×
Ad

ಜಿಬಿಎ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಮುಂದುವರೆಯಲಿದೆ : ಸಿಎಂ ಡಿ.ಕೆ.ಶಿವಕುಮಾರ್

‘ಈವರೆಗೂ 435 ಕಿ.ಮೀ. ಉದ್ದದ ಪಾದಚಾರಿ ಮಾರ್ಗ ಒತ್ತುವರಿ ತೆರವು’

Update: 2026-07-10 20:17 IST

ಬೆಂಗಳೂರು : ಜುಲೈ 1ರಿಂದ ಇಲ್ಲಿಯವರೆಗು ಒಟ್ಟು 435 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳಲ್ಲಿ ಒಟ್ಟು 9,878 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ನಗರದ ವಿವಿಧ ಕಡೆಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಹಾಗೂ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಕುರಿತು ಸಿಎಂ ಡಿ.ಕೆ.ಶಿವಕುಮಾರ್ ಶುಕ್ರವಾರ ನಗರ ಪ್ರದಕ್ಷಿಣೆ ನಡೆಸಿ ಬೆಂಗಳೂರು ನಗರಾಭಿವೃದ್ದಿ ಸಚಿವ ಕೃಷ್ಣಬೈರೇಗೌಡರಿಂದ ಮಾಹಿತಿ ಪಡೆದರು. ನಂತರ ಜಯನಗರದ ಅಶೋಕ ಸ್ಥಂಭದ ಬಳಿ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಇದುವರೆಗಿನ ಒತ್ತುವರಿಯಲ್ಲಿ ಒಟ್ಟು 1,340 ಅಂಗಡಿಗಳಿದ್ದವು, ಸುಮಾರು 1,800 ತಳ್ಳುವ ಗಾಡಿಗಳಿದ್ದವು. ತಳ್ಳುವ ಗಾಡಿಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ. ಸುಮಾರು 2,267 ಅಂಗಡಿ ಮುಂಭಾಗದಲ್ಲಿ ತಗಡಿನ ಶೀಟ್ ಗಳನ್ನು ಅಳವಡಿಸಲಾಗಿತ್ತು ಅದನ್ನೂ ಸಹ ತೆಗೆಯಲಾಗಿದೆ. 2,300 ಮೆಟ್ಟಿಲು, ರ್ಯಾಂಪ್‌ ಗಳು, 2,662 ಪಿಲ್ಲರ್‌ ಗಳು ಬೋರ್ಡ್ ಗಳು, 2,247 ಶೆಡ್ ಗಳನ್ನು ತೆರವುಗೊಳಿಸಲಾಗಿದೆ. ತೆರವಾದ ತ್ಯಾಜ್ಯವನ್ನು ವಿಲೇವಾರಿ ಮಾಡಿದ್ದು ಜೊತೆಗೆ ಪಾದಚಾರಿ ಮಾರ್ಗಗಳನ್ನು ದುರಸ್ಥಿ ಮಾಡುವ ಕೆಲಸವನ್ನೂ ಮಾಡಿಕೊಂಡು ಬರಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.

ಬೀದಿ ಬದಿ ವ್ಯಾಪಾರಿಗಳು ನಮ್ಮವರೇ: ಬೀದಿಬದಿ ವ್ಯಾಪಾರಿಗಳು ನಮ್ಮವರೇ, ಯಾರೂ ಆತಂಕ ಪಡಬಾರದು. ಖಾಸಗಿ ಅಥವಾ ಸರಕಾರಿ ಜಾಗ ಇರಬಹುದು ಯಾವುದೋ ಜಾಗದಲ್ಲಿ ವ್ಯಾಪಾರ ಮಾಡುವುದಕ್ಕೆ ಆಗುವುದಿಲ್ಲ. ಬೀದಿಬದಿ ವ್ಯಾಪಾರಿಗಳಿಗೂ ನಮ್ಮ ಸರಕಾರ ಅವಕಾಶ ಮಾಡಿಕೊಡುತ್ತದೆ. ಬೀದಿ ಬದಿ ವ್ಯಾಪಾರಿಗಳು ಬದುಕಬೇಕು ಎಂಬ ಆಸೆ ನಮಗೂ ಇದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ನಾವು ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿದ್ದೆವು. ಅದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು, ಈಗ ಮತ್ತೆ ಈ ಪ್ರಕ್ರಿಯೆ ಪ್ರಾರಂಭ ಮಾಡುತ್ತೇವೆ. ನಿಮಗಾಗಿಯೇ ಸೂಚಿತ ಜಾಗಗಳನ್ನು ಗುರುತಿಸಲಾಗುವುದು. ಅಲ್ಲಿ ನೀವು ವ್ಯಾಪಾರ ನಡೆಸಬಹುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಬೆಂಗಳೂರಿನ ಸುಧಾರಣೆಗಾಗಿ ನಾವು ಟೀಕೆಗಳನ್ನು ಸ್ವೀಕರಿಸಲು ಸಿದ್ಧರಿದ್ದೇವೆ. ರೌಡಿಗಳು ವ್ಯಾಪಾರಿಗಳಿಂದ ವಸೂಲಿ ಮಾಡುವ ಕೆಲಸಗಳು ನಡೆದಿವೆ. ಇದರ ಹಿಂದೆ ದೊಡ್ಡ ಮಾಫಿಯಾ ಇದೆ. ಈ ಬಗ್ಗೆ ಮಾಹಿತಿಯೂ ನಮಗಿದೆ. ಪೊಲೀಸ್ ಹಾಗೂ ಜಿಬಿಎ ಅಧಿಕಾರಿಗಳಿಗೆ ನಾವು ಸ್ವಾತಂತ್ರ್ಯ ನೀಡಿದ್ದೇವೆ. ಸ್ವಚ್ಚ ಬೆಂಗಳೂರು ನಮ್ಮ ಗುರಿ. ಇಡೀ ದೇಶ ಬೆಂಗಳೂರನ್ನು ಗಮನಿಸುತ್ತಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಈಗಾಗಲೇ ಮೂರು ವರ್ಷಗಳಲ್ಲಿ ಸುಮಾರು 900ಕ್ಕೂ ಹೆಚ್ಚು ಪಾದಚಾರಿಗಳ ಸಾವಾಗಿದೆ. ಅದ್ದರಿಂದ ನಾಗರಿಕರು ಅನುಕೂಲಕ್ಕಾಗಿ ನಾವು ಈ ಕೆಲಸ ಮಾಡುತ್ತಿದ್ದೇವೆ. ಇದೇನು ನಮ್ಮ ಸ್ವಂತ ಲಾಭಕ್ಕಾಗಿ ಮಾಡುತ್ತಿರುವ ಕೆಲಸವಲ್ಲ. ಪಾದಚಾರಿ ಮಾರ್ಗ ಇಲ್ಲ ಎಂದರೆ ಜನ ರಸ್ತೆಯಲ್ಲಿ ನಡೆಯುತ್ತಾರೆ. ಆಗ ವಾಹನಗಳ ಓಡಾಟಕ್ಕೂ ತೊಂದರೆ ಉಂಟಾಗಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

 

ಬೀದಿಬದಿ ವ್ಯಾಪಾರಿಗಳಿಗೆ ತೊಂದರೆಯಿಲ್ಲದ ಜಾಗದ ವ್ಯವಸ್ಥೆ: ಸಿಎಂ ಭರವಸೆ

ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂದು ಆರೋಪ ಮಾಡಲಾಗುತ್ತಿದೆ ಎಂದು ಕೇಳಿದಾಗ, “ಆರೋಪ ಮಾಡುವವರೆಲ್ಲಾ ಆರೋಪ ಮಾಡಲಿ. ಅವರಿಗೆ ಬೇರೆ ಜಾಗಗಳನ್ನು ನಾವು ಗುರುತಿಸಿ ನೀಡುತ್ತೇವೆ. ಹೆಚ್ಚು ವಾಹನಗಳು ಓಡಾಡುವ ಕಡೆ ಹಾಗೂ ಯಾರದೋ ಆಸ್ತಿಯ ಮುಂದೆ ವ್ಯಾಪಾರ ಮಾಡಲು ಅವಕಾಶವಿಲ್ಲ. ಯಾವುದೇ ತೊಂದರೆಯಿಲ್ಲದ ಜಾಗವನ್ನು ನೋಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ಜಯನಗರ ಮಾರುಕಟ್ಟೆ ಬಗ್ಗೆ ಶೀಘ್ರ ತೀರ್ಮಾನ..:

ಜಯನಗರ ಮಾರುಕಟ್ಟೆ ಬಗ್ಗೆ ಸದ್ಯದಲ್ಲೇ ತೀರ್ಮಾನ ಮಾಡಲಾಗುವುದು. ಅರ್ಧ ಕಟ್ಟಡ ನಿರ್ಮಾಣವಾಗಿದೆ. ಇನ್ನರ್ಧ ಕೆಲಸವಾಗಬೇಕು. ಶೀಘ್ರದಲ್ಲೇ ಈ ಕೆಲಸವನ್ನೂ ಮಾಡಲಾಗುವುದು. ಯಾವುದಾದರೂ ಒಂದು ಯೋಜನೆಯ ಅಡಿಯಲ್ಲಿ ಈ ಕೆಲಸ ಮಾಡಲಾಗುವುದು. ನಮ್ಮ ಆಸ್ತಿಗಳನ್ನು ರಕ್ಷಣೆ ಮಾಡಿ ನಾಗರಿಕರಿಗೆ ಗೌರವ ಕೊಡುವಂತಹ ಕೆಲಸಗಳನ್ನು ನಾವು ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News