ಕೊರಗರು, ಜೇನುಕುರುಬರಿಗೆ ಪ್ರತ್ಯೇಕ ಒಳ ಮೀಸಲಾತಿ ಅಗತ್ಯ: ಪಾಂಗಾಳ ಬಾಬು ಕೊರಗ
ಶಿರ್ವ, ಅ.8: ಕೊರಗರು ಮತ್ತು ಜೇನುಕುರುಬರನ್ನು ನೈಜ ದುರ್ಬಲ ಬುಡಕಟ್ಟು ಸಮುದಾಯಗಳೆಂದು ಸರಕಾರ ಈ ಹಿಂದೆಯೇ ಗುರುತಿಸಿದೆ. ಆದ್ದರಿಂದ ಸರಕಾರ ಕಾಲ ವಿಳಂಬ ಮಾಡದೆ ಈ ಎರಡು ಆದಿಮ ಬುಡ ಕಟ್ಟುಗಳನ್ನು ಪ್ರತ್ಯೇಕಿಸಿ, ಒಳಮೀಸಲಾತಿಯನ್ನು ಘೋಷಿಸಬೇಕು ಎಂದು ಹಿರಿಯ ಸಾಹಿತಿ, ಕೊರಗ ಸಮುದಾಯದ ಹೋರಾಟ ಗಾರ ಪಾಂಗಾಳ ಬಾಬು ಕೊರಗ ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಸುಮಾರು 51 ಸಮುದಾಯಗಳು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿವೆ. ವಾಲ್ಮೀಕಿ, ಬೇಡ, ಮರಾಠಿ, ನಾಯ್ಕದಂತಹ ಬಲಿಷ್ಠ ಹಾಗೂ ಪ್ರಭಾವಿ ಸಮುದಾಯಗಳು ಸರಕಾರದ ಎಲ್ಲಾ ಮೀಸಲಾತಿಯ ಅವಕಾಶ ಗಳನ್ನು ಹಾಗೂ ಸರಕಾರದ ಸವಲತ್ತು ಕಬಳಿಸಿಕೊಂಡು ಕೊರಗರಂತಹ ಸಣ್ಣಪುಟ್ಟ ಸಮುದಾಯಗಳಿಗೆ ವಂಚಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಜನಸಂಖ್ಯೆ, ಶಿಕ್ಷಣ, ಭೂ ಬಳಕೆ, ಹಾಗೂ ರಾಜಕೀಯ ವಾಗಿಯೂ ಈ ಸಮುದಾಯಗಳು ಪ್ರಬಲವಾಗಿವೆ ಎಂದು ಅವರು ತಿಳಿಸಿದ್ದಾರೆ.
ಅನಾದಿ ಕಾಲದಿಂದಲೂ ಸಾಮಾಜಿಕ ಶೋಷಣೆ, ದಬ್ಬಾಳಿಕೆಗಳಿಂದ ನೊಂದು ಬೆಂದಿರುವ ಹಾಗೂ ವಿನಾಶದ ಅಂಚಿನಲ್ಲಿರುವ ಕೊರಗರಂತಹ ಅಸುರಕ್ಷಿತ ಸಮುದಾಯಗಳು ಅವರೊಂದಿಗೆ ಸ್ಫರ್ಧಿಸಿ ಸಮಪಾಲು ಪಡೆಯುವುದು ಸಾಧ್ಯವೇ ಇಲ್ಲ. ಪರಿಶಿಷ್ಟ ವರ್ಗಗಳ ಒಟ್ಟು ಶೇ.7 ಶೇಕಡ ಮೀಸಲಾತಿಯಲ್ಲಿ ಅರ್ಧ ಪರ್ಸೆಂಟ್ನ್ನು ಈ ಎರಡು ಸಮುದಾಯಗಳಿಗೆ ಮೀಸಲಿಟ್ಟರೆ ಮಾತ್ರ ಇವರ ಪ್ರಗತಿ ಸಾಧ್ಯ. ಇಲ್ಲವಾದಲ್ಲಿ ಕೆಲವೇ ವರ್ಷಗಳಲ್ಲಿ ಕೊರಗ ಸಮುದಾಯವು ಸರ್ವನಾಶ ಆಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಜನಪ್ರತಿನಿಧಿಗಳು, ಅಧಿಕಾರಿಗಳು, ಹಾಗೂ ಸಮಾಜಿಕ ಬದ್ಧತೆ ಇರುವ ಜನಸಾಮಾನ್ಯರು, ಸಾರ್ವಜನಿಕರು ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದು ಪಾಂಗಾಳ ಬಾಬು ಕೊರಗ ಪ್ರಕಟನೆಯಲ್ಲಿ ತಿಳಿಸಿದ್ದಾರೆ.