ನ್ಯಾಯಬದ್ಧ ಪ್ರಕರಣಗಳನ್ನು ಮಾತ್ರ ಸ್ವೀಕರಿಸಿ : ಎಸಿಗಳಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಸೂಚನೆ
ಬೆಂಗಳೂರು, ಆ.16 : ಜನರ ನ್ಯಾಯಬದ್ಧ ಹಕ್ಕುಗಳನ್ನು ಅಧಿಕಾರಿಗಳು ಮೊಟಕುಗೊಳಿಸಲು ಸಾಧ್ಯವಿಲ್ಲ. ಹಾಗೆಂದು ಎಲ್ಲ ಪ್ರಕರಣಗಳನ್ನೂ ಮನಸೋ ಇಚ್ಛೆ ಸ್ವೀಕರಿಸುವುದೂ ಸರಿಯಲ್ಲ. ಎಸಿ ನ್ಯಾಯಾಲಯಗಳಲ್ಲಿ ನ್ಯಾಯಬದ್ಧ ಪ್ರಕರಣಗಳನ್ನು ಮಾತ್ರ ಸ್ವೀಕರಿಸಬೇಕು ಎಂದು ಉಪ ವಿಭಾಗಾಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಸೂಚನೆ ನೀಡಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉಪ ವಿಭಾಗಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಕೆಲ ಅಧಿಕಾರಿಗಳು ಕಾನೂನು ಮೀರಿ ತಮ್ಮ ವ್ಯಾಪ್ತಿಗೆ ಬರದ ಸಿವಿಲ್ ಮೊಕದ್ದಮೆಗಳನ್ನೂ ದಾಖಲಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಇದು ಸರಿಯಲ್ಲ ಎಂದರು.
ಸಾರ್ವಜನಿಕರಿಗೆ ತಮ್ಮ ಸಿವಿಲ್ ಮೊಕದ್ದಮೆಗಳು ಎಸಿ ನ್ಯಾಯಾಲಯದಲ್ಲೇ ಮುಕ್ತಾಯವಾಗಲಿ ಎಂಬ ಅಭಿಲಾಷೆ ಇರುತ್ತದೆ. ನಾಗರಿಕರಿಗೆ ಕಾನೂನು ರೀತಿ ನೀಡಲಾದ ಹಕ್ಕನ್ನು ಯಾರೂ ಮೊಟಕುಗೊಳಿಸುವುದು ಸಾಧ್ಯವಿಲ್ಲ. ಆದರೆ ಸಿವಿಲ್ ನ್ಯಾಯಾಲಯಗಳಲ್ಲಿ ವಿಚಾರಣೆಗೊಳಪಡಬೇಕಾದ ಪ್ರಕರಣಗಳನ್ನು ನಿಯಮ ಮೀರಿ ದಾಖಲಿಸಿಕೊಳ್ಳಲು ನಿಮಗೆ ಅಧಿಕಾರ ಕೊಟ್ಟವರ್ಯಾರು ಎಂದು ಕೃಷ್ಣಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಬಹುತೇಕ ಎಲ್ಲ ಅಧಿಕಾರಿಗಳೂ ತುಂಬಾ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲಿಗೇ ಹೋದರೂ ಜನ ಇಲಾಖೆಯಲ್ಲಿ ಆಗುತ್ತಿರುವ ಒಳ್ಳೆಯ ಜನಸ್ನೇಹಿ ಕೆಲಸದ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆದರೆ, ಯಾರೋ ಕೆಲ ಅಧಿಕಾರಿಗಳಿಂದ ಉತ್ತಮ ಕೆಲಸ ಮಾಡುತ್ತಿರುವವರಿಗೂ ಕೆಟ್ಟ ಹೆಸರು ಬರುತ್ತಿದೆ. ಅಂತಹ ಬೇಜವಾಬ್ದಾರಿ ಅಧಿಕಾರಿಗಳನ್ನು ಸರಿ ದಾರಿಗೆ ತರುವುದು ಹೇಗೆ ಎಂತಲೂ ನಮಗೆ ಗೊತ್ತಿದೆ ಎಂದು ಕೃಷ್ಣಬೈರೇಗೌಡ ಎಚ್ಚರಿಸಿದರು.
ಕೆಲವು ಉಪ ವಿಭಾಗಾಧಿಕಾರಿಗಳು ತಮ್ಮ ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೆ ಸಂಬಂಧಿಸಿ ಕಾನೂನು ಮೀರಿ ಆದೇಶ ಹೊರಡಿಸಿರುವುದು ಕಂಡುಬಂದಿದೆ. ಎಸಿಗಳು ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶಗಳು ನ್ಯಾಯ ಸಮ್ಮತವಾಗಿಲ್ಲ. ರಾಜ್ಯದ ಐದು ಜಿಲ್ಲೆಗಳ ಎಸಿಗಳು ಅಧಿಕಾರ ಮೀರಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ವಿಚಾರಣೆಗೆ ಸೂಚಿಸಲಾಗಿದ್ದು, ವರದಿ ಕೈಸೇರಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷ್ಣಬೈರೇಗೌಡ ಎಚ್ಚರಿಸಿದರು.
ಮುಂದಿನ ದಿನಗಳಲ್ಲಿ ಉಪ ವಿಭಾಗಾಧಿಕಾರಿಗಳು ತಮ್ಮ ಆದೇಶ ಪ್ರತಿಯಲ್ಲಿ ಎಲ್ಲಾ ಪ್ರಕರಣಗಳನ್ನೂ ಯಾವ ಕಾಯ್ದೆ ಮತ್ತು ಸೆಕ್ಷನ್ ಅಡಿಯಲ್ಲಿ ಆರ್ಡರ್ ಮಾಡಲಾಗಿದೆ? ಅದನ್ನು ಮಾಡಲು ಕಾನೂನಲ್ಲಿ ತಮಗೆ ಅಧಿಕಾರ ಇದೆಯಾ? ಎಂಬ ಮಾಹಿತಿಯನ್ನೂ ಸ್ಪಷ್ಟವಾಗಿ ನಮೂದಿಸಬೇಕು ಎಂದು ಕೃಷ್ಣಬೈರೇಗೌಡ ಸೂಚಿಸಿದರು. ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತ ಸುನೀಲ್ ಕುಮಾರ್ ಹಾಗೂ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಕಿ ಪ್ರಕರಣ ಇತ್ಯರ್ಥಕ್ಕೆ ಸೂಚನೆ: ಎಸಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಎರಡು ತಿಂಗಳಲ್ಲಿ ಮುಗಿಸಬೇಕು ಎಂದು ಗುರಿ ನಿಗದಿಪಡಿಸಿದರೆ, ಆರು ತಿಂಗಳಾದರೂ ಗುರಿ ಮುಟ್ಟಲು ಸಾಧ್ಯವಾಗದೆ ಇರುವುದು ಸರಿಯಲ್ಲ. ಹೀಗಾಗಿ ಶೀಘ್ರ ಎಲ್ಲಾ ಬಾಕಿ ಪ್ರಕರಣಗಳನ್ನೂ ಇತ್ಯರ್ಥಗೊಳಿಸಬೇಕು. ಎಸಿ ನ್ಯಾಯಾಲಯಗಳಲ್ಲಿ ಆರು ತಿಂಗಳ ಅವಧಿ ಮೀರಿದ 18,000 ಪ್ರಕರಣಗಳು ಬಾಕಿ ಇವೆ. ಒಂದು ವರ್ಷ ಮೀರಿದ 14,000 ಹಾಗೂ ಐದು ವರ್ಷಕ್ಕೂ ಮೇಲ್ಪಟ್ಟ 4,000 ಪ್ರಕರಣಗಳು ಬಾಕಿ ಇವೆ. ಈ ಪ್ರಕರಣಗಳನ್ನು ಏನಾದರೂ ಮಾಡಿ ನ್ಯಾಯಬದ್ಧ ಇತ್ಯರ್ಥಕ್ಕೆ ಒಳಪಡಿಸಲೇಬೇಕು. ಅಲ್ಲದೆ, ನಾಲ್ಕು ತಿಂಗಳಿಗಿಂತ ಅಧಿಕ ಅವಧಿಗೆ ಎಸಿ ನ್ಯಾಯಾಲಯದಲ್ಲಿ ಯಾವ ಪ್ರಕರಣಗಳನ್ನೂ ಉಳಿಸಿಕೊಳ್ಳಬಾರದು ಎಂದು ಕೃಷ್ಣಬೈರೇಗೌಡ ತಾಕೀತು ಮಾಡಿದರು.