‘ಶಕ್ತಿ’ ಯೋಜನೆ ಸ್ಮಾರ್ಟ್ಕಾರ್ಡ್ ವಿತರಣೆಗೆ ಅಂತಿಮ ಸಿದ್ಧತೆ: ಸಚಿವ ಬೈರತಿ ಸುರೇಶ್
‘ನಾಲ್ಕು ಸಾವಿರ ಹೊಸ ಎಲೆಕ್ಟ್ರಿಕಲ್ ಬಸ್ಗಳ ಖರೀದಿ’
ಸಚಿವ ಬೈರತಿ ಸುರೇಶ್
ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಮಹಿಳೆಯರಿಗೆ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ’ ಯೋಜನೆಯಡಿ ಸ್ಮಾರ್ಟ್ಕಾರ್ಡ್ ವಿತರಣೆ ಬಗ್ಗೆ ಅಂತಿಮ ರೂಪುರೇಶೆ ಸಿದ್ಧಪಡಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸಾರಿಗೆ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಸುಮಾರು 2 ಕೋಟಿಗೂ ಅಧಿಕ ಮಹಿಳೆಯರ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ಕಾರ್ಡ್ ವಿತರಿಸುವ ಸಾಧ್ಯತೆಗಳಿವೆ. ಈ ಸ್ಮಾರ್ಟ್ಕಾರ್ಡ್ ವಿತರಣೆಗೆ ಸಂಬಂಧಿಸಿದಂತೆ ವಿಶೇಷ ಉದ್ದೇಶಿತ ವಾಹನವನ್ನು ರಚನೆ ಮಾಡಿ, ಇದರಡಿಯೇ ವಿತರಣಾ ಪ್ರಕ್ರಿಯೆ ನಡೆಸಲಾಗುತ್ತದೆ ಎಂದರು.
ಇದೇ ವೇಳೆ, ಸ್ಮಾರ್ಟ್ಕಾರ್ಡ್ನ ರೂಪುರೇಶೆಯನ್ನು ಅಂತಿಮಗೊಳಿಸಲು ವಹಿವಾಟು ಸಲಹೆಗಾರರ ಸಮಿತಿಯನ್ನು ನೇಮಕ ಮಾಡಲಾಗಿದೆ. ಈ ಸಮಿತಿಯು ಸ್ಮಾರ್ಟ್ಕಾರ್ಡ್ ಸ್ವರೂಪ, ತಾಂತ್ರಿಕ ನೆರವು, ಟೆಂಡರ್ ಪ್ರಕ್ರಿಯೆ ಮತ್ತು ವಿತರಣೆ ಪ್ರಕ್ರಿಯೆಯನ್ನು ಹೇಗೆ ನಡೆಸಬೇಕೆಂಬುದರ ಬಗ್ಗೆ ಸಾರಿಗೆ ನಿಗಮಗಳಿಗೆ ಸಲಹೆ, ಮಾರ್ಗದರ್ಶನ ನೀಡಲಿದೆ ಎಂದು ಅವರು ತಿಳಿಸಿದರು.
ಪಿಪಿಪಿ ಮಾದರಿಯಲ್ಲಿ ಸ್ಮಾರ್ಟ್ಕಾರ್ಡ್: ಸಮಿತಿಯು ಈ ತಿಂಗಳಾಂತ್ಯದಲ್ಲಿ ವರದಿ ನೀಡಲಿದ್ದು, ಇದರ ಆಧಾರದಲ್ಲಿ ಸ್ಮಾರ್ಟ್ಕಾರ್ಡ್ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಕೋಟ್ಯಂತರ ಸ್ಮಾರ್ಟ್ಕಾರ್ಡ್ ವಿತರಣೆ ಅಗತ್ಯವಿರುವ ಹಿನ್ನೆಲೆಯಲ್ಲಿ ಟೆಂಡರ್ ಕರೆಯಲಾಗುತ್ತದೆ. ಮಹಿಳೆಯರಿಗೆ ಉಚಿತವಾಗಿ ಸ್ಮಾರ್ಟ್ಕಾರ್ಡ್ ದೊರೆಯಲಿದೆ. ಪುರುಷರು ಪಾವತಿ ಆಧಾರದಲ್ಲಿ ಸ್ಮಾರ್ಟ್ಕಾರ್ಡ್ ಖರೀದಿಸಬೇಕಾಗುತ್ತದೆ. ಹೀಗೆ ಮಹಿಳಾ ಮತ್ತು ಪುರುಷ ಪ್ರಯಾಣಿಕರೆಲ್ಲರನ್ನು ಒಟ್ಟುಗೂಡಿಸಿದರೆ ಸುಮಾರು 2.5ಕೋಟಿಯಿಂದ 3 ಕೋಟಿ ಕಾರ್ಡ್ಗಳು ಬೇಕಾಗುತ್ತವೆ ಎಂದು ಅಂದಾಜಿಸಲಾಗಿದೆ ಎಂದು ಬೈರತಿ ಸುರೇಶ್ ತಿಳಿಸಿದರು.
ಸ್ಮಾರ್ಟ್ಕಾರ್ಡುಗಳನ್ನು ಖಾಸಗಿ-ಸರಕಾರಿ ಸಹಭಾಗಿತ್ವದಲ್ಲಿ ವಿತರಣೆ ಮಾಡಲಾಗುತ್ತದೆ. ಮಹಿಳೆಯರಿಗೆ ಉಚಿತವಾಗಿ ವಿತರಿಸಲಿದ್ದು, ಇದಕ್ಕೆ ತಗಲುವ ಸಂಸ್ಕರಣ ವೆಚ್ಚವನ್ನು ಸರಕಾರ ಭರಿಸಲಿದ್ದರೆ, ಪುರುಷ ಪ್ರಯಾಣಿಕರು ಹಣ ಕೊಟ್ಟು ಖರೀದಿಸಬೇಕಾಗುತ್ತದೆ. ಸ್ಮಾರ್ಟ್ಕಾರ್ಡ್ಗಳ ತಾಂತ್ರಿಕ ನೆರವು ಸೇರಿದಂತೆ ಇನ್ನಿತರ ಸಹಕಾರವನ್ನು ಖಾಸಗಿ ಸಂಸ್ಥೆಯೇ ನಿರ್ವಹಣೆ ಮಾಡಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ: ಪರಿಸರ ಸಂರಕ್ಷಣೆಗೆ ನಮ್ಮ ಸರಕಾರ ಆದ್ಯತೆ ನೀಡುತ್ತಿದ್ದು, ಎಲೆಕ್ಟ್ರಿಕ್ ಬಸ್ಗಳ ಖರೀದಿಯತ್ತ ಗಮನಹರಿಸಿದೆ. ಈ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳಿಗೆ 4 ಸಾವಿರಕ್ಕೂ ಅಧಿಕ ಎಲೆಕ್ಟ್ರಿಕ್ ಬಸ್ಗಳನ್ನು ಖರೀದಿಸಲಾಗುತ್ತದೆ ಎಂದರು.
ಸಭೆಯಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ದೀಪಾಚೋಳನ್, ಆಯುಕ್ತರು ಮತ್ತು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಸೆಲ್ವಮಣಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.