×
Ad

ಪ್ರಕೃತಿಯ ಎಚ್ಚರಿಕೆ ಕಡೆಗಣಿಸಬೇಡಿ; ಸಂರಕ್ಷಣೆಗೆ ಕ್ರಮ ಕೈಗೊಳ್ಳಿ: ಪರಿಸರ ಹೋರಾಟಗಾರ ಅಖಿಲೇಖ ಚಿಪ್ಪಳ್ಳಿ

ಉಡುಪಿ: ಪರಿಸರ ಮತ್ತು ಶಿಕ್ಷಣ ಸಮ್ಮೇಳನ

Update: 2026-05-09 18:40 IST

ಉಡುಪಿ, ಮೇ 9: ಮಾನವನಿಂದ ತನ್ನ ಮೇಲಾಗುತ್ತಿರುವ ಅತಿಕ್ರಮಣದ ವಿರುದ್ಧ ಪ್ರಕೃತಿ ಕ್ಷಣಕ್ಷಣವೂ ಎಚ್ಚರಿಕೆ ಯನ್ನು ನೀಡುತ್ತಿದೆ. ಆದರೆ ನಾವಿನ್ನೂ ಅವುಗಳನ್ನು ಕಣ್ಬಿಟ್ಟು ನೋಡುತ್ತಿಲ್ಲ. ಪರಿಸರ ನೀಡುತ್ತಿರುವ ಎಚ್ಚರಿಕೆಯನ್ನು ಕಡೆಗಣಿಸದೇ ಅದರ ಸಂರಕ್ಷಣೆಗೆ ತುರ್ತು ಕ್ರಮಗಳನ್ನು ನಾವು ತೆಗೆದುಕೊಳ್ಳ ಬೇಕಾಗಿದೆ ಎಂದು ಶಿವಮೊಗ್ಗದ ಪರಿಸರ ಹೋರಾಟಗಾರ ಹಾಗೂ ಲೇಖಕ ಅಖಿಲೇಶ ಚಿಪ್ಪಳ್ಳಿ ಹೇಳಿದ್ದಾರೆ.

ಭಾರತ ಜ್ಞಾನ-ವಿಜ್ಞಾನ ಸಮಿತಿಯ ಉಡುಪಿ ಜಿಲ್ಲಾ ಶಾಖೆ ಪ್ರೊ.ಮಾಧವ ಗಾಡ್ಗೀಳ ನೆನಪಿನಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಂಡ ಎರಡು ದಿನಗಳ ‘ಪರಿಸರ ಮತ್ತು ಶಿಕ್ಷಣ ಸಮ್ಮೇಳನ’ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಪಶ್ಚಿಮ ಘಟ್ಟದ ಉಳಿವಿಗಾಗಿ, ಅಲ್ಲಿನ ಜೀವವೈವಿಧ್ಯತೆಗಳ ಸಂರಕ್ಷಣೆಗಾಗಿ ಪ್ರೊ.ಮಾಧವ ಗಾಡ್ಗೀಳ್ ಅವರು ತನ್ನ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಇಂದು ಪಶ್ಚಿಮ ಘಟ್ಟದ ವಿನಾಶಕ್ಕೆ ಕಾರಣವಾಗುವ ಯೋಜನೆಗಳನ್ನು ಸರಕಾರ ಪ್ರಕಟಿಸಿದಾಗ ಹಾಗೂ ಅದರ ಮೇಲೆ ದೌರ್ಜನ್ಯ ನಡೆದಾಗಲೆಲ್ಲಾ ಪ್ರೊ. ಗಾಡ್ಗೀಳ್ ತಟ್ಟನೆ ನೆನಪಾಗುತ್ತಾರೆ ಎಂದರು.

ಪ್ರೊ.ಮಾಧವ ಗಾಡ್ಗೀಳ್ ಅವರು ಪಶ್ಚಿಮ ಘಟ್ಟದ ಉಳಿವಿಗಾಗಿ ನೀಡಿದ ವರದಿಯನ್ನು ಆಧಾರವಾಗಿಟ್ಟುಕೊಂಡು ಅವರನ್ನು ತೆಗಳುವ, ಅವಹೇಳನ ಗೈಯ್ಯುವ ಕೆಲಸ, ಅದರ ವಿರುದ್ಧ ಅಪಪ್ರಚಾರ ನಡೆಸುವ ಕಾರ್ಯ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಂದ ನಿರಂತರವಾಗಿ ನಡೆಯಿತು. ಅವರನ್ನು ದೂಷಿಸುವ, ಖಳನಾಯಕನಾಗಿ ಚಿತ್ರಿಸುವ ಕಾರ್ಯವೂ ನಡೆಯಿತು. ಆದರೆ 2018 ಮತ್ತು 2024ರಲ್ಲಿ ಕೇರಳ, 2018-19ರಲ್ಲಿ ಕೊಡಗು, 2024ರಲ್ಲಿ ಅಂಕೋಲ, ಶಿರೂರುಗಳಲ್ಲಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭೂಕುಸಿತದ ದುರಂತ ನಮ್ಮ ಕಣ್ಣು ತೆರೆಸಬೇಕಿತ್ತು. ಆದರೆ ಇಷ್ಟಾದರೂ ನಾವು ಎಚ್ಚೆತ್ತುಕೊಂಡಿಲ್ಲ. ಇದೀಗ ಶಿವಮೊಗ್ಗ ಜಿಲ್ಲೆ ಸಾಗರ ಕೇಂದ್ರಿತವಾಗಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಯ ಮಾತು ಜೋರಾಗಿ ಕೇಳಿಬರುತ್ತಿದೆ ಎಂದು ಅವರು ವಿಷಾಧ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿದ್ದು ಪಶ್ಚಿಮ ಘಟ್ಟದ ಮೂಲೆಮೂಲೆಯನ್ನು ಅರಿತಿದ್ದ ಗಾಡ್ಗೀಳ್ ಕಾಡಿನ ಸೋಲಿಗರು, ಜೇನುಕುರುಬ ರೊಂದಿಗೆ ಸೇರಿ ಅಲ್ಲಿನ ಜೀವ ವೈವಿದ್ಯತೆಯನ್ನು ಜಗತ್ತಿನೆದುರು ತೆರೆದಿರಿಸಿದ್ದರು. ಆದರೆ ಅವರು ಕಳೆದ ಜನವರಿ ಯಲ್ಲಿ ತೀರಿಕೊಂಡಾಗ ಪ್ರಧಾನಿಯೂ ಸೇರಿದಂತೆ ರಾಜ್ಯದ ಒಬ್ಬನೇ ಒಬ್ಬ ರಾಜಕಾರಣಿ ಸಂತಾಪದ ಒಂದು ಮಾತನ್ನು ಆಡದಿರುವುದು ನಿಜವಾಗಿಯೂ ಬೇಸರದ ಸಂಗತಿ ಎಂದು ಅಖಿಲೇಖ ಚಿಪ್ಪಳ್ಳಿ ಹೇಳಿದರು.

ಭಾರತ ಜ್ಞಾನ-ವಿಜ್ಞಾನ ಸಮಿತಿಯ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಟಿ.ಎ.ಪ್ರಶಾಂತಬಾಬು ಮಾತನಾಡಿ ಇಂದು ಅಭಿವೃದ್ಧಿ ಎಂಬುದು ಪರಿಸರ ನಾಶಕ್ಕೆ ನೇರ ಸಂಬಂಧವನ್ನು ಹೊಂದಿದೆ. ಆದ್ದರಿಂದ ಪರಿಸರದ ಕುರಿತಂತೆ ಅಭಿವೃದ್ಧಿಗೆ ಪುನರ್‌ವ್ಯಾಖ್ಯಾನ ಮಾಡಬೇಕಾಗಿದೆ. ಪರಿಸರದ ಕುರಿತಂತೆ ಮಕ್ಕಳಲ್ಲಿ ಮೊದಲು ಕಾಳಜಿ ಮೂಡಿಸ ಬೇಕಾದ ತುರ್ತು ಅಗತ್ಯತೆ ಇದೆ ಎಂದರು.

ಭಾರತ ಜ್ಞಾನ-ವಿಜ್ಞಾನ ಸಮಿತಿಯ ಶಿಕ್ಷಣ ವಿಭಾಗದ ಮುಖ್ಯಸ್ಥ ವಜ್ರಮುನಿ ಅವರು ರಾಜ್ಯ ಸಮಿತಿಯ ಅಧ್ಯಕ್ಷರಾಗಿ ಪ್ರೊ.ಮಾಧವ ಗಾಡ್ಗೀಳ್ ಅವರೊಂದಿಗಿನ ಒಡನಾಟದ ಸವಿನೆನಪುಗಳನ್ನು ಹಂಚಿಕೊಂಡರೆ, ರಾಜ್ಯ ಸಮಿತಿಯ ಸದಸ್ಯ ಹಾಗೂ ‘ಟೀಚರ್’ ಶೈಕ್ಷಣಿಕ ಪತ್ರಿಕೆಯ ಸಂಪಾದಕ ಉದಯ ಗಾಂವಕರ್ ಅವರು ಆಶಯದ ನುಡಿಗಳನ್ನಾಡಿದರು.

ಭಾರತ ಜ್ಞಾನ-ವಿಜ್ಞಾನ ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷ ಹಾಗೂ ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಅವರು ಅಧ್ಯಕ್ಷತೆ ವಹಿಸಿದ್ದರೆ, ಪರಿಸರ ಚಿಂತಕಿ ಹಾಗೂ ಕಾರ್ಕಳದ ಕದಿಕೆ ಟ್ರಸ್ಟ್‌ನ ಮಮತಾ ರೈ, ಸಮಿತಿಯ ಬ್ರಹ್ಮಾವರ ತಾಲೂಕು ಅಧ್ಯಕ್ಷೆ ಅಭಿಲಾಷಾ ಹಂದೆ ಉಪಸ್ಥಿತರಿದ್ದರು.

ಭಾರತ ಜ್ಞಾನ-ವಿಜ್ಞಾನ ಸಮಿತಿ ಉಡುಪಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯಕ್ ಪಟ್ಲ ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರೆ, ಅಶೋಕ್ ತೆಕ್ಕಟ್ಟೆ ವಂದಿಸಿದರು.

ಪರಿಸರ, ಪಶ್ಚಿಮ ಘಟ್ಟದ ರಕ್ಷಣೆಗೆ ಕೆಲವು ಸಲಹೆ

ಪ್ರಕೃತಿ ನೀಡುತ್ತಿರುವ ಎಚ್ಚರಿಕೆಯನ್ನು ಗಂಭೀರವಾಗಿ ಸ್ವೀಕರಿಸಿ ಪರಿಸರ ಹಾಗೂ ಪಶ್ಚಿಮ ಘಟ್ಟದ ಸಂರಕ್ಷಣೆಗೆ ಕೆಲವು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಅಖಿಲೇಶ್ ಚಿಪ್ಪಳ್ಳಿ ಸಲಹೆ ನೀಡಿದರು.

*ಪ್ರೊ.ಮಾಧವ ಗಾಡ್ಗೀಳ್ ವರದಿಯನ್ನು ತಕ್ಷಣ ಅನುಷ್ಠಾನಗೊಳಿಸಿ

*ಪಶ್ಚಿಮ ಘಟ್ಟ ಪರಿಸರ ಪ್ರಾಧಿಕಾರ ರಚಿಸಿ

*ಅಕ್ರಮ ಕ್ವಾರಿ, ಗಣಿಗಾರಿಕೆಯನ್ನು ತಕ್ಷಣವೇ ಸ್ಥಗಿತಗೊಳಿಸಿ

*ತಪ್ಪಿತಸ್ಥ ಅಧಿಕಾರಿ, ರಾಜಕಾರಣಿಗಳನ್ನು ವಿಚಾರಣೆಗೊಳಪಡಿಸಿ

*ಸ್ಥಳಾಂತರ, ಪುನರ್ವಸತಿ ಕುರಿತು ಸ್ಪಷ್ಟ ನೀತಿ ನಿರೂಪಿಸಿ





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News