ಕರಾವಳಿಯ ಪುರಾತನ ನಿವೇಶನಗಳನ್ನು ರಕ್ಷಿಸಲು ಸಚಿವರಿಗೆ ಮನವಿ
ಉಡುಪಿ: ಕರ್ನಾಟಕ ಕರಾವಳಿಯ ಪುರಾತನ ನಿವೇಶನಗಳನ್ನು ತುರ್ತಾಗಿ ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಉಡುಪಿಯ ಆದಿಮ ಕಲಾ ಟ್ರಸ್ಟ್ ರಾಜ್ಯ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲರಿಗೆ ಲಿಖಿತ ಮನವಿ ಯನ್ನು ಸಲ್ಲಿಸಿ ಆಗ್ರಹಿಸಿತು.
ಸಚಿವರು ಬಾರಕೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರನ್ನು ಭೇಟಿಯಾದ ಆದಿಮ ಕಲಾ ಟ್ರಸ್ಟ್ನ ಸ್ಥಾಪಕ ಸಂಚಾಲಕ ಮತ್ತು ಖಾತ್ಯ ಪುರಾತತ್ವ ವಿದ್ವಾಂಸ ಪ್ರೊ. ಟಿ. ಮುರುಗೇಶಿ, ಸಚಿವರಿಗೆ ಕರ್ನಾಟಕ ಕರಾವಳಿಯ ಆದಿಮ ಕಲೆ ಪುಸ್ತಕವನ್ನು ನೀಡಿ ಮನವಿಯನ್ನು ಸಲ್ಲಿಸಿದರು.
ಕರಾವಳಿಯ ಪುರಾತನ ನಿವೇಶನಗಳ ಕುರಿತಂತೆ ಪ್ರೊ.ಮುರುಗೇಶಿ ಅವರ ಬಳಿ ಮಾಹಿತಿಗಳನ್ನು ಪಡೆದುಕೊಂಡ ಸಚಿವರು ಅವುಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು.
ಸಚಿವರಿಗೆ ನೀಡಿದ ಮನವಿ ಪತ್ರದಲ್ಲಿ ಕರಾವಳಿಯ ಪ್ರಾಗೈತಿಹಾಸಿಕ ನಿವೇಶನಗಳಾದ ಅವಲಕ್ಕಿಪಾರೆ, ಬುದ್ಧನ ಜೆಡ್ಡು. ಗಾವಳಿ, ಮೆನಾಲ, ಬರದಕಲ್ಲುಬೋಳೆ ಹಾಗೂ ಬೃಹತ್ ಶಿಲಾಯುಗದ ಪ್ರಮುಖ ನಿವೇಶನ ಗಳಾದ ಪಳ್ಳಿಯ ಮದ್ಮಲ್ಪಾದೆ ಮತ್ತು ಮೂಡುಕೋಣಾಜೆಯ ಮೊರಿಯರ ಬೆಟ್ಟದ ಬೃಹತ್ ಶಿಲಾಯುಗದ ಸಮಾಧಿ ನಿವೇಶನಗಳನ್ನು ಸಂರಕ್ಷಿಸಬೇಕೆಂದು ಒತ್ತಾಯಿಸಲಾಗಿದೆ.