×
Ad

ಮೋಟಾರು ಸೈಕಲ್‌ಗಳನ್ನು ಪ್ರಯಾಣಿಕರನ್ನು ಸಾಗಿಸುವ ವಾಹನಗಳೆಂದು ವ್ಯಾಖ್ಯಾನಿಸಲಾಗಿಲ್ಲ; ಸರಕಾರದ ಪ್ರತಿಪಾದನೆ

ಓಲಾ, ಉಬರ್, ರ‍್ಯಾಪಿಡೋ ಸಲ್ಲಿಸಿರುವ ಮೇಲ್ಮನವಿ

Update: 2025-11-14 20:16 IST

ಬೆಂಗಳೂರು: ಮೋಟಾರು ಸೈಕಲ್‌ಗಳನ್ನು ಪ್ರಯಾಣಿಕರ ಸಾಗಾಟ ಅಥವಾ ಬಾಡಿಗೆಗೆ ಬಳಕೆ ಮಾಡಬಹುದು ಎಂದು ಶಾಸನದಲ್ಲಿ ವ್ಯಾಖ್ಯಾನಿಸದೇ ಇರುವುದರಿಂದ ಅವುಗಳು ಸಾರಿಗೆ ವಾಹನಗಳಾಗುವುದಿಲ್ಲ ಎಂದು ರಾಜ್ಯ ಸರಕಾರ ಹೈಕೋರ್ಟ್‌ನಲ್ಲಿ ಪ್ರತಿಪಾದಿಸಿದೆ.

ಮೋಟಾರು ವಾಹನಗಳ ಕಾಯ್ದೆ 1988ರ ಅನ್ವಯ ಮಾರ್ಗಸೂಚಿ ರೂಪಿಸುವವರೆಗೆ ಬೈಕ್‌ ಟ್ಯಾಕ್ಸಿಗಳ ಕಾರ್ಯಾಚರಣೆ ಮುಂದುವರಿಸುವಂತಿಲ್ಲ ಎಂದು ಏಕಸದಸ್ಯ ನ್ಯಾಯಪೀಠ ಹೊರಡಿಸಿರುವ ಆದೇಶ ಪ್ರಶ್ನಿಸಿ ಓಲಾ, ಉಬರ್, ರ‍್ಯಾಪಿಡೋ ಸೇರಿ ಹಲವು ಅಗ್ರಿಗೇಟರ್‌ ಸಂಸ್ಥೆಗಳು ಸಲ್ಲಿಸಿರುವ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ರಾಜ್ಯ ಸರಕಾರದ ಪರವಾಗಿ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ವಾದ ಮಂಡಿಸಿ, ಮೋಟಾರು ಸೈಕಲ್‌‌ಗಳನ್ನು ಪ್ರಯಾಣಿಕರನ್ನು ಸಾಗಿಸಲು ಇರುವ ವಾಹನ ಎಂದು ವ್ಯಾಖ್ಯಾನಿಸಲಾಗಿಲ್ಲ. ಮೋಟಾರು ವಾಹನಗಳ ಕಾಯ್ದೆ ಅಥವಾ ನಿಯಮಗಳಲ್ಲೂ ಪ್ರಯಾಣಿಕರನ್ನು ಮೋಟಾರ್‌ ಸೈಕಲ್‌ ಹೊತ್ತೊಯ್ಯಬಹುದು ಎಂದು ಹೇಳಿಲ್ಲ. ಮೋಟಾರ್‌ ಸೈಕಲ್‌, ಮೋಟಾರ್‌ ಕ್ಯಾಬ್‌ ವ್ಯಾಖ್ಯಾನದ ಅಡಿ ಬರುವುದಿಲ್ಲ ಎಂದು ನ್ಯಾಯಪೀಠಕ್ಕೆ‌ ವಿವರಿಸಿದರು.

ಅದಕ್ಕೆ ನ್ಯಾಯಪೀಠ, ಮೋಟಾರ್‌ ಸೈಕಲ್‌ ಅನ್ನು ಸಾರಿಗೆಗೆ ಬಳಕೆ ಮಾಡಬಾರದು ಎಂದು ಹೇಳುವುದಾದರೆ ಸರಕಾರ ಹೇಗೆ ಎಲೆಕ್ಟ್ರಿಕ್‌ ವಾಹನ ನೀತಿ ರೂಪಿಸಿತ್ತು ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಎಜಿ, ಅದನ್ನು ಹಿಂಪಡೆಯಲಾಗಿದ್ದು, ತಪ್ಪನ್ನು ಸರಿಪಡಿಸಿಕೊಂಡಿದ್ದೇವೆ ಎಂದಷ್ಟೇ ಹೇಳಬಯಸುತ್ತೇನೆ. ಇವಿ ಮೋಟಾರ್‌ ಸೈಕಲ್‌ಗಳಿಗೆ ವಿಶೇಷ ವಿನಾಯಿತಿ ನೀಡಲಾಗಿತ್ತು. ಯಾವುದೇ ಮೋಟಾರ್‌ ಸೈಕಲ್‌ ಅನ್ನು ಸಾರಿಗೆ ವಾಹನ ಎಂದು ಪರಿಗಣಿಸಬೇಕಾದರೆ ಅನುಮತಿ ಕಡ್ಡಾಯ ಎಂದು ಸ್ಪಷ್ಟಪಡಿಸಿದರು.

ವಾದ ಮುಂದುವರಿಸಿದ ಅಡ್ವೊಕೇಟ್ ಜನರಲ್, ಮೋಟಾರ್‌ ಸೈಕಲ್‌ ಪ್ರಯಾಣಿಕರನ್ನು ಹೊತ್ತೊಯ್ಯುವ ವಾಹನವಲ್ಲ, ಇದನ್ನು ಬಾಡಿಗೆ ಅಥವಾ ಹಣ ಸಂಪಾದಿಸಲು ಬಳಕೆ ಮಾಡಲಾಗದು. ಅನುಮತಿ ನೀಡುವುದು ರಾಜ್ಯ ಸರಕಾರದ ವಿಶೇಷ ಅಧಿಕಾರವಾಗಿದೆ. ಮೋಟಾರ್‌ ಸೈಕಲ್‌ಗಳನ್ನು ವಾಣಿಜ್ಯ ಸಾರಿಗೆಗೆ ಬಳಕೆ ಮಾಡುವುದು ಮತ್ತು ಆ ಅನುಮತಿಯನ್ನು ನಿಯಂತ್ರಣ ಮಾರ್ಗಸೂಚಿಗಳ ಗೈರಿನಲ್ಲಿ ಊಹಿಸಿಕೊಳ್ಳಲಾಗದು ಎಂದರಲ್ಲದೆ, ದೇಶದ 18 ರಾಜ್ಯಗಳಲ್ಲಿ ನಿರ್ದಿಷ್ಟವಾಗಿ ರಾಜ್ಯಗಳು ನಿಯಂತ್ರಣ ಮಾರ್ಗಸೂಚಿ ರೂಪಿಸಿದ ನಂತರ ಬೈಕ್‌ ಟ್ಯಾಕ್ಸಿಗಳು ಸೇವೆ ನೀಡುತ್ತಿವೆ. ಈ ಸಂಸ್ಥೆಗಳು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಲ್ಲಿ ವಾದಿಸಲಾಗದು ಎಂದರು.

ಆಗ ನ್ಯಾಯಪೀಠ, ಮೇಲ್ಮನವಿದಾರರು ಪರವಾನಗಿ ವ್ಯವಸ್ಥೆಗೆ ಆಕ್ಷೇಪಿಸುತ್ತಿಲ್ಲ. ಸಂಪೂರ್ಣ ನಿಷೇಧಕ್ಕೆ ಅವರ ವಿರೋಧವಿದೆ. ಅನುಮತಿ ನೀಡಲು ಮುಂದಾದರೆ ಅವರು ಪರವಾನಗಿ ಪಡೆದುಕೊಳ್ಳುತ್ತಾರೆ ಎಂದಿತು. ಅದಕ್ಕೆ ಎಜಿ ಅವರು ಮೋಟಾರ್‌ ಸೈಕಲ್‌ ಸಾರಿಗೆ ವಾಹನವಾಗಿಲ್ಲವಾದ್ದರಿಂದ ನಾವು ಪರವಾನಗಿ ನೀಡುವುದಿಲ್ಲ ಎಂದರು.

ಪರವಾನಗಿ ನಿರಾಕರಿಸುತ್ತಿರುವುದು ಸುರಕ್ಷತೆ, ಸಂಚಾರ ದಟ್ಟಣೆ ಕಾರಣಕ್ಕಾಗಿ ಅಲ್ಲ. ಮೋಟಾರ್‌ ಸೈಕಲ್‌ ಸಾರಿಗೆ ವಾಹನವಲ್ಲ ಎಂಬುದು ನಿಮ್ಮ ಆಕ್ಷೇಪವೇ ಎಂಬ ನ್ಯಾಯಪೀಠದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಜಿ, ಅಂತಿಮವಾಗಿ ಇದು ನಿಷೇಧದ ಪ್ರಕರಣವಲ್ಲ, ಆದರೆ, ನಿಯಂತ್ರಣಕ್ಕೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ವಿಶಾಲವಾದ ಸಾರ್ವಜನಿಕ ಹಿತಾಸಕ್ತಿ ಅಡಗಿದೆ. ಮುಂಬೈನ ಕೆಲ ಕಡೆ ಆಟೊರಿಕ್ಷಾಗಳ ಓಡಾಟವನ್ನೇ ನಿಷೇಧಿಸಲಾಗಿದೆ. ಕೆಲವು ಅಗ್ರಿಗೇಟರ್‌ಗಳು ನಿಷೇಧದ ನಡುವೆಯೂ ಬೈಕ್‌ ಟ್ಯಾಕ್ಸಿ ಸೇವೆ ಮುಂದುವರಿಸುವ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘಿಸುತ್ತಿದ್ದಾರೆ. ಅಗ್ರಿಗೇಟರ್‌ಗಳು ಪರವಾನಗಿಗೆ ಮನವಿ ಸಲ್ಲಿಸಬಹುದು. ರಾಜ್ಯ ಸರಕಾರ ತನ್ನದೇ ಮಾರ್ಗಸೂಚಿ ರೂಪಿಸಬಹುದು ಅಥವಾ ಕೇಂದ್ರ ಸರಕಾರದ ನಿಯಮಗಳನ್ನೇ ಪಾಲಿಸಬಹುದು ಎಂದರು.

ಆಗ ನ್ಯಾಯಪೀಠ, ರಾಜ್ಯ ಸರಕಾರ ನಿಯಂತ್ರಣ ಮಾರ್ಗಸೂಚಿ ರೂಪಿಸದೇ ಇರುವುದರಿಂದ ಕೇಂದ್ರದ ಮಾರ್ಗಸೂಚಿಗಳನ್ನೇ ಪಾಲಿಸಬೇಕಾಗುತ್ತದೆ ಎಂದು ನುಡಿಯಿತಲ್ಲದೆ, ರಾಜ್ಯ ಸರಕಾರ ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿಗೆ ಅನುಮತಿಸುತ್ತಿಲ್ಲ ಎಂದು ಹೇಳಿತು. ಆಗ, ಹಲವಾರು ಕಾರಣಗಳನ್ನು ಪರಿಗಣಿಸಿ ಈ ನಿರ್ಧಾರ ಮಾಡಲಾಗಿದೆ ಎಂದು ಎಜಿ ಸಮರ್ಥಿಸಿಕೊಂಡರಲ್ಲದೆ, ರಾಜ್ಯ ಸರಕಾರದ ಎಲೆಕ್ಟ್ರಿಕ್‌ ವಾಹನ ನೀತಿಯಡಿ ಇ-ಬೈಕ್‌ ಟ್ಯಾಕ್ಸಿಗೆ ಅನುಮತಿಸಲಾಗಿತ್ತು. ಅಗ್ರಿಗೇಟರ್‌ಗಳು ಒಂದೇ ಒಂದು ಇ-ಬೈಕ್‌ ಓಡಿಸಲಿಲ್ಲ. ಇದಕ್ಕೆ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಲಿಲ್ಲ ಎಂದರು.

ಬೈಕ್‌ ಟ್ಯಾಕ್ಸಿ ನಿಷೇಧಕ್ಕೆ ಮಾಲಿನ್ಯ ಒಂದು ಕಾರಣ ಎಂದು ಸರಕಾರ ಹೇಳಿದೆ. ಆದರೆ, ಇ-ಬೈಕ್‌ಗಳಿಗೂ ಅನುಮತಿ ನೀಡಿಲ್ಲ. ಸುರಕ್ಷತೆ ಕಾರಣಗಳಿಗೆ ಏನಾದರೂ ದಾಖಲೆ ಇದೆಯೇ ಎಂದು ಸರಕಾರವನ್ನು ಪೀಠ ಪ್ರಶ್ನಿಸಿತು. ಇದಕ್ಕೆ ಎಜಿ ಅವರು ಸಮಿತಿಯ ವರದಿಯನ್ನು ಉಲ್ಲೇಖಿಸಿ, ತಮ್ಮ ವಾದ ಪೂರ್ಣಗೊಳಿಸಿದರು. ವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ವಿಚಾರಣೆಯನ್ನು ನವೆಂಬರ್‌ 24 ಕ್ಕೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News