ಕೊರ್ಗಿ: ಡಿಸಿ ಮನ್ನಾ ಭೂಮಿಯಲ್ಲಿ ದಲಿತ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ
ಉಡುಪಿ, ಮೇ 16: ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಡಿಸಿ ಮನ್ನಾ ಭೂಮಿಯಲ್ಲಿ ಸುಮಾರು 15 ಬಡ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ತಲಾ 0.26ಎಕರೆ ಭೂಮಿ ಮಂಜೂರಾಗಿದ್ದು, ಇದರ ಹಕ್ಕುಪತ್ರವನ್ನು ಮೇ.16ರಂದು ಉಡುಪಿಯ ಜಿಲ್ಲಾಧಿಕಾರಿ ಕಛೇರಿಯ ಎದುರುಗಡೆಯ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ತಳಿ ಎದುರು ಕುಂದಾಪುರ ತಹಶಿಲ್ದಾರ್ ಪ್ರದೀಪ್ ಕುರ್ಡೆಕರ್ ಫಲಾನುಭವಿಗಳಿಗೆ ವಿತರಿಸಿದರು.
ಬಾಬಾ ಸಾಹೇಬರ ಪುತ್ತಳಿಗೆ ಮಾಲಾರ್ಪಣೆ ಮಾಡಿದ ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ನಮ್ಮ ಭೂಮಿ ನಮ್ಮ ಹಕ್ಕು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹೋರಾಟ ನಡೆಯುತ್ತಿದ್ದು ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದಲ್ಲಿ 15 ಕುಟುಂಬಕ್ಕೆ ಹಕ್ಕು ಪತ್ರ ಕೊಡಿಸುವಲ್ಲಿ ದಸಂಸ ಕುಂದಾಪುರ ತಾಲೂಕು ಸಮಿತಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪ್ರದಾನ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ಮಾತನಾಡಿ, ನಮ್ಮ ಭೂಮಿ ನಮ್ಮ ಹಕ್ಕು ಶೀರ್ಷಿಕೆಯಡಿ ಯಲ್ಲಿ ನಮ್ಮ ಸಂಘಟನೆ ಸುಮಾರು 20 ವರ್ಷಗಳಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಲವಾರು ರೀತಿಯಲ್ಲಿ ಹೋರಾಟ ನಡೆಸುತ್ತಿದೆ. ಹೋರಾಟದ ಭಾಗಶಃ ಫಲವಾಗಿ ಕೊರ್ಗಿ ಗ್ರಾಮದಲ್ಲಿನ 15 ಬಡ ಭೂ ರಹಿತ ಕುಟುಂಬದ ಜನರಿಗೆ 0.26ಎಕ್ರೆ ಭೂಮಿ ದೊರಕಿದೆ. ಇದರ ಹಿಂದೆ ನಮ್ಮ ತಾಲೂಕು ಸಮಿತಿ ಮತ್ತು ಕೊರ್ಗಿ ಗ್ರಾಮ ಶಾಖೆಯ ಪರಿಶ್ರಮ ಅತ್ಯಂತ ಜವಾಬ್ದಾರಿಯುತ ಒಗ್ಗಟ್ಟಿನ ಕಾರ್ಯಪ್ರವೃತ್ತಿಯಿದೆ ಎಂದು ತಿಳಿಸಿದರು.
ತಾಲೂಕು ಪ್ರದಾನ ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ, ಜಿಲ್ಲಾ ಮಹಿಳಾ ಸಂಘಟನ ಸಂಚಾಲಕಿ ಗೀತಾ ಸುರೇಶ್, ಬ್ರಹ್ಮಾವರ ತಾಲೂಕು ಸಂಚಾಲಕ ಶ್ಯಾಮ್ ಸುಂದರ್ ತೆಕ್ಕಟ್ಟೆ, ಕಾಪು ತಾಲೂಕು ಸಂಚಾಲಕ ರಾಜೇಂದ್ರ ಮಾಸ್ಟರ್, ದಲಿತ ಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು, ಕುಂದಾಪುರ ತಾಲೂಕು ಕೋಶಾಧಿಕಾರಿ ಚಂದ್ರ ಕೊರ್ಗಿ, ಸಂಘಟನಾ ಸಂಚಾಲಕರಾದ ಚಂದ್ರ ಉಳ್ಳೂರು, ಅಶೋಕ್ ಮೊಳಹಳ್ಳಿ, ತಾಲೂಕು ಮಹಿಳಾ ಸಂಘಟನ ಸಂಚಾಲಕಿ ಭವಾನಿ ನಾಯ್ಕ್, ಕೊರ್ಗಿ ಗ್ರಾಮ ಶಾಖೆ ಸಂಚಾಲಕ ಪ್ರದೀಪ್ ಕೊರ್ಗಿ, ಸಿದ್ದಾಪುರ ಗ್ರಾಮ ಶಾಖೆ ಸಂಚಾಲಕ ಶ್ರೀಧರ ಕಾಸನಕಟ್ಟೆ, ಕೃಷ್ಣ ಕೊರ್ಗಿ, ಕೀರ್ತಿ ಪಡುಬಿದ್ರಿ, ಕುಮಾರ್ ಕೋಟ, ಕೃಷ್ಣ ಗೆಂಡೆಕೆರೆ, ಗೋವಿಂದ ಹಳಗೇರಿ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.