚಿಕ್ಕ ಉದ್ಯಾನವನದಲ್ಲಿರುವ ಮೂರು ಬೆಂಚುಗಳಿಗಾಗಿ ಮೂವರು ವ್ಯಕ್ತಿಗಳು ತಮ್ಮ ಹಕ್ಕು ಸಾಧಿಸಲು ಪಡುವ ಪಾಡು, ಲಘು ಹಾಸ್ಯದಿಂದ ಪ್ರಾರಂಭವಾಗಿ ನಂತರ ಆಳವಾದ ತಾತ್ವಿಕ ಸಂಭಾಷಣೆಗಳಿಗೆ ದಾರಿ ಮಾಡಿಕೊಡುತ್ತದೆ. ಅಲ್ಲದೆ ನೆರೆದ ವೀಕ್ಷಕರನ್ನು ಆಲೋಚಿಸುವಂತೆ ಮಾಡುತ್ತದೆ. ನಗರೀಕರಣ ಹೆಚ್ಚಾದಂತೆ ಮಾನವನಿಗೆ ಜಾಗ ಎಷ್ಟು ಮುಖ್ಯವಾಗುತ್ತದೆ ಮತ್ತು ಅದನ್ನು ಉಳಿಸಿಕೊಳ್ಳಲು ಅವನು ಎಷ್ಟು ಕೆಳಮಟ್ಟಕ್ಕಿಳಿಯಬಹುದು ಎಂಬುದನ್ನು ಇದು ಪ್ರಸ್ತುತಪಡಿಸುತ್ತದೆ. ಸಾರ್ವಜನಿಕ ಬೆಂಚುಗಳ ಮೇಲೆ ಮಾಲಕತ್ವವನ್ನು ತೋರಿಸುವ ಕಾರಣಗಳು ಸರಳವಾಗಿದ್ದರೂ, ಅವರು ಪರಸ್ಪರ ನೀಡುತ್ತಿದ್ದ ತರ್ಕದಲ್ಲಿ ಆಳವಾದ ಆಲೋಚನೆಗಳು ಹುದುಗಿಕೊಂಡಿದ್ದವು.

ಮೂಲ ಸ್ಥಳಗಳಿಂದ ಸ್ಥಳಾಂತರಗೊಳ್ಳುವುದು, ಇರಾನ್-ಇರಾಕ್ ಜಗಳ, ಕಾಶ್ಮೀರ ಸಮಸ್ಯೆ ಮತ್ತು ವಿವಾದಗಳಿಂದಾಗಿ ಜನರು ಹೇಗೆ ನಕ್ಸಲೈಟ್‌ಗಳಾಗುತ್ತಾರೆ ಎಂಬ ವಿಷಯವನ್ನು ಪಾತ್ರಗಳು ಬಿಂಬಿಸುವಲ್ಲಿ ಯಶಸ್ವಿಯಾದವು. ಪಾರ್ಕ್ ಬೆಂಚಿನ ಮೇಲೆ ಮಲಗಲು ಬಯಸುವ ವ್ಯಕಿಯು ತನ್ನ ಮಾನಸಿಕ ಅಸ್ವಸ್ಥ ಮಗನನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಸಮಾಜದಿಂದ ತಪ್ಪಿಸಿಕೊಳ್ಳಲು ಬಯಸು ತ್ತಾನೆ. ಪಾರ್ಕ್‌ನಲ್ಲಿಯ ಒಂದು ನಿರ್ದಿಷ್ಟ ಕಟ್ಟಡವನ್ನು ನೋಡಲು ಬಯಸುವವನು ತನ್ನ ಏಕತಾನತೆಯ ಬದುಕುಳಿಯುವಲ್ಲಿ ಓಯಸಿಸ್ ಹುಡುಕುತ್ತಿದ್ದಾನೆ. ಗಡಿಪಾರು ಮಾಡುವಿಕೆಯಿಂದ ಹೆಚ್ಚು ಉದ್ರೇಕಗೊಂಡ ಯುವಕ ಮಾನಸಿಕ ರೋಗಿ. ಈ ಮೂವರು ವ್ಯಕ್ತಿಗಳು ಪರಸ್ಪರರ ದುಃಖಗಳನ್ನು ತಿಳಿದಿದ್ದರೆ, ಅವರೆಲ್ಲರೂ ಉಗ್ರವಾಗಿ ನಡೆದುಕೊಳ್ಳುತ್ತಿರಲಿಲ್ಲ.

ಅದೇ ರೀತಿ ಜನರು ವಿಭಿನ್ನ ಪ್ರಾದೇಶಿಕ ಸಂಘರ್ಷಗಳ ಇತಿಹಾಸಗಳನ್ನು ತಿಳಿದಿದ್ದರೆ, ಪ್ರಪಂಚದಾದ್ಯಂತ ಹೆಚ್ಚಿನ ಮಟ್ಟದ ಸಹಿಷ್ಣುತೆ ಇರುತ್ತಿತ್ತು. ಒಟ್ಟಾರೆ ನಾಟಕಕಾರ ಮಾನವ್ ಕೌಲ್ ಉದ್ಯಾನದ ಒಳಗೆ ಮತ್ತು ಹೊರಗೆ ಆರೋಗ್ಯಕರ ಸಂವಾದಕ್ಕಾಗಿ ನಾಟಕದ ಕಥಾ ವಸ್ತು ಮೂಲಕ ಕೇಳಿಕೊಳ್ಳುತ್ತಾರೆ. ನಾಟಕವು ಈಗ ನಡೆಯುತ್ತಿರುವ ಜಾಗತಿಕ, ಪ್ರಾದೇಶಿಕ ಸಂಘರ್ಷಗಳ ಮೇಲೆ ಬೆಳಕನ್ನು ಚೆಲ್ಲುತ್ತದೆ. ಮಾನವ್ ಕೌಲ್ ಅವರು ಸಮಕಾಲೀನ ಭಾರತೀಯ ರಂಗಭೂಮಿಯಲ್ಲಿ ಪ್ರಮುಖ ನಾಟಕಕಾರರೆಂದು ಪ್ರಸಿದ್ಧಿ ಪಡೆದಿದ್ದಾರೆ. ಅವರ ಪಾರ್ಕ್ ಒಂದು ಅತ್ಯುತ್ತಮ ನಾಟಕವಾಗಿದ್ದು, ಹಾಸ್ಯದ ಮೂಲಕ ಮಾನವ ಸಂಬಂಧಗಳ ಸಂಕೀರ್ಣತೆಯನ್ನು ಪ್ರದರ್ಶಿಸುತ್ತದೆ. ಅದು 2009ರಲ್ಲಿ ಆರಂಭವಾದರೂ ಇಂದಿಗೂ ಪ್ರಸ್ತುತವಾಗಿದೆ.

ಮುಂಬೈನ ಚಿತ್ರಲೇಖಾ ಆರ್ಟ್ಸ್ ಥಿಯೇಟರ್ ಪ್ರಸ್ತುತ ಪಡಿಸಿದ ಪಾರ್ಕ್ ಹಿಂದಿ ನಾಟಕವು ಸಚಿನ್ ಕೆ.ಜರ್ಯಾಲ್ ನಿರ್ದೇಶನದಲ್ಲಿ ನಟರಾದ ಅಧಿಕಲ್ಪ್ ಶರ್ಮಾ, ನಿತೀಶ ಸಿಂಗ್ ರಾಥೋರ್ ಮತ್ತು ಆದಿತ್ಯ ದುಬೆ ಅವರು ನಾಟಕದಲ್ಲಿತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿದರು. ನಟರೆಲ್ಲರೂ ಉತ್ಸಾಹಭರಿತ ಮಾತು ಮತ್ತು ಸನ್ನೆಗಳ ಮೂಲಕ ಪ್ರೇಕ್ಷಕರನ್ನು ಬೆರಗುಗೊಳಿಸಿದರು. ನಾಟಕದ ನಡುವೆ ಲಘು ಸಂಗೀತ ಮತ್ತು ಬೆಳಕು ಪ್ರಮುಖ ಪಾತ್ರವಹಿಸಿತು. ಬೆಂಗಳೂರಿನ ರಂಗಶಂಕರದಲ್ಲಿ ಜನವರಿ 31ರಂದು ಪ್ರದರ್ಶನಗೊಂಡ ಪಾರ್ಕ್ ನಾಟಕ ರಂಗಾಸಕ್ತರ ಮನಸೆಳೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸುರೇಶ ಗುದಗನವರ, ಧಾರವಾಡ

contributor

Similar News