ಬೆಲೇಕೇರಿ ಅದಿರು ನಾಪತ್ತೆ ಪ್ರಕರಣ | ಅನರ್ಹತೆ ಭೀತಿಯಿಂದ ಸತೀಶ್ ಸೈಲ್ ಪಾರು
Update: 2024-12-23 13:16 IST
ಸತೀಶ್ ಸೈಲ್
ಬೆಂಗಳೂರು : ಬೆಲೇಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನರ್ಹತೆ ಭೀತಿಯಿಂದ ಸದ್ಯಕ್ಕೆ ಸತೀಶ್ ಸೈಲ್ ಪಾರಾಗಿದ್ದಾರೆ.
ಜನಪ್ರತಿನಿಧಿಗಳ ನ್ಯಾಯಾಲಯ ಕಾರವಾರ ಶಾಸಕ ಸತೀಶ್ ಸೈಲ್ ದೋಷಿಯನ್ನಾಗಿಸಿದ ತೀರ್ಪಿಗೆ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಅಲ್ಲದೆ, ಕಾರವಾರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸದಂತೆ ಮಧ್ಯಂತರ ಆದೇಶ ನೀಡಿದೆ. ಆದರೆ ವಿಧಾನಸಭಾ ಕಲಾಪದಲ್ಲಿ ಸತೀಶ್ ಸೈಲ್ ಪಾಲ್ಗೊಳ್ಳುವಂತಿಲ್ಲ. ಕಲಾಪದಲ್ಲಿ ಮತ ಚಲಾಯಿಸುವಂತಿಲ್ಲ, ವೇತನ ಭತ್ಯೆ ಪಡೆಯುವಂತಿಲ್ಲ. ಸತೀಶ್ ಸೈಲ್ ಮೇಲ್ಮನವಿ ಇತ್ಯರ್ಥವಾಗುವವರೆಗೆ ಮಧ್ಯಂತರ ರಿಲೀಫ್ ನೀಡಿ, ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ನೀಡಿದೆ.
ಈ ಹಿಂದೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ 7 ವರ್ಷ ಕಠಿಣ ಶಿಕ್ಷೆ ವಿಧಿಸಿತ್ತು. ಹೀಗಾಗಿ ಶಿಕ್ಷೆಗೆ ತಡೆ ಕೋರಿ ಸತೀಶ್ ಸೈಲ್ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.