×
Ad

ಮನಮೋಹನ್ ಸಿಂಗ್ ಕುರಿತ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ನಟ ಪ್ರಕಾಶ್ ಬೆಳವಾಡಿ

Update: 2025-07-08 19:02 IST

ಪ್ರಕಾಶ್ ಬೆಳವಾಡಿ (credit: TOI) / ಬಿ.ಕೆ.ಹರಿಪ್ರಸಾದ್

ಬೆಂಗಳೂರು: ಡಾ.ಮನಮೋಹನ್ ಸಿಂಗ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಪ್ರಧಾನಮಂತ್ರಿ ಮಾಡಿದ್ದು, ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ನೀಡಿದ್ದ ಹೇಳಿಕೆಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನಟ ಪ್ರಕಾಶ್ ಬೆಳವಾಡಿ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಪ್ರಕಾಶ್‌ ಬೆಳವಾಡಿ ಅವರು ವಿಷಾದ ವ್ಯಕ್ತಪಡಿಸಿರುವ ಸಂದೇಶವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅವರು ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

"ಮಾಜಿ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ಅವರ ಬಗ್ಗೆ ಸುಳ್ಳು ಹೇಳಿಕೆಯನ್ನು ನೀಡಿದ್ದ ಸಾಮಾಜಿಕ ಕಾರ್ಯಕರ್ತಪ್ರಕಾಶ್ ಬೆಳವಾಡಿ ತಾವು ಆಡಿರುವ ಮಾತುಗಳನ್ನು ಹಿಂದಕ್ಕೆ ಪಡೆದು, ಆಗಿರುವ ಪ್ರಮಾದದ ಬಗ್ಗೆ ವಿಷಾದ ವ್ಯಕ್ತಪಡಿಸಿರುವುದನ್ನು ಸ್ವಾಗತಿಸುತ್ತೇನೆ" ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

"ಸಾಮಾನ್ಯವಾಗಿ ವಾಟ್ಸಪ್ ಯುನಿವರ್ಸಿಟಿಯ ಬಿಜೆಪಿಯ ಮಬ್ಭಕ್ತರು ಮಾಡುವ ಟ್ರೋಲ್ ಗಳಿಗೆ ಗಮನ ಹರಿಸುವುದಿಲ್ಲ. ಆದರೆ ಪ್ರಕಾಶ್ ಬೆಳವಾಡಿ ಸಾಮಾಜಿಕ ಕಾರ್ಯಕರ್ತರಾಗಿ, ನಟರೂ ಆಗಿರುವವರು ಸಾರ್ವಜನಿಕವಾಗಿ ಸುಳ್ಳನ್ನು ಹರಡಿಸುವುದನ್ನ ನಿರೀಕ್ಷಿಸಿರಲಿಲ್ಲ. ತಮ್ಮ ಅಪಾರ ಜ್ಞಾನ, ತಿಳುವಳಿಕೆ ಹಾಗೂ ಅಧ್ಯಯನದಿಂದ ದೇಶವನ್ನು ಮುನ್ನೆಡಸಿದ ಆರ್ಥಿಕ ತಜ್ಞರನ್ನು ಹೀಯಾಳಿಸುವುದು ತರವಲ್ಲ, ಅದಾಗ್ಯೋ ಭೂಮಿಯ ಮೇಲೆ ಜೀವಂತವಿಲ್ಲದ, ಉದಾತ್ತ "ಆತ್ಮ"ವನ್ನು ಆರೋಪಿಸುವುದು ಒಪ್ಪುವಂತದ್ದಲ್ಲ. 1991ರ ಅಸ್ಸಾಂ ನಿವಾಸಿ ಕಾನೂನು ಹಾಗೂ 2003ರ ಜನತಾ ಪ್ರಾತಿನಿಧ್ಯ ತಿದ್ದುಪಡಿ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಹೇಳಿಕೆ ನೀಡಿದ್ದೆ ಎಂದು ಬೆಳವಾಡಿಯವರನ್ನು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನಮ್ಮ ಪಕ್ಷದ ರಾಷ್ಟ್ರೀಯ ಮಾಧ್ಯಮ ವಕ್ತಾರರಾದ ಬ್ರಿಜೇಶ್ ಕಾಳಪ್ಪ ಅವರನ್ನು ಸಂಪರ್ಕಿಸಿ ಅವರ ಮೂಲಕ ವಿಷಾದ ವ್ಯಕ್ತಪಡಿಸಿರುವ ಅವರ ವಿಶಾಲ ಹೃದಯವನ್ನು ನಾನು ಪ್ರಶಂಸಿಸುತ್ತೇನೆ. ನಿಜವಾಗಿಯೂ ಪ್ರಜಾಪ್ರಭುತ್ವವಾದಿಗಳು ಇರಬೇಕಾದ್ದೂ ಹೀಗಿಯೇ...!" ಎಂದು ಬಿ.ಕೆ.ಹರಿಪ್ರಸಾದ್ ಪೋಸ್ಟ್‌ ಮಾಡಿದ್ದಾರೆ.

‘ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮನಮೋಹನ್ ಸಿಂಗ್ ಅವರನ್ನು ಅಸ್ಸಾಂ ರಾಜ್ಯದ ನಾಗರಿಕ ಎಂದು ಹೇಳಿ ರಾಜ್ಯಸಭೆಗೆ ಆಯ್ಕೆ ಮಾಡಿ ಪ್ರಧಾನಮಂತ್ರಿ ಮಾಡಲಾಯಿತು. ಇದು ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧದವಾದದ್ದು’ ಎಂದು ನಟ ಪ್ರಕಾಶ್ ಬೆಳವಾಡಿ ಹೇಳಿಕೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News