ಗೃಹ ರಕ್ಷಕರ ಸೇವೆ ಸಮಾಜಮುಖಿಯಾಗಿರಬೇಕು: ಡಾ.ರೋಶನ್ ಶೆಟ್ಟಿ
ಗೃಹ ರಕ್ಷಕ ದಳ ಜಿಲ್ಲಾ ವಾರ್ಷಿಕ ಮೂಲ ಬುನಾದಿ ಶಿಬಿರ ಸಮಾರೋಪ
ಉಡುಪಿ, ಆ.25: ಕಾನೂನು ಸುವ್ಯವಸ್ಥೆ, ಬಂದೋಬಸ್ತ್, ಚುನಾವಣೆ, ಪ್ರಾಕೃತಿಕ ವಿಕೋಪದಂಥ ಸಂದರ್ಭಗಳಲ್ಲಿ ಪೊಲೀಸ್ ಹಾಗೂ ಇತರ ಇಲಾಖೆಗಳೊಂದಿಗೆ ಕರ್ತವ್ಯ ನಿರ್ವಹಿಸುವ ಗೃಹ ರಕ್ಷಕರ ಸೇವೆ ಸಮಾಜಮುಖಿ ಯಾಗಿರಬೇಕು ಎಂದು ಉಡುಪಿ ಜಿಲ್ಲಾ ಗೃಹರಕ್ಷಕ ದಳ ಸಮಾದೇಷ್ಟರಾದ ಡಾ.ರೋಶನ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಸೋಮವಾರ ನಡೆದ ವಾರ್ಷಿಕ ಮೂಲ ಬುನಾದಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ. ಮಾತನಾಡಿ, ಪ್ರತಿಯೊಂದು ರಕ್ಷಣಾ ಇಲಾಖೆಗಳ ಸಿಬ್ಬಂದಿಗಳು ಧರಿಸುವ ಸಮವಸ್ತ್ರಕ್ಕೂ ಗೌರವವಿದೆ. ಈ ಗೌರವಕ್ಕೆ ಚ್ಯುತಿ ಬಾರದಂತೆ ಸೇವೆ ಸಲ್ಲಿಸುವ ಬದ್ಧತೆಯನ್ನು ಸಿಬ್ಬಂದಿ ಗಳು ಇರಿಸಿಕೊಳ್ಳಬೇಕು. ತರಬೇತಿಗಳು ವೃತ್ತಿಪರರನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಕರ್ತವ್ಯದ ಅವಧಿಯ ಪ್ರತಿ ಕ್ಷಣವೂ, ನಮಗೆ ಹೊಸ ತರಬೇತಿಯನ್ನು ಪಡೆದುಕೊಂಡಂತೆ ಎನ್ನುವ ಮನೋಭಾವವನ್ನು ರೂಢಿಸಿ ಕೊಳ್ಳಬೇಕು ಎಂದರು.
ಮುಖ್ಯ ತರಬೇತುದಾರರಾದ ಚಿತ್ರದುರ್ಗದ ಹಿರಿಯ ಬೋಧಕ ಹೆಚ್.ತಿಪ್ಪೇಸ್ವಾಮಿ, ಘಟಕಾಧಿಕಾರಿಗಳಾದ ಸ್ಟೀವನ್ ಪ್ರಕಾಶ್ ಬ್ರಹ್ಮಾವರ, ಕುಮಾರ್ ಉಡುಪಿ, ಉತ್ತಮ ಶಿಬಿರಾರ್ಥಿಗಳಾದ ಸ್ನೇಹ ಜೆ.ಪೆಟ್ಲೂರ್ ಕುಂದಾಪುರ ಹಾಗೂ ಭೂಷಣ್ ಕಾಪು ಅವರನ್ನು ಗೌರವಿಸಲಾಯಿತು.
ಶಿಬಿರಾರ್ಥಿಗಳ ಪರವಾಗಿ ಸುದೀಪ್ ಉಡುಪಿ ಹಾಗೂ ಶಹನಾಝ್ ಉಡುಪಿ ಅನಿಸಿಕೆ ಹಂಚಿಕೊಂಡರು. ಶಿಬಿರಾರ್ಥಿಗಳಿಗೆ ಡಾ.ರೋಶನ್ ಕುಮಾರ ಶೆಟ್ಟಿ ಪ್ರಮಾಣಪತ್ರ ನೀಡಿದರು. ಎಚ್.ತಿಪ್ಪೇಸ್ವಾಮಿ ಪ್ರತಿಜ್ಞಾ ವಿಧಿ ನೆರವೇರಿಸಿದರು.
ಜಿಲ್ಲಾ ಕಚೇರಿ ಅಧೀಕ್ಷಕ ರತ್ನಾಕರ್ ಬೈಂದೂರು ಹಾಗೂ ಪ್ರಥಮ ದರ್ಜೆ ಸಹಾಯಕಿ ಟಿ.ಎಸ್.ಅನಿತಾ ಉಪಸ್ಥಿತರಿ ದ್ದರು. ಗೃಹ ರಕ್ಷಕ ಭೂಷಣ ಸ್ವಾಗತಿಸಿದರು. ಸ್ನೇಹ ಜೆ ಪೆಟ್ಲೂರ್ ಕುಂದಾಪುರ ನಿರೂಪಿಸಿದರು. ದೀಪಿಕಾ ಬ್ರಹ್ಮಾವರ ವಂದಿಸಿದರು.