ನೇಕಾರಿಕೆ ಬಗ್ಗೆ ಕೇಂದ್ರ ಸರಕಾರದ ನೆರವನ್ನು ಅನುಷ್ಠಾನಗೊಳಿಸಿ: ಅಧಿಕಾರಿಗಳಿಗೆ ಸಂಸದ ಕೋಟ ಸಲಹೆ
ಉಡುಪಿ, ಸೆ.22: ಉಡುಪಿ ಜಿಲ್ಲೆಯಲ್ಲಿರುವ ನೇಕಾರರ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ದುಡಿಯುತ್ತಿರುವ ನೇಕಾರರಿಗೆ ಕೈಮಗ್ಗ ಉತ್ಪಾದನೆಗಳ ಉತ್ಪನ್ನದಲ್ಲಿ ಕೇಂದ್ರ ಸರಕಾರದ ಎಲ್ಲಾ ಯೋಜನೆಗಳ ಬಗ್ಗೆ ಸಂಪೂರ್ಣ ನೆರವನ್ನು ನೀಡಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ಕೇಂದ್ರ ಸರಕಾರದಿಂದ ನೇಕಾರರಿಗೆ ಸಿಗುವ ಸಾರಿಗೆ ಸಬ್ಸಿಡಿ (ಎನ್ಹೆಚ್ಡಿಸಿ), ನೂಲು ಖರೀದಿಯ ಮೇಲೆ ಶೇ.15ರಷ್ಟು ವಿನಾಯಿತಿ, ನೇಕಾರರ ವರ್ಕ್ ಶೆಡ್ ನಿರ್ಮಾಣಕ್ಕೆ ಸಿಗುವ 1.20 ಲಕ್ಷ ರೂ. ಸಬ್ಸಿಡಿ, ಸೋಲಾರ್ ಲೈಟ್ ನೆರವು, ಕೈಮಗ್ಗದಲ್ಲಿ ದುಡಿಯುವ ಕಾರ್ಮಿಕರಿಗೆ ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕ ಮುದ್ರಾ ಸಾಲದ ಆರ್ಥಿಕ ನೆರವು, ಕೈಮಗ್ಗ ಸಲಕರಣೆಗಳ ಖರೀದಿಗೆ ಆರ್ಥಿಕ ನೆರವು ಹಾಗೂ ಸಮರ್ಥ ಯೋಜನೆಯ ಮೂಲಕ ಹೊಸ ಉತ್ಸಾಹಿ ಅಭ್ಯರ್ಥಿಗಳಿಗೆ ನುರಿತ ಕೈಮಗ್ಗ ತರಬೇತುದಾರ ರಿಂದ ಕೈಮಗ್ಗ ತರಬೇತಿ ಮುಂತಾದ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ಕೋಟ ಅಧಿಕಾರಿಗಳ ಜೊತೆ ಚರ್ಚಿಸಿದರು.
ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಕೊಡುವ ಸರ್ವಸವಲತ್ತುಗಳನ್ನು ಇಲಾಖೆ ಜವಾಬ್ದಾರಿಯಿಂದ ಫಲಾನುಭವಿ ಗಳಿಗೆ ತಲುಪಿಸಲು ನೆರವಾಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕೈಮಗ್ಗ ಉತ್ಪಾದನೆ ಮಾಡುವ ತರಬೇತಿ ಕೇಂದ್ರಕ್ಕೆ ಸಪ್ಟಂಬರ್ ಅಂತ್ಯದೊಳಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಹಾಗೂ ಕೇಂದ್ರ ಸರ್ಕಾರದ ನೆರನೊಂದಿಗೆ ಜಿಲ್ಲೆಯಲ್ಲಿ ನೇಕಾರರಿಗೆ ಅನುಕೂಲವಾಗುವ ಅಗತ್ಯ ಪ್ರಸ್ತಾವನೆ ಯನ್ನು ಸಲ್ಲಿಸುವಂತೆ ಸಂಸದ ಕೋಟ ಅಧಿಕಾರಿಗಳಿಗೆ ತಿಳಿಸಿದರು.
ಸಂಸದರ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಡುಪಿ ಜಿಲ್ಲೆಯ ಕೈಮಗ್ಗ ಹಾಗೂ ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್, ಜಿಲ್ಲಾ ಕೌಲಾಭಿವೃದ್ಧಿ ಇಲಾಖೆಯ ಅಧಿಕಾರಿ ಅರುಣ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.