ಶಬ್ದದೊಳಗಣ ನಿಶ್ಶಬ್ದದಲ್ಲಿ ಜೀವನಾನುಭವೇ ‘ಮರುಜೇವಣಿ’

Update: 2024-03-05 07:35 GMT

ಎಸ್.ಜಿ. ಸಿದ್ದರಾಮಯ್ಯನವರ ಐದನೇ ಸಂಕಲನದಲ್ಲಿ 34 ಕವಿತೆಗಳಿವೆ. ನೆಲದ ಕವಿಯಾದ ಇವರ ಕಾವ್ಯ ಸಂವೇದನೆ ರೂಪುಗೊಳ್ಳುವುದೇ ಈ ನೆಲದ ಪರಂಪರೆಯಿಂದ. ನೆಲ, ನೀರು, ಸಸ್ಯ, ಪಕ್ಷಿ, ಪ್ರಾಣಿ, ಮನುಷ್ಯ ಮತ್ತು ಇವೆಲ್ಲವುಗಳನ್ನು ನಿಯಂತ್ರಿಸುವ ಪಂಚಭೂತಗಳು ಇವಿಷ್ಟು ಪ್ರತಿಪಾದಿಸುವ ಮೌಲ್ಯಗಳು.

ಮರುಜೇವಣಿ ಎಂದರೆ ಸಂಜೀವಿನಿ. ಈ ಸಂಜೀವಿನಿ ಯನ್ನು ತಮ್ಮ ಕಾವ್ಯದ ಸಮೃದ್ಧಿಗೆ ಪಡೆದಿದ್ದಾರೆ ಎಸ್.ಜಿ. ಸಿದ್ದರಾಮಯ್ಯನವರು. ಈ ನೆಲದ ಪರಂಪರೆಯಿಂದ ಶಬ್ದ ಸೂತಕದ ಬಗ್ಗೆ, ಚಿಂತನೆಯ ಸೂತಕದ ಬಗ್ಗೆ, ಬದುಕಿನ ಸೂತಕದ ಬಗ್ಗೆ ಅವರು ಈ ಸಂಕಲನದಲ್ಲಿ ಗಾಢವಾಗಿ ಚಿಂತಿಸಿದ್ದಾರೆ. ಈ ಬದುಕನ್ನು ನಿಯಂತ್ರಿಸುವ ವೃತ್ತಿ ಮತ್ತು ಪ್ರವೃತ್ತಿಗಳೆರಡನ್ನು ಈ ಸೂತಕದ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತಾರೆ.

ಶಬ್ದ ಸೂತಕ ಎಂಬ ಖಂಡ ಕಾವ್ಯ, ಮಾತು ಮತ್ತು ಮೌನ, ಮೌನ ಮತ್ತು ಅರ್ಥ, ಘಟನೆ ಮತ್ತು ನೆನಪು ಇವುಗಳ ಮಧ್ಯದ ಸಂಬಂಧವನ್ನು ತೆರೆದಿಡುತ್ತಾ ಹೋಗುವಲ್ಲಿ ಎಸ್.ಜಿ. ಸಿದ್ದರಾಮಯ್ಯನವರು ಅಪೂರ್ವವಾದ ಖಂಡ ಕಾವ್ಯವನ್ನು ತಂದಿದ್ದಾರೆ. ಆಧುನಿಕ ಯುವಕ ಯುವತಿಯರ ಮಧ್ಯೆ ಜಾತಿ, ವರ್ಗಗಳನ್ನು ಮೀರಿ ಬೆಳೆಯುವ ಪ್ರೀತಿ ಅನೇಕ ಬಾರಿ ಆತಂಕಗಳನ್ನೇ ಸೃಷ್ಟಿಸಿದೆ. ವಿರುದ್ಧ ಲಿಂಗಗಳ ಮೈ, ಮನಸ್ಸಿನ ಆಕರ್ಷಣೆ ನೈತಿಕತೆಯ ಚೌಕಟ್ಟಿನಲ್ಲಿ ಹೊರಬರಲಾಗದೆ ಸಂಕಟದ ಮೌನದ ಯಾತನೆಯಲ್ಲಿ ಮುರುಟಿ ಹೋಗುತ್ತದೆ. ಈ ಸಂದರ್ಭದಲ್ಲಿ ಮಾತು ಸೂತಕವಾಗು ತ್ತದೆ. ಆಗ ಕವಿ ‘ನೀತಿ ನೆಲೆಯ ಭಾಷೆ, ತಾನು ಪ್ರೀತಿ, ಭಾಷ್ಯ ಬರೆವುದೇನು?’ ಎಂದು ಕೇಳುತ್ತಾರೆ. ಮಾತಿನ ಸೂತಕ ದಾಟಿ ಬದುಕುವ ಹೊಸ ಸಾಧ್ಯತೆಯೊಂದರ ಕಡೆ ಕಾವ್ಯ ಮುಖ ಮಾಡುತ್ತದೆ.

ಈ ಕವನ ಸಂಕಲನದಲ್ಲಿ ಪುರಾಣ ಪಾತ್ರಗಳನ್ನು ಆಯ್ದುಕೊಂಡು ಬರೆದ ಕೆಲವು ಕವನಗಳೆಂದರೆ ‘ಅಂಬಿಕೆ’, ‘ಅಮೃತಮತಿ’, ‘ಕುಂತಿ’ ಈ ಮೂರು ಕವನಗಳಲ್ಲಿ ಬರುವ ಪಾತ್ರಗಳು ಬಾಳಿನ ಸುಖದಿಂದ ವಂಚಿತವಾದವುಗಳು. ಯಾರದೋ ಅಟ್ಟಹಾಸಕ್ಕೆ, ನೈತಿಕತೆಯ ಮೌಲ್ಯಕ್ಕೆ ತಮ್ಮ ಬಾಳನ್ನು ತೆತ್ತುಕೊಂಡು ನಲುಗಿದವುಗಳು. ‘ಅಂಬಿಕೆ’ ಕವಿತೆಯಲ್ಲಿ

ಮುದವು ಇಲ್ಲದ ಎದೆಯ ಒಳಗೆ

ನಗುವೇ ಹಗೆಯಲ್ಲಾ

ಸುಖವೂ ಎಂಬುದು ಸಾವಿರ ಚೇಳಿನ

ಬಾಧೆಯಾಯಿತಲ್ಲಾ’

ಎಂದು ಹೇಳುವ ಮೂಲಕ ಆಕೆಯ ಸಂಕಷ್ಟವನ್ನು ವ್ಯಕ್ತಪಡಿಸುವುದು ಇಲ್ಲಿ ಕಾಣುತ್ತದೆ.

‘ಅಮೃತಮತಿ’ ಕವಿತೆಯಲ್ಲಿ

‘ನರಸತ್ತವರನು ಎತ್ತಿ ಮೆರೆಸುವ

ಭ್ರಮೆಯ ಬೆರಗಿನ ಅರಸೊತ್ತಿಗೆಯೇ

ಕತ್ತಲ ಲೋಕದ ಕರುಣ ಕಥೆಗಳಿಗೆ

ಕಿವುಡು ಬಯಲಿನ ಬಾಯಿಗೇಸು ಹುರುಡು’

ಎಂದು ಅಮೃತಮತಿ ಪ್ರಶ್ನಿಸುತ್ತಾಳೆ.

‘ಕುಂತಿ’ ಕವಿತೆಯಲ್ಲಿ

‘ರಾಜ ತೇಜದ ಬೀಜ ಮೂಲವು

ತಂಗೀ ಗೊತ್ತಿತ್ತೇ ನನಗೆ ಗೊತ್ತಿತ್ತು

ಗುರುವಿನ ಮಂತ್ರ ರಾಜನ ತಂತ್ರ

ಕಳ್ಳುಬಳ್ಳಿಯ ವಂಚನೆ ಸೂತ್ರ’ ಎನ್ನುತ್ತಾಳೆ. ಈ ಮೂರು ಪಾತ್ರಗಳನ್ನು ಮಾನವ ಸಹಜ ಅಂತಃಕರಣದಿಂದ ಕವಿ ಕಾಣುತ್ತಾರೆ. ಇಲ್ಲಿ ರಾಜ ವೈಭೋಗ, ನೀತಿ-ನಿಯಮ ಯಾವುದೂ ಮುಖ್ಯವಾಗುವುದಿಲ್ಲ. ಅವುಗಳನ್ನು ಮೀರಿದ ಬದುಕು ಬೇಕೆಂಬ ಜೀವಸೆಲೆ ಮತ್ತು ಅವುಗಳಿಂದ ವಂಚಿತವಾದ ಕ್ರುದ್ಧತೆ ಮಾತ್ರ ಮುಖ್ಯವಾಗುತ್ತದೆ.

‘ಕುಲದೇವಿ’ ಕವಿತೆ ಹೆಬ್ಬೆರಳು ಕಳೆದುಕೊಂಡ ಏಕಲವ್ಯನ ಚಿತ್ರವನ್ನು ಪರಿಚಯಿಸುತ್ತದೆ. ಕಾಡು ಮತ್ತು ನಾಡನ್ನು ಮುಖಾಮುಖಿಯಾಗಿಸುವುದರ ಬಗ್ಗೆ ಇಲ್ಲಿ ತಿಳಿಸುತ್ತಾರೆ. ಏಕಲವ್ಯನ ತಾಯಿ ತನ್ನ ಮಗನ ಹೆಬ್ಬೆರಳು ಕಳೆದುಕೊಂಡದ್ದು ಕಂಡು

‘ನಾಡ ನಡುವಿನ ಕೆಡು ಮರಳು

ಮಾಡಿತು ಹೇಗೆ ನನ್ನೊಡಲ ಕುಡಿಯ?

ಕರುಳ ಸಂಕಟವೆಲ್ಲ ಕಾಡೊಡಲ ಉರಿಯಾಗಿ ಹೊಟ್ಟೆಕಿಚ್ಚಿನ ಕರುಳ ಸುಟ್ಟು ಹಾಕಲಿ ಶಿವನೇ’ ಎಂದು ತನ್ನ ಸಂಕಟವನ್ನು ಹೊರ ಹಾಕುತ್ತಾಳೆ.

‘ಅವ್ವ’ ಕವಿತೆಯಲ್ಲಿ

‘ಎಲ್ಲಿದ್ದೆ ಎಲೆ ತಾಯೆ

ಎತ್ತ ಹೋದರು ಸುತ್ತಿ ಮೊರೆಯುವ

ಹೆಜ್ಜೆಗೆಜ್ಜೆಯ ಸಾಲೆ’

ಎಂದು ಸದಾ ತನ್ನ ತಾಯಿಯ ನೆನಪು ಮಾಡಿಕೊಳ್ಳುವಲ್ಲಿ ಆಕೆ ಜೀವಂತವಾಗಿರುತ್ತಾಳೆ, ತಾಯಿಗೆ ಮತ್ತು ತಾಯ್ತನಕ್ಕೆ ಸಾವಿಲ್ಲ ಎಂಬುದನ್ನು ಇಲ್ಲಿ ತೋರಿಸಿದ್ದಾರೆ.

ಮಾಯದ ಮಳೆ, ಹೀಗೊಂದು ಅನುಭಾವದ ಹಿಂದೆ, ಅವ್ವ, ಕವಿತೆಗಳಲ್ಲಿ ಕವಿ ಅಸ್ಪಷ್ಟತೆಯಿಂದ ಸ್ಪಷ್ಟತೆಯ ಕಡೆಗೆ ಮನಸ್ಸು ಮಾಡಿರುವುದು ತಿಳಿಯುತ್ತದೆ.

ಗುರು ಬಂದ, ಶಬ್ದ ಸೂತಕ, ಕವನಗಳನ್ನು ಓದುವಾಗ ಅಲ್ಲಿಯ ಭಾವ ಭಾಷೆಗಳ ಸೊಗಸಿಗೆ ತಲ್ಲೀನರಾಗದೆ ಇರಲು ಸಾಧ್ಯವಿಲ್ಲ.

ಜಿ.ಎಸ್. ಶಿವರುದ್ರಪ್ಪನವರು ‘‘ಗ್ರಾಮೀಣ ಪರಿಸರದ ದಟ್ಟವಾದ ಅನುಭವಗಳು, ಅದರದೇ ಆದ ನುಡಿಗಟ್ಟುಗಳ ಮೂಲಕ, ಪುನರ್ಭವನಗಳನ್ನು ಪಡೆದುಕೊಳ್ಳುತ್ತಾ, ತನ್ನ ಪ್ರಾಚೀನತೆಯೊಂದಿಗೆ ಹಾಗೂ ಆಧುನಿಕ ಜಗತ್ತಿನೊಂದಿಗೆ ಸಂವಾದವನ್ನು ಬೆಳೆಸಿರುವ ಕ್ರಮ ವಿಶೇಷ ರೀತಿಯದು’’ ಎಂದು ಹೇಳಿದ್ದಾರೆ. ಇದು ಎಸ್.ಜಿ. ಸಿದ್ದರಾಮಯ್ಯನವರ ಕಾವ್ಯದ ಪರಿಧಿಯ ವಿಸ್ತಾರವನ್ನು ತಿಳಿಸುತ್ತದೆ. ಇಲ್ಲಿನ ಇತರ ಕವಿತೆಗಳಾದ ಬಾಲ್ಯಸಖಿ, ಕತ್ತಲು, ಬಯಲ ಬೆಳಗು, ನೆಲದ ಮೌನ, ಕವಿ, ಹಂಸೆ, ಅಲ್ಲಮ, ತಲೆಮಾರು ಮುಂತಾದವುಗಳು ಜನಪರ ಮೌಲ್ಯಗಳು ಅಂದರೆ ದೇಸೀ ಮೌಲ್ಯಗಳು ಕಳೆದುಹೋಗುತ್ತಿರುವುದರ ಬಗ್ಗೆ ಹೇಳುತ್ತಾ, ಸಂಸ್ಕೃತಿಯೊಂದರ ನಂಬಿಕೆಗಳನ್ನು, ಜನರ ಸಂಬಂಧಗಳನ್ನು ತಮ್ಮ ಕಾವ್ಯದ ಮೂಲಕ ಎಸ್.ಜಿ. ಸಿದ್ದರಾಮಯ್ಯನವರು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಉದಂತ ಶಿವಕುಮಾರ್, ಬೆಂಗಳೂರು

contributor

Similar News