ಹೃದಯ ಚಿಕಿತ್ಸೆಯಲ್ಲಿ ಟಿಎಂವಿಆರ್ ಯಶಸ್ವಿ: ಕೆಎಂಸಿ ವೈದ್ಯರ ಸಾಧನೆ
ಉಡುಪಿ, ಫೆ.3: ಮಹಾರಾಷ್ಟ್ರದ 72 ವರ್ಷದ ಪುರುಷ ರೋಗಿಯೊಬ್ಬರ ಮೇಲೆ ಮಣಿಪಾಲ ಕೆಎಂಸಿಯ ಹೃದ್ರೋಗ ಚಿಕಿತ್ಸಾ ತಜ್ಞ ವೈದ್ಯರು ಅತ್ಯಾಧುನಿಕ ವಾಲ್ವ್-ಇನ್-ವಾಲ್ವ್ (ಟಿಎಂವಿಆರ್) ಕಾರ್ಯವಿಧಾನದಲ್ಲಿ ಯಶಸ್ವ ಶಸ್ತ್ರಚಿಕಿತ್ಸೆಯನ್ನು ನಡೆಸುವ ಮೂಲಕ ಹೊಸ ವಿಕ್ರಮ ಸಾಧಿಸಲಾಯಿತು.
ದಕ್ಷಿಣ ಕರ್ನಾಟಕದಲ್ಲಿ ನಡೆದ ಮೊತ್ತಮೊದಲ ಟ್ರಾನ್ಸ್ ಕ್ಯಾಥಟರ್ ಮಿಟ್ರಲ್ ವಾಲ್ವ್ ರಿಪ್ಲೇಸ್ಮೆಂಟ್ (ಟಿಎಂವಿಆರ್) ಶಸ್ತ್ರಚಿಕಿತ್ಸೆ ಇದಾಗಿದ್ದು, ಇದನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಹೃದಯ ಚಿಕಿತ್ಸೆಯಲ್ಲಿ ಇದು ವಿನೂತನ ಸಾಧನೆ ಎನಿಸಿಕೊಂಡಿದೆ. ಈ ಮೂಲಕ ಸಂಕೀರ್ಣವಾದ ಮಿಟ್ರಲ್ ವಾಲ್ವ್ ಕಾಯಿಲೆ ಇರುವ ಹೃದಯ ರೋಗಿಗಳಿಗೆ ಹೊಸ ಭರವಸೆಯ ಆಶಾಕಿರಣವನ್ನುಇ ನೀಡಿದೆ.
ಡಾ.ಟಾಮ್ ದೇವಾಸಿಯಾ, ಡಾ. ಮೋನಿಕಾ ಜವಾಂಜಲ್ ಮತ್ತು ಡಾ. ಹರೇಶ್ ಮೆಹ್ತಾ (ಮುಂಬೈ) ನೇತೃತ್ವದ ಹೃದ್ರೋಗ ಚಿಕಿತ್ಸಾ ತಂಡವು ಈ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ. ಸರ್ಜರಿ ಬಳಿಕ ರೋಗಿಯಲ್ಲಿ ಹೊಸ ಕವಾಟವನ್ನು ಯಶಸ್ವಿಯಾಗಿ ಅಳವಡಿಸಲಾಯಿತು. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯಲ್ಲಿ ತ್ವರಿತ ಸುಧಾರಣೆ ಕಂಡುಬಂದಿದ್ದು, ಮೂರು ದಿನಗಳ ಬಳಿಕ ರೋಗಿಯನ್ನು ಬಿಡುಗಡೆ ಮಾಡಲಾಯಿತು ಎಂದು ಕೆಎಂಸಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಹಾರಾಷ್ಟ್ರದ 72 ವರ್ಷ ಪ್ರಾಯದ ರೋಗಿ ಸುಮಾರು ಒಂದು ದಶಕದ ಹಿಂದೆ ತೆರೆದ ಹೃದಯ ಮಿಟ್ರಲ್ ಕವಾಟ ಬದಲಿ ಚಿಕಿತ್ಸೆಗೆ ಒಳಗಾಗಿದ್ದರು. ಅವರುತೀವ್ರ ಉಸಿರಾಟದ ತೊಂದರೆ ಮತ್ತು ಆಯಾಸದಿಂದ ಬಳಲುತ್ತಿದ್ದರು. ಇದು ಅವರ ದೈನಂದಿನ ಚಟುವಟಿಕೆಗಳಿಗೆ ತೊಂದರೆ ನೀಡುತ್ತಿತ್ತು. ವಯಸ್ಸು ಮತ್ತು ಸಂಬಂಧಿತ ಆರೋಗ್ಯ ಅಂಶಗಳಿಂದಾಗಿ ಪುನರಾವರ್ತಿತ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಅಪಾಯವಿದೆ ಎಂದು ಪರಿಗಣಿಸಲಾಗಿತ್ತು.
ಚಿಕಿತ್ಸೆಯ ಕುರಿತು ವಿವರಿಸಿದ ಕೆಎಂಸಿಯ ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ. ಟಾಮ್ ದೇವಾಸಿಯಾ, ಪುನರಾವರ್ತಿತ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಅಪಾಯವಿರುವ ವಯಸ್ಸಾದ ರೋಗಿಗಳಿಗೆ ಟಿಎಂವಿಆರ್ ಒಂದು ಪ್ರಮುಖ ಬದಲಿ ಚಿಕಿತ್ಸೆಯಾಗಿದೆ. ವಿಫಲವಾದ ಬಯೋಪ್ರೊಸ್ಥೆಟಿಕ್ ಮಿಟ್ರಲ್ ಕವಾಟಗಳು, ತೀವ್ರವಾದ ಮಿಟ್ರಲ್ ರಿಗರ್ಗಿಟೇಶನ್, ಉಸಿರಾಟದ ತೊಂದರೆ, ಪುನರಾವರ್ತಿತ ಹೃದಯ ವೈಫಲ್ಯದ ಲಕ್ಷಣಗಳು ಅಥವಾ ಈಗಾಗಲೇ ಹಿಂದಿನ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸುರಕ್ಷಿತವಾಗಿ ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಾಧ್ಯವಾಗದ ರೋಗಿಗಳಿಗೆ ಈ ಕನಿಷ್ಠ ಅಪಾಯದ ಚಿಕಿತ್ಸಾ ವಿಧಾನವು ವಿಶೇಷ ಪ್ರಯೋಜನಕಾರಿಯಾಗಿದೆ ಎಂದರು.
ತೊಡೆಸಂದಿಯಲ್ಲಿ ಸಣ್ಣ ಪಂಕ್ಚರ್ ಮೂಲಕ ಹೃದಯವನ್ನು ಪ್ರವೇಶಿಸುವ ಮೂಲಕ, ನಾವು ಎದೆಯನ್ನು ಮತ್ತೆ ತೆರೆಯುವುದನ್ನು ತಪ್ಪಿಸುತ್ತೇವೆ. ಇದು ನೋವು, ರಕ್ತದ ನಷ್ಟ, ಸೋಂಕಿನ ಅಪಾಯ ಮತ್ತು ಚೇತರಿಕೆಯ ಸಮಯ ವನ್ನು ಗಮನೀಯವಾಗಿ ಕಡಿಮೆ ಮಾಡುತ್ತದೆ. ಹೆಚ್ಚಿನ ರೋಗಿಗಳು ಅದೇ ದಿನ ಕುಳಿತುಕೊಳ್ಳಬಹುದು, ಮರುದಿನ ನಡೆಯಬಹುದು ಮತ್ತು ಉಸಿರಾಟ ಮತ್ತು ಶಕ್ತಿಯ ಮಟ್ಟದಲ್ಲಿ ತಕ್ಷಣದ ಸುಧಾರಣೆಯೊಂದಿಗೆ ಕೆಲವೇ ದಿನಗಳಲ್ಲಿ ಮನೆಗೆ ಮರಳಬಹುದು ಎಂದು ಡಾ.ಟಾಮ್ ತಿಳಿಸಿದರು.
ಈ ಸಂಕೀರ್ಣ ಶಸ್ತ್ರಚಿಕಿತ್ಸೆಯ ಯಶಸ್ಸಿಗೆ ಕೆಎಂಸಿಯ ಕ್ಯಾತ್ ಲ್ಯಾಬ್ ಮತ್ತು ಐಸಿಯು ತಂಡಗಳ ಜೊತೆಗೆ ಹೃದಯ ಶಸ್ತ್ರಚಿಕಿತ್ಸಕರು, ಹೃದಯ ಅರಿವಳಿಕೆ ತಜ್ಞರು, ಹೃದಯ ಸಂಬಂಧಿ ತಂತ್ರಜ್ಞರು ಸೇರಿದಂತೆ ಸಮಗ್ರ ವೈದ್ಯಕೀಯ ತಂಡದ ಬೆಂಬಲ ಮಹತ್ವದ್ದು ಎಂದರು.
ಕೆಎಂಸಿ ವೈದ್ಯರ ಸಾಧನೆಯನ್ನು ಶ್ಲಾಘಿಸಿದ ಮಾಹೆ ಬೋಧನಾ ಆಸ್ಪತ್ರೆಗಳ ಸಿಓಓ ಡಾ. ಸುಧಾಕರ್ ಕಂಟಿಪುಡಿ, ಟಿಎಂವಿಆರ್ ಚಿಕಿತ್ಸಾ ವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ದಕ್ಷಿಣ ಕರ್ನಾಟಕದ ಮೊದಲ ಆಸ್ಪತ್ರೆ ನಮ್ಮದಾಗಿದ್ದು, ಅನುಭವಿ ತಜ್ಞರು, ಅತ್ಯಾಧುನಿಕ ಕ್ಯಾತ್ಲ್ಯಾಬ್ ಮೂಲ ಸೌಕರ್ಯ ಮತ್ತು ಸುರಕ್ಷಿತ ಹಾಗೂ ಸೂಕ್ತವಾದ ಚಿಕಿತ್ಸೆಗೆ ಅಗತ್ಯವಾದ ಬಹುಶಿಸ್ತೀಯ ಹೃದಯ ಚಿಕಿತ್ಸಕರ ತಂಡದಿಂದ ಇದು ಸಾಧ್ಯವಾಗಿದೆ ಎಂದರು.