×
Ad

ಧರ್ಮಸ್ಥಳ ಪ್ರಕರಣ | ಬಿಜೆಪಿಯ ದ್ವಿಪಾತ್ರಾಭಿನಯಕ್ಕೆ ʼಆಸ್ಕರ್ʼ ಕೊಟ್ಟರೂ ಕಡಿಮೆಯೇ? : ಪ್ರಿಯಾಂಕ್ ಖರ್ಗೆ

Update: 2025-09-02 18:06 IST

ಬೆಂಗಳೂರು, ಸೆ.2 : ಚಿವುಟುವುದೂ ಬಿಜೆಪಿ, ತೊಟ್ಟಿಲು ತೂಗುವುದೂ ಬಿಜೆಪಿ! ಧರ್ಮಸ್ಥಳ ಪ್ರಕರಣದಲ್ಲಿನ ಬಿಜೆಪಿಯ ದ್ವಿಪಾತ್ರಾಭಿನಯಕ್ಕೆ ಆಸ್ಕರ್ ಕೊಟ್ಟರೂ ಕಡಿಮೆಯೇ! ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಮಂಗಳವಾರ ಈ ಸಂಬಂಧ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ಎಂಬ ಎರಡು ತಲೆಯ ಹಾವು ಎರಡು ಕಡೆಯೂ ಹೆಡೆ ಆಡಿಸುತ್ತಿದೆ, ಬಿಜೆಪಿ ಆರೋಪಿಸುತ್ತಿರುವ ವ್ಯಕ್ತಿಗಳೂ ಬಿಜೆಪಿಯವರೇ ಎಂದು ಹೇಳಿದ್ದಾರೆ.

ಗಿರೀಶ್ ಮಟ್ಟಣ್ಣನವರ್, ಬಿಜೆಪಿಯ ಸಕ್ರಿಯ ಕಾರ್ಯಕರ್ತ, ಯುವ ಮೋರ್ಚಾದ ಅಧ್ಯಕ್ಷರಾಗಿದ್ದವರು, 2013ರಲ್ಲಿ ಗುರುಮಿಠ್ಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದವರು. ಮಹೇಶ್ ಶೆಟ್ಟಿ ತಿಮರೋಡಿ, ಬಿಜೆಪಿ ಪಕ್ಷದಲ್ಲೆ ಇದ್ದವರು, ಸಂಘಪರಿವಾರದ ನಾಯಕರು, ಸದಾ ಸಾವರ್ಕರ್, ಗೋಳ್ವಾಲ್ಕರ್ ಫೋಟೋ ಇಟ್ಟುಕೊಂಡಿರುವವರು, ಕೇಸರಿ ಶಾಲು ಹಾಕಿಕೊಂಡಿರುವವರು. ಸಾವರ್ಕರ್ ಅನುಯಾಯಿಯ ಬಗ್ಗೆಯೆ ಬಿಜೆಪಿ ಅಸಹನೆ ಹೊಂದಿರುವುದು ಪರಮಾಶ್ಚರ್ಯ ಎಂದು ಅವರು ಹೇಳಿದ್ದಾರೆ.

ಇವರೆಲ್ಲಾ ಸಂಘಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರ ಬಣದವರಲ್ಲವೇ? ಅವರ ಅಣತಿಯಂತೆಯೇ ಇವರ ಹೋರಾಟ ನಡೆಯುತ್ತಿರುವುದಲ್ಲವೇ? ಬಿಜೆಪಿ ನಾಯಕರು ಉತ್ತರಿಸಬೇಕು. ಬಿಜೆಪಿಯ ‘ಧರ್ಮಸ್ಥಳ ಚಲೋ’ ವೇದಿಕೆಯಲ್ಲಿ ಕರಾವಳಿ ಭಾಗದ ನಾಯಕರು ಮಾತನಾಡದೆ ವೇದಿಕೆ ಬಿಟ್ಟು ಹೋಗಿದ್ದೇಕೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಕಲ್ಲಡ್ಕ ಪ್ರಭಾಕರ್ ಭಟ್ ಕಾಣಿಸಿಕೊಂಡಿಲ್ಲ ಏಕೆ? ಇದುವರೆಗೂ ಪ್ರಭಾಕರ್ ಭಟ್ ಧರ್ಮಸ್ಥಳದ ಪರವಾಗಿ ಒಂದೇ ಒಂದು ಹೇಳಿಕೆ ನೀಡದಿರುವುದೇಕೆ? ಕಲ್ಲಡ್ಕ ಭಟ್ಟರಿಗೆ ‘ಧರ್ಮಸ್ಥಳ’ ಬೇಡವಾಗಿದೆಯೇ? ಧರ್ಮಸ್ಥಳ ಇಂದು ಇಬ್ಬರು ಸಂಘಪರಿವಾರದ ಮುಖಂಡರ ಪ್ರತಿಷ್ಠೆಯ ಆರೆಸ್ಸೆಸ್ ವರ್ಸಸ್ ಆರೆಸ್ಸೆಸ್ ಕಾಳಗದ ಕಣವಾಗಿದೆ, ಹೀಗಿರುವಾಗ ಬಿಜೆಪಿಯ ಹೋರಾಟ, ಹಾರಾಟ, ಚೀರಾಟ ಯಾರ ವಿರುದ್ಧ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News