×
Ad

ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಗಮನ ಸೆಳೆದ ಕರ್ನಾಟಕದ ಸ್ತಬ್ಧ ಚಿತ್ರ

Update: 2025-01-26 12:20 IST

Photo:X/@DynamiteNews

ಹೊಸದಿಲ್ಲಿ: ಇಂದು ಕರ್ತವ್ಯ ಪಥದಲ್ಲಿ ನಡೆದ 76ನೇ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಐತಿಹಾಸಿಕ ನಗರವಾದ ಲಕ್ಕುಂಡಿಯ ವೈಶಿಷ್ಟ್ಯಪೂರ್ಣ ಹಾಗೂ ಕಲಾತ್ಮಕ ದೇವಾಲಯಗಳ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಲಾಯಿತು.

ಹುಬ್ಬಳ್ಳಿಯಿಂದ ಸುಮಾರು 70 ಕಿಮೀ ದೂರದಲ್ಲಿರುವ, ಕರ್ನಾಟಕದ ಗದಗ ಜಿಲ್ಲೆಯಲ್ಲಿರುವ ಲಕ್ಕುಂಡಿಯನ್ನು ತನ್ನ ಅದ್ಭುತ ಶಿಲ್ಪಕಲೆಗಾಗಿ ‘ಶಿಲ್ಪಕಲೆಯ ತೊಟ್ಟಿಲು’ ಎಂದೇ ಕರೆಯಲಾಗುತ್ತದೆ.

ಕರ್ತವ್ಯ ಪಥದಲ್ಲಿ ಪ್ರದರ್ಶಿಸಲಾದ ಸ್ತಬ್ಧ ಚಿತ್ರದ ಮುಂಭಾಗದಲ್ಲಿ ಶ್ರೀ ಮಹಾವೀರನಿಗೆ ಅರ್ಪಿತವಾಗಿರುವ ಪುರಾತನ ದೇವಾಲಯವಾದ ಬ್ರಹ್ಮ ಜಿನ ದೇವಾಲಯದ ಬ್ರಹ್ಮ ಪ್ರತಿಮೆಯನ್ನು ಪ್ರದರ್ಶಿಸಲಾಯಿತು. ಇದರ ನಂತರ, ಬ್ರಹ್ಮ ಜಿನ ದೇವಾಲಯದ ಬಯಲು ಕಂಬಗಳ ಮಂಟಪದ ಸ್ತಬ್ಧ ಚಿತ್ರ ಸಾಗಿತು.

ಸ್ತಬ್ಧ ಚಿತ್ರದ ಮುಖ್ಯ ಭಾಗದಲ್ಲಿ ಅದ್ದೂರಿ ಹಾಗೂ ಕಲಾತ್ಮಕ ಕಾಶಿ ವಿಶ್ವನಾಥ ದೇವಾಲಯ ಹಾಗೂ ಶಿವನಿಗೆ ಮುಡಿಪಾಗಿರುವ ನನ್ನೇಶ್ವರ ದೇವಾಲಯವನ್ನು ಪ್ರದರ್ಶಿಸಲಾಯಿತು.

ಲಕ್ಕುಂಡಿಯ ದೇವಾಲಯಗಳು ಕರ್ನಾಟಕದ ಸಂಪದ್ಭರಿತ ಪರಂಪರೆ ಹಾಗೂ ಎಲ್ಲ ಧಾರ್ಮಿಕ ನಂಬಿಕೆಗಳನ್ನು ಪ್ರತಿಫಲಿಸುತ್ತವೆ. ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕ ಎಂದಿಗೂ ಸರ್ವಜನಾಂಗದ ಶಾಂತಿಯ ತೋಟವಾಗಿಯೇ ಬೆಳೆದು ಬಂದಿದೆ.

ಲಕ್ಕುಂಡಿ ಚಾಲುಕ್ಯರು ನಿರ್ಮಿಸಿದ ಸುಂದರ ದೇವಾಲಯಗಳು ಹಾಗೂ ಕಲ್ಯಾಣಿಗಳ ತವರಾಗಿದೆ. ತನ್ನ ಸಾಂಸ್ಕೃತಿಕ ಹಿರಿಮೆಯಲ್ಲದೆ, 10ರಿಂದ 12ನೇ ಶತಮಾನದ ನಡುವೆ ಲಕ್ಕುಂಡಿಯು ಬೃಹತ್ ನಗರ ಹಾಗೂ ವಾಣಿಜ್ಯ ತಾಣವೂ ಆಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News