"ಇದು ಸುಳ್ಳು ಸುದ್ದಿ": ವಿಧಾನ ಪರಿಷತ್ ಸ್ಥಾನ ಕುರಿತ ಸುದ್ದಿಗೆ ಎಲ್.ಕೆ.ಅತೀಕ್ ಸ್ಪಷ್ಟನೆ
ಎಲ್.ಕೆ.ಅತೀಕ್
ಬೆಂಗಳೂರು: ತಮ್ಮ ಬಗ್ಗೆ ಸುಳ್ಳು ಸುದ್ದಿಯೊಂದನ್ನು ಹರಡಲಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಎಲ್.ಕೆ.ಅತೀಕ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟರ್ವೊಂದನ್ನು ಹಂಚಿಕೊಂಡಿದ್ದಾರೆ. ‘ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ವಿಧಾನ ಪರಿಷತ್ಗೆ ನಾಮಕರಣ, ರಾಜ್ಯಪಾಲರಿಗೆ ಶಿಫಾರಸ್ಸು‘ ಎಂದು ಅತೀಕ್ ಅವರ ಫೋಟೊ ಸಮೇತ ಬಿ ಟಿ.ವಿ ಹೆಸರಿನಲ್ಲಿರುವ ಪೋಸ್ಟರ್ ಇದಾಗಿದ್ದು, ಈ ಸಂಬಂಧ ಎಲ್.ಕೆ.ಅತೀಕ್ ಅವರು ಸ್ಪಷ್ಟನೆ ನೀಡಿದ್ದಾರೆ.
"ಬಿ ಟಿ.ವಿ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದೆ. ಈ ಸುದ್ದಿಯು ನಿಜವಲ್ಲ. ಅವರು ಈ ರೀತಿಯ ಅಪಪ್ರಚಾರದಿಂದ ದೂರವಿರುತ್ತಾರೆ ಎಂದು ಭಾವಿಸುತ್ತೇನೆ" ಎಂದು ಎಲ್.ಕೆ.ಅತೀಕ್ ಅವರು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಪೋಸ್ಟ್ ಅನ್ನು ಬಿ ಟಿ.ವಿ ಕನ್ನಡ ಎಕ್ಸ್ ಅಕೌಂಟ್ಗೆ ಟ್ಯಾಗ್ ಮಾಡಿದ್ದಾರೆ.
ಎಲ್.ಕೆ.ಅತೀಕ್ ಅವರು ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಆಗಿದ್ದರು.