ಕೇಂದ್ರ ಗೃಹ ಮಂತ್ರಿಗಳ ಪದಕ: ಡಿವೈಎಸ್ಪಿ ಶಂಕರ್ ಎಂ ರಾಗಿ ಸೇರಿ ರಾಜ್ಯದ ಐವರು ಅಧಿಕಾರಿಗಳು ಆಯ್ಕೆ
ಬೆಂಗಳೂರು, ಆ.12: ಅತ್ಯುತ್ತಮ ತನಿಖೆಗಾಗಿ ನೀಡಲಾಗುವ 2023ರ ಸಾಲಿನ ಗೃಹಮಂತ್ರಿಗಳ ಪದಕವನ್ನು ಕೇಂದ್ರ ಗೃಹ ಸಚಿವಾಲಯ ಶನಿವಾರ ಪ್ರಕಟಿಸಿದ್ದು, ಡಿವೈಎಸ್ಪಿ ಶಂಕರ್ ಎಂ ರಾಗಿ ಸೇರಿ ರಾಜ್ಯದ ಐವರು ಪೆÇಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ.
ರಾಜ್ಯದಿಂದ ಡಿವೈಎಸ್ಪಿ ಶಂಕರ್ ಎಂ ರಾಗಿ, ಇನ್ಸ್ಪೆಕ್ಟರ್ಗಳಾದ ರಾಮಪ್ಪ ಬಿ ಗುತ್ತೇರ್, ಸಿ.ಬಿ. ಶಿವಸ್ವಾಮಿ, ರುದ್ರೇಗೌಡ ಆರ್ ಪಾಟೀಲ್ ಹಾಗೂ ಪಿ.ಸುರೇಶ್ ಗೃಹ ಸಚಿವರ ಪದಕ ಗೌರವಕ್ಕೆ ಭಾಜನರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಒಟ್ಟಾರೆ ದೇಶದ ಪೊಲೀಸ್, ಸಿಬಿಐ ಮತ್ತು ಎನ್ಐಎಯಿಂದ 140 ಅಧಿಕಾರಿಗಳು ಈ ಪ್ರಶಸ್ತಿಗೆ ಭಾಜನರಾಗಲಿದ್ದಾರೆ. ಕೇಂದ್ರೀಯ ತನಿಖಾ ದಳದ (ಸಿಬಿಐ) 15 ಸಿಬ್ಬಂದಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) 12 ಅಧಿಕಾರಿಗಳಿಗೆ ದೊರೆಯಲಿದೆ. 140 ಅಧಿಕಾರಿಗಳಲ್ಲಿ 22 ಮಹಿಳಾ ಅಧಿಕಾರಿಗಳಿದ್ದಾರೆ. ತನಿಖೆಯ ಉನ್ನತ ವೃತ್ತಿಪರ ಮಾನದಂಡಗಳನ್ನು ಉತ್ತೇಜಿಸುವ ಮತ್ತು ತನಿಖೆಯಲ್ಲಿ ಶ್ರೇಷ್ಠತೆಯನ್ನು ಗುರುತಿಸುವ ಉದ್ದೇಶದಿಂದ 2018ರಲ್ಲಿ ಪದಕವನ್ನು ಸ್ಥಾಪಿಸಲಾಗಿದೆ. ಇದನ್ನು ಪ್ರತಿ ವರ್ಷ ಆ.12 ರಂದು ಘೋಷಿಸಲಾಗುತ್ತದೆ. 2023ರ ತನಿಖೆಯಲ್ಲಿನ ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕವನ್ನು 140 ಜನ ಪೆÇಲೀಸ್ ಸಿಬ್ಬಂದಿಗೆ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.
ಉತ್ತರ ಪ್ರದೇಶದ 10, ಕೇರಳ ಮತ್ತು ರಾಜಸ್ಥಾನದಿಂದ ತಲಾ ಒಂಬತ್ತು, ತಮಿಳುನಾಡಿನ ಎಂಟು, ಮಧ್ಯಪ್ರದೇಶದ ಏಳು ಮತ್ತು ಗುಜರಾತ್ನ ಆರು ಮಂದಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಉಳಿದ ಅಧಿಕಾರಿಗಳು ಇತರ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಂಸ್ಥೆಗಳಿಗೆ ಸೇರಿದವರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.