ನಿತೀಶ್ ಕುಮಾರ್ ರಾಜಿನಾಮೆ ವಿಚಾರ: "ಆಯಾರಾಮ್ ಗಯಾರಾಮ್" ಎಂದ ಮಲ್ಲಿಕಾರ್ಜುನ ಖರ್ಗೆ
Update: 2024-01-28 14:56 IST
Photo: PTI
ಕಲಬುರಗಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹಾಘಟ ಬಂಧನ್ ತೊರೆಯುವ ಬಗ್ಗೆ 5 ದಿನಗಳ ಹಿಂದೆ ಸುಳಿಯುವು ನಮಗೆ ಸಿಕ್ಕಿತ್ತು. ಈ ಬಗ್ಗೆ ನಾನು ಬಹಿರಂಗವಾಗಿ ಹೇಳಿರಲಿಲ್ಲ. ಇವತ್ತು ಸತ್ಯ ಹೊರಬಿದ್ದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಭಾನುವಾರ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಾಗೂ ಅವರ ಮಗ ತೇಜಸ್ವಿ ಯಾದವ್ ಅವರೊಂದಿಗೆ ಮಾತನಾಡುವಾಗ ನಿತೀಶ್ ಮಹಾಘಟ ಬಂಧನ್ ತೊರೆಯುವ ಬಗ್ಗೆ ಮಾಹಿತಿ ನೀಡಿದ್ದರು. ಅದು ಇಂದು ನಿಜವಾಗಿದೆ. ಆಯಾರಾಮ್ ಗಯಾರಾಮ್ ಎಂದರು.
ನಿತೀಶ್ ಕುಮಾರ್ ಹೋಗಲು ಬಯಸಿದ್ದರಿಂದ ಮೈತ್ರಿ ತೊರೆದಿದ್ದಾರೆ. ನಮ್ಮ ಹೋರಾಟ ಮುಂದುವರೆಯಲಿದೆ. ಲೋಕಸಭಾ ಚುನಾವಣೆ ಸೀಟು ಹಂಚಿಕೆ ಕುರಿತು ಇಂಡಿಯಾ ಮೈತ್ರಿಕೂಟದ ಇತರ ಪಕ್ಷಗಳೊಂದಿಗೆ ಚರ್ಚಿಸಲು ಆರು ಜನರ ಸಮಿತಿ ರಚಿಸಲಾಗಿದೆ. ಕೆಲವು ಕಡೆ ಒಮ್ಮತಕ್ಕೆ ಬರಲಾಗಿದೆ. ಇನ್ನೂ ಕೆಲವೆಡೆ ಬಂದಿಲ್ಲ ಎಂದು ತಿಳಿಸಿದರು.