×
Ad

Bengaluru | ಐಸಿಡಿಎಸ್ ಅನುದಾನ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಿಸುವಂತೆ ಆಗ್ರಹಿಸಿ ಧರಣಿ

Update: 2026-07-10 22:25 IST

ಬೆಂಗಳೂರು : ಐಸಿಡಿಎಸ್ ಅನುದಾನ ಹೆಚ್ಚಳ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಲಾಯಿತು.

ರಾಜ್ಯ ಸರಕಾರದ ಚುನಾವಣೆ ಭರವಸೆಯಂತೆ 2026ರ ಮಾ.23-24ರ ಸಭೆಯ ಚರ್ಚೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರೂ., ಸಹಾಯಕಿಗೆ 10 ಸಾವಿರ ರೂ. ವೇತನ ಹೆಚ್ಚಳ ಮಾಡಬೇಕು. ಎಲ್‍ಕೆಜಿ, ಯುಕೆಜಿಯನ್ನು ಎಲ್ಲ ಅಂಗನವಾಡಿ ಕೇಂದ್ರಗಳಿಗೆ ವಿಸ್ತರಿಸಬೇಕು ಎಂದು ಧರಣಿನಿರತರು ಒತ್ತಾಯಿಸಿದರು.

3ರಿಂದ 6 ವರ್ಷದ ಮಕ್ಕಳಿಗೆ ಆರಂಭಿಕ ಬಾಲ ಆರೈಕೆ, ಶಿಕ್ಷಣ ಮತ್ತು ಅಭಿವೃದ್ಧಿ ಹಕ್ಕನ್ನು ಕಾನೂನಿನ ಮೂಲಕ ಖಾತರಿಪಡಿಸಬೇಕು. ಮಕ್ಕಳಿಗೆ ಸಮವಸ್ತ್ರ, ಪುಸ್ತಕಗಳು ಮತ್ತು ಆಟಿಕೆಗಳನ್ನು ಒದಗಿಸಬೇಕು. 3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಎಲ್ಲಾ ಅಂಗನವಾಡಿಗಳನ್ನು ಅಂಗನವಾಡಿ- ಶಿಶುಪಾಲನಾ ಕೇಂದ್ರಗಳಾಗಿ ಪರಿವರ್ತಿಸಬೇಕು. 2011ರಿಂದ ನಿವೃತ್ತಿಯಾದವರಿಗೆ ಗ್ರ್ಯಾಚ್ಯುಟಿ ಪಾವತಿಸಬೇಕು ಎಂದು ಆಗ್ರಹಿಸಿದರು.

ಬಿಎಲ್‍ಒ-ಎಸ್‍ಐಆರ್ ಹಾಗೂ ಇತರೆ ಸಮೀಕ್ಷೆ ಕೆಲಸಗಳಿಂದ ಅಂಗನವಾಡಿ ನೌಕರರನ್ನು ಮುಕ್ತಗೊಳಿಸಬೇಕು. 50 ವರ್ಷ ಮೇಲ್ಪಟವರನ್ನು, ಸಹಾಯಕಿ ಇಲ್ಲದಿದ್ದಾರೆ ಎಲ್‍ಕೆಜಿ-ಯುಕೆಜಿಗೆ ಆಯ್ಕೆಯಾದ. ತೀವ್ರ ಖಾಯಿಲೆ ಇರುವವರನ್ನು ಬಿಎಲ್‍ಒ ಕೆಲಸದಿಂದ ಬಿಡುಗಡೆ ಮಾಡಬೇಕು. ಇಲಾಖೆಯೇತರ ಯಾವುದೇ ಕೆಲಸಗಳನ್ನು ವಹಿಸಬಾರದು ಎಂದು ಒತ್ತಾಯಿಸಿದರು.

ಮೊಬೈಲ್, ಡೇಟಾ ಹಾಗೂ ನಿರ್ವಹಣಾ ವೆಚ್ಚಗಳನ್ನು ಮರುಪಾವತಿಸಬೇಕು. ಡಿಜಿಟಲೀಕರಣವನ್ನು ಮೇಲ್ವಿಚಾರಣೆ ಅಥವಾ ಕಿರುಕುಳದ ಸಾಧನವಾಗಿ ಬಳಸಬಾರದು. ಡಿಜಿಟಲ್ ಕೆಲಸಕ್ಕಾಗಿ ಉತ್ತಮ ಗುಣಮಟ್ಟದ ಟ್ಯಾಬ್ಲೆಟ್‍ಗಳು ಮತ್ತು ಡೇಟಾ ಪ್ಯಾಕ್‍ಗಳನ್ನು ಒದಗಿಸಬೇಕು. ಎಫ್‍ಆರ್‌ಎಸ್ ಮತ್ತು ಇ-ಕೆವೈಸಿ ಕಡ್ಡಾಯವಾಗಿ ಹಿಂಪಡೆಯಬೇಕು. ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರು, ಸೂಕ್ತ ಮೂಲಸೌಕರ್ಯ, ಗ್ಯಾಸ್ ಸಂಪರ್ಕ, ಅಡುಗೆ ಸಲಕರಣೆಗಳು ಹಾಗೂ ಆಧುನಿಕ ಅಡುಗೆ ಉಪಕರಣಗಳನ್ನು ಒದಗಿಸಬೇಕು. ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವ ಕೇಂದ್ರಗಳ ಬಾಡಿಗೆಯನ್ನು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಹೆಚ್ಚಿಸಬೇಕು ಎಂದು ತಿಳಿಸಿದರು.

ಧರಣಿಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರದಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ, ಟಿ.ಲೀಲಾವತಿ, ರಾಜೇಶ್ವರಿ, ರಮಾ, ನಾಗರತ್ನ ಮತ್ತಿತರರು ಹಾಜರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News