×
Ad

ಸಂಪುಟದಿಂದ ವಜಾ | ರಾಜಣ್ಣ ಮಾಡಿದ ಘೋರ ಅಪರಾಧ ಏನು? : ವಿಜಯೇಂದ್ರ

Update: 2025-08-12 16:25 IST

ಬಿ.ವೈ.ವಿಜಯೇಂದ್ರ 

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತರು, ಅವರ ಸಂಪುಟದ ಹಿರಿಯ ಸಹೋದ್ಯೋಗಿ ಸಚಿವ ರಾಜಣ್ಣ ಅವರು ಸಂಪುಟದಿಂದ ವಜಾ ಮಾಡುವ ಯಾವ ಘೋರ ಅಪರಾಧ ಮಾಡಿದ್ದಾರೆ ಎಂದು ರಾಜ್ಯದ ಜನತೆ ಕೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜಣ್ಣ ಅವರ ಮಹಾ ತಪ್ಪಾದರೂ ಏನು ಎಂದು ಪ್ರಶ್ನಿಸಿದರು. ರಾಜಣ್ಣ ಅವರ ವಜಾ ಮಾಡುವಿಕೆ ಕೇವಲ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಲ್ಲ. ಇದರ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕಿದೆ. ಯಾವ ಕಾರಣಕ್ಕಾಗಿ ಅವರನ್ನು ಸಂಪುಟದಿಂದ ಕಿತ್ತು ಬಿಸಾಕಿದ್ದಾರೆ? ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷಕ್ಕೆ ಪರಿಶಿಷ್ಟ ಪಂಗಡದವರ ಬಗ್ಗೆ ಇಷ್ಟೇನಾ ಪ್ರೀತಿ- ವಿಶ್ವಾಸ ಇರುವುದು? ಎಂದು ಕೇಳಿದರು.

ರಾಹುಲ್ ಗಾಂಧಿಯವರು ಕಳೆದ ವಾರ ಬೆಂಗಳೂರಿಗೆ ಬಂದು ಚುನಾವಣಾ ಆಯೋಗದ ಮೇಲೆ ಆರೋಪದ ಮೇಲೆ ಆರೋಪ ಮಾಡಿದ್ದರು. ಬಿಜೆಪಿ ಕೇಂದ್ರದಲ್ಲಿ ಅಕ್ರಮವಾಗಿ ಅಧಿಕಾರಕ್ಕೆ ಬಂದಿದೆ ಎಂಬಂತೆ ದೇಶದ ಜನರ ಮುಂದೆ ಬಿಂಬಿಸಿದ್ದಾರೆ. ಚುನಾವಣಾ ಆಯೋಗಕ್ಕೆ ದೂರು ಕೊಡದೇ ಪಲಾಯನ ಮಾಡಿದ್ದಾರೆ. ಮತ್ತೊಂದು ಕಡೆ ರಾಜಣ್ಣನವರು ಸತ್ಯವನ್ನು ಬಹಿರಂಗ ಪಡಿಸಿದಾಗ ಅವರನ್ನು ಸಂಪುಟದಿಂದ ವಜಾ ಮಾಡಿದ್ದು ಖಂಡಿತ ಸರಿಯಲ್ಲ ಎಂದು ವಿಶ್ಲೇಷಿಸಿದರು.

ಇವತ್ತು ಎರಡೂ ಸದನಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಂದ ನಾವು ಉತ್ತರ ಬಯಸುತ್ತೇವೆ. ಯಾವ ಯಾವ ಕಾರಣಕ್ಕೆ ನೀವು ಹಿರಿಯ ಸಚಿವ ರಾಜಣ್ಣರಿಂದ ರಾಜೀನಾಮೆ ಪಡೆದುಕೊಂಡಿದ್ದೀರಿ? ಈ ಕುರಿತು ಸದನಕ್ಕೆ ತಿಳಿಸುವ ಕರ್ತವ್ಯ ಮುಖ್ಯಮಂತ್ರಿಗಳದ್ದು ಎಂದು ತಿಳಿಸಿದರು. 

ಷಡ್ಯಂತ್ರ, ಪಿತೂರಿ ಕುರಿತು ಸಂದರ್ಭ ಬಂದಾಗ ತಿಳಿಸುವುದಾಗಿ ರಾಜಣ್ಣ ತಿಳಿಸಿದ್ದಾರೆ. ಅವರ ಹೇಳಿಕೆ ಗಮನಿಸಿದ್ದೇನೆ. ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು ದೇಶಾದ್ಯಂತ ತಿರುಗುವ ರಾಹುಲ್ ಗಾಂಧಿಯವರಿಗೆ ಸತ್ಯವನ್ನು ಅರಗಿಸಿಕೊಳ್ಳುವ, ಸತ್ಯವನ್ನು ಕೇಳಿಸಿಕೊಳ್ಳುವ ಧೈರ್ಯ ಇಲ್ಲವೇ ಎಂದು ಪ್ರಶ್ನಿಸಿದರು.

ಎಸ್.ಐ.ಟಿ ಹಾದಿ ತಪ್ಪುತ್ತಿದೆಯೇ? :

ಧರ್ಮಸ್ಥಳದ ವಿಷಯದಲ್ಲಿ ನಿನ್ನೆ ಕೂಡ ನಮ್ಮ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುದೀರ್ಘ ಚರ್ಚೆ ಆಗಿದೆ. ಎಸ್.ಐ.ಟಿ ಎಲ್ಲೋ ಒಂದು ಕಡೆ ಹಾದಿ ತಪ್ಪುತ್ತಿದೆಯೇ? ಎಂದು ಕೇಳಿದರು. ಎಸ್.ಡಿ.ಪಿ.ಐ, ಕಮ್ಯುನಿಸ್ಟ್ ಮತ್ತಿತರ ಬೇರೆ ಬೇರೆ ಸಂಘಟನೆಗಳು ಇದರ ಹಿಂದೆ ನಿಂತಿದ್ದಾರೆ. ಇವೆಲ್ಲವೂ ಗುಮಾನಿಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಶ್ರೀ ಮಂಜುನಾಥೇಶ್ವರನ ಭಕ್ತಾದಿಗಳ ಮನಸ್ಸಿಗೆ ಘಾಸಿ ಆಗುವಂಥ ಚಟುವಟಿಕೆಗಳು ನಡೆಯುತ್ತಿದ್ದು, ಇದು ಸರಿಯಲ್ಲ. ಈ ವಿಷಯವನ್ನೂ ಸದನದಲ್ಲಿ ಚರ್ಚಿಸಿ ಸರಕಾರದ ಉತ್ತರ ಬಯಸುತ್ತೇವೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News