×
Ad

ಜಮ್ಮು-ಕಾಶ್ಮೀರ : ಯಾತ್ರಾರ್ಥಿಗಳಿದ್ದ ಬಸ್ ಮೇಲೆ ಭಯೋತ್ಪಾದಕರ ಗುಂಡಿನ ದಾಳಿ | ಕಮರಿಗೆ ಬಿದ್ದ ಬಸ್, ಕನಿಷ್ಠ 9 ಸಾವು

Update: 2024-06-09 21:39 IST

PC : NDTV 

ಶ್ರೀನಗರ: ರವಿವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಯಾತ್ರಾರ್ಥಿಗಳಿಂದ ತುಂಬಿದ್ದ ಬಸ್ಸು ಕಮರಿಗೆ ಬಿದ್ದು ಕನಿಷ್ಠ 9 ಮಂದಿ ಮೃತಪಟ್ಟು, 33 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಬಸ್ ಶಿವ ಖೋರಿ ಗುಹಾಂತರ ದೇವಾಲಯಕ್ಕೆ ತೆರಳುತ್ತಿದ್ದ ವೇಳೆ ದಾಳಿ ನಡೆದಿದೆ ಎನ್ನಲಾಗಿದೆ. ಭಯೋತ್ಪಾದಕರು ಗುಂಡಿನ ದಾಳಿ ನಡೆಸುತ್ತಿದ್ದಂತೆ ಬಸ್ ಕಮರಿಗೆ ಬಿದ್ದಿದೆ ಎಂದು ತಿಳಿದು ಬಂದಿದೆ.

ಗುಂಡಿನ ದಾಳಿಯ ಪರಿಣಾಮ ಚಾಲಕ ಬಸ್ನ ನಿಯಂತ್ರಣ ಕಳೆದುಕೊಂಡ ಬಳಿಕ ಬಸ್ಸು ಕಂದಕಕ್ಕೆ ಬಿದ್ದಿದೆ ಎಂದು ರಿಯಾಸಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೋಹಿತಾ ಶರ್ಮಾ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

"ಪ್ರಯಾಣಿಕರಿದ್ದ ಬಸ್ ಮೇಲೆ ಭಯೋತ್ಪಾದಕರು ಗುಂದಿನ ದಾಳಿ ಮಾಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತವೆ. ಗುಂಡಿನ ದಾಳಿಯಿಂದಾಗಿ ಚಾಲಕ ಬಸ್ನ ಸಮತೋಲನ ಕಳೆದುಕೊಂಡ ಪರಿಣಾಮ ಬಸ್ ಕಂದಕಕ್ಕೆ ಬಿದ್ದಿದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಪ್ರಯಾಣಿಕರ ಗುರುತನ್ನು ಇನ್ನೂ ದೃಢಪಡಿಸಲಾಗಿಲ್ಲ, ಅವರು ಶಿವ ಖೋರಿ ದೇಗುಲ ಯಾತ್ರೆಗೈಯ್ಯುತ್ತಿದ್ದರು” ಎಂದು ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಶರ್ಮಾ ತಿಳಿಸಿದ್ದಾರೆ.

ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಿದ್ದು, ಆಂಬ್ಯುಲೆನ್ಸ್ಗಳು ಸಾಲುಗಟ್ಟಿ ನಿಂತಿದ್ದವು. ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಸ್ಥಳಕ್ಕೆ ಧಾವಿಸಿದವು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News