×
Ad

ಕಂದಾಯ | ‘ಲ್ಯಾಂಡ್ ಸ್ಟಾಕ್ ಯೋಜನೆ’ಯಡಿ ಏಕರೂಪದಲ್ಲಿ ದಾಖಲೆಗಳ ನಿರ್ವಹಣೆ : ಸಿಎಂ ಸಿದ್ದರಾಮಯ್ಯ

Update: 2026-03-06 18:18 IST

ಬೆಂಗಳೂರು : ಕರ್ನಾಟಕ ಲ್ಯಾಂಡ್ ಸ್ಟಾಕ್ ಯೋಜನೆಯಡಿ ಭೂಮಿ, ಮೋಜಿಣಿ, ಕಾವೇರಿ, ಇ-ಸ್ವತ್ತು, ಇ-ಆಸ್ತಿಯಲ್ಲಿರುವ ಜಮೀನು/ಆಸ್ತಿಯ ದತ್ತಾಂಶಗಳನ್ನು ಜಿಐಎಸ್-ಆಧಾರಿತ ಡಿಜಿಟಲ್ ವೇದಿಕೆಯಲ್ಲಿ ಸಮಗ್ರವಾಗಿ ಕ್ರೋಢೀಕರಿಸಿ ಏಕರೂಪದಲ್ಲಿ ದಾಖಲೆಗಳನ್ನು ನಿರ್ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ 2026-27ನೆ ಸಾಲಿನ ಬಜೆಟ್ ಮಂಡನೆ ಮಾಡಿದ ಅವರು, ಭೂಮಿ ತಂತ್ರಾಂಶವನ್ನು ಪ್ರಸ್ತುತ ತಂತ್ರಜ್ಞಾನಕ್ಕೆ ತಕ್ಕಂತೆ ಸಮಗ್ರವಾಗಿ ಆಧುನೀಕರಿಸುವುದರ ಮೂಲಕ 10ಕ್ಕೂ ಹೆಚ್ಚು ಇಲಾಖೆಗಳೊಂದಿಗೆ ಸಂಪರ್ಕ ಹೊಂದಿರುವ ‘ಭೂಮಿ-8.0’ ಸಾಫ್ಟ್‌ ವೇರ್ ಅನ್ನು ಸುಮಾರು 50 ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಕಂದಾಯ ಇಲಾಖೆಯ 43 ಸೇವೆಗಳ ಪಾರದರ್ಶಕತೆ ಮತ್ತು ನಿಖರತೆಯನ್ನು ಕಾಯ್ದುಕೊಳ್ಳಲು ಇ-ಕೆವೈಸಿ ಮತ್ತು ಫೇಸ್ ರೆಕಗ್ನಿಷನ್ ಕಡ್ಡಾಯಗೊಳಿಸಲಾಗುವುದು ಮತ್ತು 'ಕುಟುಂಬ', ‘ಫ್ರೂಟ್ಸ್' ಮತ್ತು ‘ಭೂಮಿ' ದತ್ತಾಂಶಗಳನ್ನು ಸಂಯೋಜಿಸಿ, ನಿರ್ಣಯ ನೆರವು ವ್ಯವಸ್ಥೆ ಸೌಲಭ್ಯ ಒದಗಿಸಲಾಗುವುದು ಎಂದು ಅವರು ಹೇಳಿದರು.

ಭೂ ವ್ಯಾಜ್ಯಗಳ ಇತ್ಯರ್ಥದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಾತ್ರಿಪಡಿಸಲು 'ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ' ಮತ್ತು ‘ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ'ಗಳ ಕಲಾಪಗಳನ್ನು ಸಿಸಿಎಂಎಸ್ ಮತ್ತು ಆರ್‍ಸಿಸಿಎಂಎಸ್ ತಂತ್ರಾಂಶಗಳನ್ನು ಸಂಯೋಜಿಸಿ, ಇದರೊಂದಿಗೆ ಎಲ್ಲ ಕಂದಾಯ ನ್ಯಾಯಾಲಯಗಳ ಕಲಾಪಗಳನ್ನು ನೇರ ಪ್ರಸಾರ ಮಾಡಲು ಮತ್ತು ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಇತರ ಪ್ರಮುಖ ಅಂಶಗಳು: ಭೂಮಾಪಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ತರಲು ತಂತ್ರಜ್ಞಾನ ಆಧಾರಿತ ಕೌನ್ಸೆಲಿಂಗ್ ವ್ಯವಸ್ಥೆ ಜಾರಿ.

* ಭೂಮಾಪನ ಇಲಾಖೆಯಲ್ಲಿ ಮೂಲ ದಾಖಲೆಗಳು ಸಂರಕ್ಷಣೆ ಮಾಡಲು ರಾಜ್ಯದ ಎಲ್ಲ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ 72 ಕೋಟಿ ರೂ.ವೆಚ್ಚದಲ್ಲಿ ನವೀಕೃತ ಅಭಿಲೇಖಾಲಯಗಳ ಸ್ಥಾಪನೆ.

* ಇಲಾಖೆಯಲ್ಲಿ 50 ಲಕ್ಷಕ್ಕಿಂತಲೂ ಹೆಚ್ಚಿಗೆ ಇರುವ ಟಿಪ್ಪಣಿಗಳು ಮತ್ತು ಎಫ್.ಎಂ.ಬಿ.ಗಳು ಮತ್ತು ಒಂದು ಕೋಟಿಗೂ ಹೆಚ್ಚು ಅಟ್ಲಾಸ್ ಗಳನ್ನು ಆಟೋಕ್ಯಾಡ್ ಮತ್ತು ಸರ್ವರ್ ಗಳನ್ನು ಖರೀದಿಸಿ ಜಿಐಎಸ್ ತಂತ್ರಾಂಶದ ಮೂಲಕ ಗಣಕೀಕರಣ.

* ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಾಗುತ್ತಿರುವ ‘ಅನುಭವ ಮಂಟಪ’ ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆ.

* 65 ಕೋಟಿ ರೂ. ವೆಚ್ಚದಲ್ಲಿ ಕಾವೇರಿ 3.0 ವ್ಯವಸ್ಥೆ ಅಭಿವೃದ್ಧಿ.

* ಡಿಜಿಟಲ್ ಇ-ಸ್ಟ್ಯಾಂಪಿಂಗ್ ಮತ್ತು ಸಂಪೂರ್ಣ ಕಾಗದ ರಹಿತ ನೋಂದಣಿಗಾಗಿ ನವೀನ ಪ್ಲಾಟ್‍ಫಾರ್ಮ್‍ನ್ನು ಅಭಿವೃದ್ಧಿಪಡಿಸಲಾಗುವುದು. ಸ್ಟಾಂಪ್ ಉತ್ಪಾದನೆ ಮತ್ತು ದಸ್ತಾವೇಜನ್ನು ಬರೆದುಕೊಡುವುದರೊಂದಿಗೆ ದಸ್ತಾವೇಜಿನ ಸಂಗ್ರಹಣೆ, ಮರುಪಡೆಯುವಿಕೆ ಮತ್ತು ಡಿಜಿಟಲ್ ಹಂಚಿಕೆಯವರೆಗಿನ ಎಲ್ಲ ಪ್ರಕ್ರಿಯೆಗಳನ್ನು ಆನ್‍ಲೈನ್‍ನಲ್ಲಿ ಕೈಗೊಳ್ಳಲಾಗುವುದು.

* 207 ಉಪ ನೋಂದಣಿ ಕಚೇರಿಗಳ ಡಿಜಿಟಲೀಕರಣ.

* ಪ್ರತಿ ಜಿಲ್ಲೆಯ ಒಂದು ಉಪ ನೋಂದಣಿ ಕಚೇರಿಯನ್ನು ‘ನೋಂದಣಿ ಖಾತರಿ ಕೇಂದ್ರ’ವಾಗಿ ನವೀಕರಿಸಲಾಗುವುದು. ಅಲ್ಲದೆ, ಪಾಸ್‍ಪೋರ್ಟ್ ಸೇವಾ ಕೇಂದ್ರಗಳ ಮಾದರಿಯಲ್ಲಿ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಐದು ವಿಶ್ವ ದರ್ಜೆಯ ಉಪ ನೋಂದಣಿ ಕೇಂದ್ರಗಳು ಆರಂಭ.

* ವಿಶ್ವಬ್ಯಾಂಕ್ ನೆರವಿನಿಂದ ಒಟ್ಟು 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ನೀರು ಸಂರಕ್ಷಣೆ ಮತ್ತು ಸ್ಥಿತಿ ಸ್ಥಾಪಕತ್ವ ಕಾರ್ಯಕ್ರಮದಡಿ ಬೆಂಗಳೂರು ನಗರದಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಮತ್ತು ರಾಜ್ಯದಲ್ಲಿ ವಿವಿಧ ವಿಪತ್ತು ನಿರ್ವಾಹಣೆ ಯೋಜನೆಯ ಕಾಮಗಾರಿಗಳನ್ನು ಐದು ವರ್ಷ ಅವಧಿಗೆ ಜಾರಿ.

* 5,150 ಮಳೆ ಮಾಪನ ಕೇಂದ್ರಗಳನ್ನು ಅಂದಾಜು 40 ಕೋಟಿ ರೂ.ಗಳ ವೆಚ್ಚದಲ್ಲಿ ಬದಲಿಸಲು ಕ್ರಮ.

* ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಹಾಗೂ ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ‘ಪ್ರಜಾಸೌಧ’ ನಿರ್ಮಾಣ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News