ಗೃಹಲಕ್ಷ್ಮೀ ಫಲಾನುಭವಿಗಳ ಪೈಕಿ 1.95 ಲಕ್ಷ ಮಂದಿ ಮರಣ: ಗ್ಯಾರಂಟಿಗಳ ಪರಿಷ್ಕರಣೆ ಮಾಡಲು ಕೋರಿ ಸರಕಾರಕ್ಕೆ ಪತ್ರ
ಬೆಂಗಳೂರು: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಫಲಾನುಭವಿಗಳ ಪೈಕಿ 1.95ಲಕ್ಷ ಮಂದಿ ಮರಣ ಹೊಂದಿದ್ದಾರೆ. ಆದರೂ ಈ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು 2000ರೂ.ಸಂದಾಯವಾಗುತ್ತಿದೆ. ಈ ಹಿನ್ನೆಲೆ ಗ್ಯಾರಂಟಿಗಳ ಪರಿಷ್ಕರಣೆಯಾಗಬೇಕೆಂದು ರಾಜ್ಯ ಗ್ಯಾರಂಟಿ ಪರಿಷ್ಕರಣೆ ಸಮಿತಿ ಉಪಾಧ್ಯಕ್ಷ ಹಾಗೂ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ಈವರೆಗೆ ವೆಚ್ಚವಾಗಿರುವ ಬೃಹತ್ ಮೊತ್ತದ ಅಂಕಿ-ಅಂಶಗಳನ್ನು ನೀಡುವ ಅವರು, ಕೆಲವು ಗಂಭೀರ ಲೋಪದೋಷಗಳನ್ನು ಸರಿಪಡಿಸಲು ಮಹತ್ವದ ಸಲಹೆಗಳನ್ನು ಸರಕಾರಕ್ಕೆ ತಿಳಿಸಿದ್ದಾರೆ.
1.38 ಲಕ್ಷ ಕೋಟಿ ದಾಟಿದ ಗ್ಯಾರಂಟಿ ವೆಚ್ಚ: ದಿನೇಶ್ ಗೂಳಿಗೌಡ ನೀಡಿದ ಮಾಹಿತಿಯಂತೆ, ಐದು ಗ್ಯಾರಂಟಿಗಳಿಗಾಗಿ ರಾಜ್ಯ ಸರಕಾರ ಈವರೆಗೂ ಒಟ್ಟು 1,38,270.21 ಕೋಟಿ ರೂ.ಗಳನ್ನು ಪಾವತಿ ಮಾಡಿದೆ. ಅವುಗಳ ಪೈಕಿ ಗೃಹಲಕ್ಷ್ಮೀ ಯೋಜನೆಯಲ್ಲಿ 1.24 ಕೋಟಿ ಫಲಾನುಭವಿಗಳಿಗೆ ಈವರೆಗೆ ಒಟ್ಟು 72,253 ಕೋಟಿ ರೂ. ಸಂದಾಯವಾಗಿದೆ. ಗೃಹಜ್ಯೋತಿಯಲ್ಲಿ 1.64 ಕೋಟಿ ಫಲಾನುಭವಿಗಳಿಗೆ ಉಚಿತ ವಿದ್ಯುತ್ ನೀಡಲಾಗಿದ್ದು, ಎಪ್ರಿಲ್ 2026ರ ಅಂತ್ಯಕ್ಕೆ ಇದರ ಮೌಲ್ಯ 26,115 ಕೋಟಿ ರೂ. ಆಗಲಿದೆ ಎಂದು ದಿನೇಶ್ ಗೂಳಿಗೌಡ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆಯಲ್ಲಿ ಈವರೆಗೆ ಒಟ್ಟು 18,897 ಕೋಟಿ ರೂ. ಪಾವತಿಸಲಾಗಿದೆ. ಶಕ್ತಿ ಯೋಜನೆಯಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ 19,890 ಕೋಟಿ ರೂ. ಮೌಲ್ಯದ ಟಿಕೆಟ್ ನೀಡಲಾಗಿದೆ. ಯುವನಿಧಿಯಲ್ಲಿ ನಿರುದ್ಯೋಗಿ ಪದವೀಧರರಿಗೆ 1,115 ಕೋಟಿ ರೂ. ಸಂದಾಯವಾಗಿದೆ ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ.
ಗೃಹಲಕ್ಷ್ಮೀಯಲ್ಲಿ ವಾರ್ಷಿಕ 468.54 ಕೋಟಿ ರೂ. ನಷ್ಟ: ಇನ್ನು, ಮಾರ್ಚ್ 2026ರ ಅಂಕಿಅಂಶಗಳ ಪ್ರಕಾರ, ಗೃಹಲಕ್ಷ್ಮೀ ಯೋಜನೆಯಡಿ ಈಗಾಗಲೇ ಮರಣ ಹೊಂದಿರುವ 1,95,224 ಫಲಾನುಭವಿಗಳ ಖಾತೆಗೆ ತಲಾ 2,000 ರೂ.ಗಳಂತೆ ಹಣ ಜಮೆಯಾಗುತ್ತಿದೆ. ಇದರಿಂದ ಸರಕಾರಕ್ಕೆ ಪ್ರತಿ ತಿಂಗಳು 39.05 ಕೋಟಿ ರೂ. ಹಾಗೂ ವಾರ್ಷಿಕವಾಗಿ 468.54 ಕೋಟಿ ರೂ. ನಷ್ಟವಾಗುತ್ತಿದೆ. ಇದನ್ನು ತಡೆಯಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ದಿನೇಶ್ ಗೂಳಿಗೌಡ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಅದೇ ರೀತಿ ಮಾರ್ಚ್ 2026ರ ಅಂಕಿ ಅಂಶಗಳಂತೆ ಗೃಹಲಕ್ಷ್ಮೀ ಫಲಾನುಭವಿಗಳಲ್ಲಿ ಐ.ಟಿ./ಜಿ.ಎಸ್.ಟಿ. ಪಾವತಿಸುತ್ತಿರುವ 1,94,560 ಫಲಾನುಭವಿಗಳಿಗೆ 2000 ರೂ.ಗಳಂತೆ ಪ್ರತಿ ತಿಂಗಳು 38.91 ಕೋಟಿ ರೂ.ಗಳು ಹಾಗೂ ವಾರ್ಷಿಕ 466.94 ಕೋಟಿ ರೂ.ಗಳಾಗುತ್ತದೆ. ಐ.ಟಿ./ಜಿ.ಎಸ್.ಟಿ. ಪಾವತಿಸುವವರಿಗೆ ಸಹ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರೆ ಎಂಬುದನ್ನು ಸರಕಾರ ಪರಿಶೀಲಿಸಬೇಕು ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಗೃಹಲಕ್ಷ್ಮೀ ಮತ್ತು ಗೃಹಜ್ಯೋತಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೆಲ ಅಂಶಗಳ ಬಗ್ಗೆ ಕೂಲಂಕಶವಾಗಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಿನೇಶ್ ಗೂಳಿಗೌಡ ಅವರು ಪತ್ರದಲ್ಲಿ ಕೋರಿದ್ದಾರೆ.