ಜೂ.22ಕ್ಕೆ ಬಿಡದಿ ಟೌನ್ಶಿಪ್ ಯೋಜನೆ ಕೈಬಿಡಲು ಆಗ್ರಹಿಸಿ ‘ಬೈರಮಂಗಲ ಚಲೋ’
ರಾಮನಗರ/ಬೆಂಗಳೂರು : ರಾಜ್ಯ ಸರಕಾರ ಫಲವತ್ತಾದ ಕೃಷಿ ಭೂಮಿಯನ್ನು ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್ಶಿಪ್ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜೂ.22ರಂದು ಬೈರಮಂಗಲ ಚಲೋ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.
ಶನಿವಾರ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ರೈತ ಸಂಘದ ಉಪಾಧ್ಯಕ್ಷ ಮಲ್ಲಯ್ಯ, ಸರಕಾರ ಯೋಜನೆಗಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಕೂಡಲೇ 3 ಸಾವಿರಕ್ಕೂ ಹೆಚ್ಚು ರೈತರು ಭೂಮಿ ಕೊಡಲು ಒಪ್ಪಿಗೆ ಇಲ್ಲ ಎಂದು ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ, ರೈತರು ಅಂದಿನಿಂದಲೂ ಇಂದಿನವರೆಗೂ ನಿರಂತರವಾಗಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಾ ಬಂದಿದ್ದಾರೆ ಎಂದರು.
ಹಲವು ಜನಪರ ಸಂಘಟನೆಗಳು ಸೇರಿದಂತೆ ಸಂಯುಕ್ತ ಹೋರಾಟ-ಕರ್ನಾಟಕ ಈ ಚಳವಳಿಗೆ ಬೆಂಬಲವಾಗಿ ನಿಂತಿವೆ. ರೈತರ ತೀವ್ರ ವಿರೋಧದ ನಡುವೆಯೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಅಂತಿಮ ಅಧಿಸೂಚನೆ ಹೊರಡಿಸಿರುವುದು ಖಂಡನೀಯ. ಇದನ್ನು ತಡೆಗಟ್ಟದಿದ್ದಲ್ಲಿ ಈ ಗ್ರಾಮಗಳ ರೈತ ಕುಟುಂಬಗಳು ಮತ್ತು ಕಾರ್ಮಿಕ ಕುಟುಂಬಗಳು ಬೀದಿ ಪಾಲಾಗುತ್ತವೆ ಮತ್ತು ಬೆಂಗಳೂರಿಗೆ ಸರಬರಾಜಾಗುತ್ತಿದ್ದ ತರಕಾರಿ, ಹಾಲು, ಮೊಸರು, ಬೆಣ್ಣೆ ಇತರೆ ಉತ್ಪನ್ನಗಳು ನಿಂತುಹೋಗುತ್ತವೆ ಎಂದು ಮಲ್ಲಯ್ಯ ತಿಳಿಸಿದರು.
ಆದುದರಿಂದ ರಾಜ್ಯ ರೈತ ಸಂಘವು ಬಿಡದಿ ಹೋಬಳಿಯ ರೈತರ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಬೆಂಬಲಿಸಿ ಜೂ.22ರಂದು ಬಿಡದಿಯ ಬಿಜಿಎಸ್ ವೃತ್ತದಿಂದ ಕಂಚುಗಾರನಹಳ್ಳಿ, ಭೈರಮಂಗಲದ ಹೋರಾಟದ ಸ್ಥಳದವರೆಗೂ ಬೈಕ್ ಜಾಥಹಮ್ಮಿಕೊಂಡಿದೆ. ಬೆಂ.ದಕ್ಷಿಣ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ರೈತರು ಈ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಅವರು ಮಾಹಿತಿ ನೀಡಿದರು.
ಹೋರಾಟದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಚಾಮರಸಮಾಲೀಪಾಟೀಲ್, ಸಂಯುಕ್ತ ಹೋರಾಟ ಕರ್ನಾಟಕ ಪದಾಧಿಕಾರಿಗಳಾದ ಎಸ್.ವರಲಕ್ಷ್ಮಿ, ನೂರ್ ಶ್ರೀಧರ್, ಟಿ.ಯಶವಂತ, ರೈತ ಹೋರಾಟಗಾರರಾದ ಜೆ.ಎಂ.ವೀರಸಂಗಯ್ಯ, ಎ.ಎಂ.ಮಹೇಶ್ ಪ್ರಭು, ಎ.ಗೋವಿಂದರಾಜು ಎನ್.ಡಿ.ವಸಂತ ಕುಮಾರ್, ರವಿಕಿರಣ್ ಪುಣಚ ಸೇರಿದಂತೆ ಸಾವಿರರು ಜನ ಭಾಗವಹಿಸಲಿದ್ದಾರೆ ಎಂದು ಮಲ್ಲಯ್ಯ ತಿಳಿಸಿದರು.
ಸಭೆಯಲ್ಲಿ ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರ್ ಸ್ವಾಮಿ, ರೈತ ಸಂಗದ ರಾಜ್ಯ ಸಂಚಾಲಕ ಮುನಿರಾಜು, ಜಿಲ್ಲಾಧ್ಯಕ್ಷರಾದ ಕೃಷ್ಣಯ್ಯ ಚಂದ್ರಶೇಖರ್, ರಮ್ಯ ರಾಮಣ್ಣ, ರತ್ನಮ್ಮ, ನಾಗರಾಜು ಸೇರಿದಂತೆ 9 ಜಿಲ್ಲೆಯ ಪದಾಧಿಕಾರಿಗಳು ಭಾಗವಹಿಸಿದ್ದರು.