×
Ad

ಜಿಬಿಎ | ಎರಡು ಪಾಲಿಕೆಗಳ ವ್ಯಾಪ್ತಿಗೆ ಮಹದೇವಪುರ ಕ್ಷೇತ್ರ ಹಂಚಿಕೆ ಪ್ರಶ್ನಿಸಿ ಪಿಐಎಲ್; ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2025-10-10 20:15 IST

ಬೆಂಗಳೂರು: ಮಹದೇವಪುರ ವಿಧಾನಸಭೆ ಕ್ಷೇತ್ರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಬೆಂಗಳೂರು ಪೂರ್ವ ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆಗಳಲ್ಲಿ ಹಂಚಿಕೆ ಮಾಡಿರುವುದನ್ನು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಮಹದೇವಪುರ ವಿಧಾನಸಭೆ ಕ್ಷೇತ್ರದ ಮತದಾರರಾಗಿರುವ ಪಿ.ಎಸ್. ಹರೀಶ್ ಹಾಗೂ ಆರ್. ದಿಲೀಪ್ ಕುಮಾರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ಪ್ರತಿವಾದಿ ನಗರಾಭಿವೃದ್ದಿ ಇಲಾಖೆಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿಸೆಂಬರ್ 17ಕ್ಕೆ ಮುಂದೂಡಿತು.

ಮನವಿ ಏನು?

ಮಹದೇವಪುರ ವಿಧಾನಸಭೆ ಕ್ಷೇತ್ರವನ್ನು ಎರಡು ಪಾಲಿಕೆಗಳಲ್ಲಿ ಹಂಚಲಾಗಿದೆ. ಕ್ಷೇತ್ರದ ಒಂದು ಗ್ರಾಮವನ್ನು ಎರಡು ಪಾಲಿಕೆಗಳ ವ್ಯಾಪ್ತಿಗೆ ತರಲಾಗಿದೆ. ಈ ವಿಭಜನೆಯು ಅವೈಜ್ಞಾನಿಕ ಹಾಗೂ ಏಕಪಕ್ಷೀಯವಾಗಿದೆ. ಇದರಿಂದ, ಅನೇಕ ಆಡಳಿತಾತ್ಮಕ ಸಮಸ್ಯೆಗಳು ಉಂಟಾಗಲಿವೆ. ಆದ್ದರಿಂದ, ವಿಭಜನೆಗೆ ಸಂಬಂಧಿಸಿದ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಹರಳೂರು, ಅಂಬಲಿಪುರ, ಕೈಕೊಂಡರಹಳ್ಳಿಯ ಕೆಲ ಭಾಗಗಳು, ಕಸವನಹಳ್ಳಿ, ಭೋವಿಕಾಲೋನಿ, ಜುನ್ನಸಂದ್ರ ಹಾಗೂ ದೊಡ್ಡಕನ್ನಳ್ಳಿಯ ಕೆಲ ಭಾಗಗಳ ವಿಭಜನೆಯನ್ನು ಮರು ವರ್ಗೀಕರಿಸಬೇಕು. ಇಡೀ ಬೆಂಗಳೂರಿನ ವಲಯವಾರು ಭೌಗೋಳಿಕ ಗಡಿಗಳನ್ನು ಮರುಪರಿಶೀಲಿಸಿ, ಲೋಪಗಳನ್ನು ಸರಿಪಡಿಸಲು ಸಮಿತಿಯೊಂದನ್ನು ರಚಿಸಲು ಸರಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News