×
Ad

‘ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ಸಿಎಂ ತಗಾದೆ’ ; ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಮನವಿ

Update: 2025-06-02 19:09 IST

ಬೆಂಗಳೂರು : ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನಂತೆ ನಮ್ಮ ರಾಜ್ಯದ ಪಾಲಿನ ನೀರು ಬಳಸಿಕೊಳ್ಳಲು ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಬೇಕಿದೆ. ನ್ಯಾಯಧೀಕರಣದ ತೀರ್ಪು ಬಂದಾಗ ಸುಮ್ಮನಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಈಗ ಹಠಾತ್ತನೇ ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿರುವುದು ತೀವ್ರ ಆಶ್ಚರ್ಯ ತಂದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿಯ ತಗಾದೆ ಹಿನ್ನೆಲೆಯಲ್ಲಿ, ಯೋಜನೆ ಜಾರಿ ಮಾಡಿ ರಾಜ್ಯ ಹಾಗೂ ರೈತರ ಹಿತ ಕಾಯಲು ಎಲ್ಲ ಸಂಸದರು, ಕೇಂದ್ರ ಸಚಿವರು ಸಹಕರಿಸಬೇಕು ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನಮ್ಮ ಸಿಎಂ ಸಿದ್ದರಾಮಯ್ಯ ಅವರಿಗೆ ಮೇ 9 ರಂದು ಪತ್ರ ಬರೆದು ‘ಆಣೆಕಟ್ಟೆ ಎತ್ತರ ಹೆಚ್ಚಳ ಮಾಡಿದರೆ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ ಜಿಲ್ಲೆಗಳು ಪ್ರವಾಹ ಸಮಸ್ಯೆ ಎದುರಿಸುತ್ತವೆ. ಹೀಗಾಗಿ ಈ ತೀರ್ಮಾನ ಮರುಪರಿಶೀಲಿಸಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ’. ಅವರ ಈ ಪತ್ರ ನಮಗೆ ಆಘಾತ ತಂದಿದೆ. ಕಾರಣ ಇದುವರೆಗೂ ಈ ಯೋಜನೆ ವಿಚಾರವಾಗಿ ಮಹಾರಾಷ್ಟ್ರ ಎಂದೂ ಆಕ್ಷೇಪ ಸಲ್ಲಿಸಿರಲಿಲ್ಲ ಎಂದು ಅವರು ಹೇಳಿದರು.

2010ರ ತೀರ್ಪಿನ ಬಗ್ಗೆ ಮಹಾರಾಷ್ಟ್ರ ಎಲ್ಲೂ ಪ್ರಶ್ನೆ ಎತ್ತಿರಲಿಲ್ಲ. ಈ ಯೋಜನೆ ಜಾರಿ ಮಾಡಲಿ ಎಂದು ಮಹಾರಾಷ್ಟ್ರ ಕೂಡ ಅಫಿಡವಿಟ್ ಸಲ್ಲಿಸಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಈ ಪತ್ರ ಬರೆದಿದ್ದಾರೆ. ಈ ಯೋಜನೆ ನ್ಯಾಯಾಧಿಕರಣದಲ್ಲಿ ನಮಗೆ ಸಿಕ್ಕಿರುವ ಹಕ್ಕು. ಹೀಗಾಗಿ ನಮ್ಮ ಮುಖ್ಯಮಂತ್ರಿ ಸಹ ಒಂದೆರಡು ದಿನಗಳಲ್ಲಿ ಪತ್ರ ಬರೆಯಲಿದ್ದಾರೆ. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಎಲ್ಲ ಸಂಸದರು, ಕೇಂದ್ರದ ಸಚಿವರು ಈ ವಿಚಾರವಾಗಿ ನಮಗೆ ಸಹಕಾರ ನೀಡಬೇಕು ಎಂದು ಶಿವಕುಮಾರ್ ಕೋರಿದರು.

ಕೇಂದ್ರ ಸಚಿವ ವಿ.ಸೋಮಣ್ಣ ಅವರು ಕೇಂದ್ರ ಜಲಶಕ್ತಿ ಸಚಿವಾಲಯದ ಭಾಗ. ಆಲಮಟ್ಟಿ ಯೋಜನೆ ನಮ್ಮ ರಾಜ್ಯದ ಹಿತ. ನಮಗೆ ನೆರೆ ರಾಜ್ಯಗಳ ಜತೆ ತಿಕ್ಕಾಟ ಇಷ್ಟವಿಲ್ಲ. ಈ ಯೋಜನೆ ತಡವಾಗುತ್ತಿರುವುದರಿಂದ ಯೋಜನೆ ವೆಚ್ಚ ವಿಪರೀತ ಏರಿಕೆಯಾಗುತ್ತಿದೆ. ಯೋಜನೆ ಭೂಸ್ವಾಧೀನಕ್ಕೆ 1 ಲಕ್ಷ ಕೋಟಿ ರೂಪಾಯಿ ಬೇಕಾಗಿದೆ. ನಮ್ಮ ಪಾಲಿನ ನೀರು ಬಳಸಲು ಈ ಯೋಜನೆ ಮುಖ್ಯ ಎಂದು ಉಪ ಮುಖ್ಯಮಂತ್ರಿ ಪ್ರತಿಪಾದಿಸಿದರು.

ಮಹಾರಾಷ್ಟ್ರದಲ್ಲಿ ಪ್ರವಾಹ ಎದುರಾದರೆ ಅದನ್ನು ಅವರು ಆಂತರಿಕವಾಗಿ ಸರಿಪಡಿಸಿಕೊಳ್ಳಲಿ. ನಾವು ಈ ವಿಚಾರವಾಗಿ ಕೇಂದ್ರ ಸಚಿವರು ಹಾಗೂ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಒತ್ತಡ ಹಾಕಬೇಕಿದೆ. ಈ ವಿಚಾರದಲ್ಲಿ ನಾವು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು. 2013ರಿಂದ ಈ ಯೋಜನೆಗೆ ಗೆಜೆಟ್ ನೋಟಿಫಿಕೇಶನ್ ಆಗಬೇಕು ಎಂದು ಕಾಯುತ್ತಿದ್ದೇವೆ. ಇನ್ನು ಎಷ್ಟು ದಿನ ಕಾಯಬೇಕು? ಎಂದು ಶಿವಕುಮಾರ್ ಪ್ರಶ್ನಿಸಿದರು.

ನಮ್ಮ ರೈತರ ಹಿತ ಕಾಯಲು ನೀವು ಯಾವಾಗ ಎಲ್ಲಿಗೆ ಕರೆಯುತ್ತೀರೋ ಅಲ್ಲಿಗೆ ಬರಲು ನಮ್ಮ ಸರಕಾರ ಸಿದ್ಧವಿದೆ. ಮಹಾರಾಷ್ಟ್ರ ಸಿಎಂ ಹಾಗೂ ಅದಕ್ಕೆ ನಮ್ಮ ಸಿಎಂ ಬರೆಯುವ ಪತ್ರವನ್ನು ಎಲ್ಲ ಸಂಸದರಿಗೆ ರವಾನಿಸುತ್ತೇವೆ. ನ್ಯಾಯಾಧಿಕರಣ ತೀರ್ಪಿನ ಅನ್ವಯ ನಮ್ಮ ಪಾಲಿನ ನೀರನ್ನು ಪಡೆಯಲು ಆಲಮಟ್ಟಿ ಅಣೆಕಟ್ಟನ್ನು 524 ಮೀಟರ್ ಗೆ ಎತ್ತರಿಸುವ ಯೋಜನೆ ವಿಚಾರವಾಗಿ ನಾನು ಹಾಗೂ ಮುಖ್ಯಮಂತ್ರಿ, ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೆವು. ಈ ಬಗ್ಗೆ ಸಭೆ ಕರೆದು ಚರ್ಚೆ ಮಾಡಿ ಅಧಿಸೂಚನೆ ಹೊರಡಿಸಿ ಎಂದು ಮನವಿ ಮಾಡಿದ್ದೆವು ಎಂದು ಅವರು ಹೇಳಿದರು.

ಕೇಂದ್ರ ಸಚಿವರು ನಮ್ಮ ಮನವಿ ಪರಿಗಣಿಸಿ ಸಭೆಗೆ ದಿನಾಂಕ ನಿಗದಿ ಮಾಡಿದ್ದರು. ಹೀಗಾಗಿ ನಾನು ಸಚಿವರು, ಕಾನೂನು ತಜ್ಞರು ಹಾಗೂ ಆ ಭಾಗದ ಶಾಸಕರ ಜತೆ ಆಂತರಿಕ ಸಭೆ ಮಾಡಿ ಸಲಹೆ ಪಡೆದಿದ್ದೆ. ಸಭೆಗೆ ತೆರಳುವಾಗ ಈ ಸಭೆ ಮುಂದೂಡಲಾಗಿದೆ ಎಂದು ಸಂದೇಶ ಬಂದಿತು. ಯುದ್ಧದ ವಾತಾವರಣ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿರಬಹುದು ಎಂದು ಭಾವಿಸಿದ್ದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಮಹಾರಾಷ್ಟ್ರ ಸಿಎಂ ಪತ್ರದ ಹಿಂದೆ ರಾಜಕೀಯ ಇದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರ ರಾಜಕೀಯವೋ ಅಲ್ಲವೋ ಎಂಬ ಪ್ರತಿಕ್ರಿಯೆ ನಾನು ನೀಡುವುದಿಲ್ಲ. ನಮ್ಮ ರಾಜ್ಯದ ಹಿತಾಸಕ್ತಿ ಬಗ್ಗೆ ಮಾತ್ರ ಮಾತನಾಡುತ್ತೇನೆ. ನಮ್ಮ ಪಾಲಿನ ಹಕ್ಕಿನ ನೀರನ್ನು ಬಳಸಲು ಯೋಜನೆ ಜಾರಿಯಾಗುವುದಷ್ಟೇ ನಮಗೆ ಮುಖ್ಯ ಎಂದು ಹೇಳಿದರು.

ನಾನು ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ನಿಮ್ಮ ಪಾಲಿನ ನೀರನ್ನು ನೀವು ಪಡೆದು, ನಮ್ಮ ಪಾಲಿನ ಹಕ್ಕನ್ನು ಪಡೆಯಲು ನಮಗೆ ಬಿಡಿ ಎಂದು ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಇದಕ್ಕೆ ಸಂಬಂಧಿಸಿದ ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ವ್ಯಕ್ತಪಡಿಸಿರುವ ಆಕ್ಷೇಪಕ್ಕೆ ಯಾವ ವೈಜ್ಞಾನಿಕ ನೆಲೆ ಇದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಏನೂ ಇಲ್ಲ. ಅವರ ಆಕ್ಷೇಪಗಳ ಬಗ್ಗೆ ನ್ಯಾಯಾಧಿಕರಣದಲ್ಲಿ ಚರ್ಚೆ ಮಾಡಿದ ನಂತರವೇ ತೀರ್ಪು ಬಂದಿದೆ. ಈಗ ಕೇಂದ್ರ ಸರಕಾರದ ಅಧಿಸೂಚನೆ ಮಾತ್ರ ಬಾಕಿ ಇದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News