×
Ad

ತಾತ್ಕಾಲಿಕ ಏಕನಿವೇಶನ ಬದಲು ಅಂತಿಮ ಏಕನಿವೇಶನ ಒದಗಿಸಲು ಕ್ರಮಕ್ಕೆ ಸೂಚನೆ

Update: 2026-05-19 18:38 IST

ಉಡುಪಿ, ಮೇ 19: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪ್ರಾಧಿಕಾರಕ್ಕೆ ಸಂಬಂಧಿತ ಕಡತಗಳ ಬಗ್ಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು

ಉಡುಪಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬಡ ಮತ್ತು ಮಧ್ಯಮ ವರ್ಗದವರ ಮನೆ ನಿರ್ಮಾಣ ಉದ್ದೇಶಕ್ಕೆ ತಾಂತ್ರಿಕ ಅಭಿಪ್ರಾಯ ನೀಡುವಲ್ಲಿ ಆಗುತ್ತಿರುವ ಸಮಸ್ಯೆ ಮತ್ತು ವಿಳಂಬವನ್ನು ಮನಗೊಂಡು ನಿಯಮಗಳಲ್ಲಿ ಕೆಲವೊಂದು ಸರಳೀಕರಣ ವಿಧಾನಗಳನ್ನು ಅಳವಡಿಸಿಕೊಳ್ಳಲು ಸೂಚಿಸಿದರು.

ಮನೆ ನಿರ್ಮಾಣದ ಏಕ ವಿನ್ಯಾಸ ಅನುಮೋದನೆ ಸಮಯದಲ್ಲಿ ಇತ್ತೀಚಿಗೆ ತಾತ್ಕಾಲಿಕ ಅನುಮೋದನೆ ಮತ್ತು ಅಂತಿಮ ಅನುಮೋದನೆ ಎಂಬ ಎರಡು ಹಂತಗಳನ್ನು ಅಳವಡಿಸಿರುವುದರಿಂದ ಅರ್ಜಿದಾರರಿಗೆ ಅನಗತ್ಯ ವಿಳಂಬ ಮತ್ತು ತೊಂದರೆ ಉಂಟಾಗುತ್ತಿದೆ. ರಸ್ತೆ ಅಗಲೀಕರಣವಿದ್ದಲ್ಲಿ ಈ ಹಿಂದಿನಂತೆ ಸ್ಥಳೀಯ ಸಂಸ್ಥೆಗಳಿಗೆ ಶರ್ತ ವಿಧಿಸಿ ಅಂತಿಮ ಅನುಮೋದನೆ ನೀಡುವುದು ಸೂಕ್ತವಾಗಿದೆ. ಅಗಲೀಕರಣದ ಜಾಗವು ಸರಕಾರಕ್ಕೆ ಹಸ್ತಾಂತರವಾಗಿರು ವುದನ್ನು ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ನಿಗದಿತವಾಗಿ ವರದಿ ಪಡೆದುಕೊಳ್ಳುವುದರ ಮೂಲಕ ಖಾತ್ರಿಪಡಿಸಿಕೊಳ್ಳ ಬಹುದಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

ದಶಕಗಳ ಹಿಂದೆ ನಿರ್ಮಾಣವಾದ ಸರಕಾರಿ ಬಡಾವಣೆಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಹಕ್ಕು ಪತ್ರ ಪಡೆದ ಫಲಾನುಭವಿಗಳ ಮನೆ ಮರು ನಿರ್ಮಾಣದ ಸಂದರ್ಭದಲ್ಲಿ ರಸ್ತೆ ಅಗಲೀಕರಣ ಸೂಚಿಸುತ್ತಿರುವುದ ರಿಂದ ಕನಿಷ್ಠ ಮೂರರಿಂದ ಐದು ಸೆಂಟ್ಸ್ ಜಾಗ ಪಡೆದ ಅರ್ಜಿದಾರರ ಮನೆ ಮರು ನಿರ್ಮಾಣ ಕಷ್ಟಕರವಾಗಿದೆ. ಈಗಾಗಲೇ ಸದರಿ ಬಡಾವಣೆಗಳಲ್ಲಿ ಅಭಿವೃದ್ಧಿ ಬೆಳವಣಿಗೆಗಳು ಆಗಿರುವುದರಿಂದ ಈ ಹಿಂದಿನಂತೆ ಏಕ ವಿನ್ಯಾಸ ಅನುಮೋದ ನೆಯಿಂದ ವಿನಾಯತಿ ನೀಡಿ ಮನೆ ಮರು ನಿರ್ಮಾಣಕ್ಕೆ ಪರವಾನಿಗೆ ನೀಡಬೇಕಾಗಿದೆ. ಹೊಸ ಸರಕಾರಿ ಬಡಾವಣೆಗಳಿಗೆ ನಗರ ಪ್ರಾಧಿಕಾರದಿಂದ ಅನುಮೋದನೆ ನೀಡುವುದನ್ನು ಅಳವಡಿಸಿಕೊಳ್ಳಬಹುದಾಗಿದೆ ಎಂದರು.

ವಸತಿ ರಹಿತ ಕಡುಬಡ ಕುಟುಂಬಗಳಿಗೆ ಸರಕಾರ 94 ಸಿಸಿ ಕಾನೂನಿನಡಿ ಮಂಜೂರು ಮಾಡಿದ ಒಂದೆರಡು ಸೆಂಟ್ಸ್ ನಿವೇಶನಕ್ಕೆ ಏಕ ವಿನ್ಯಾಸ ಅನುಮೋದನೆ ಇಂದ ವಿನಾಯತಿ ನೀಡಬೇಕಾದ ಅಗತ್ಯತೆ ಇದೆ. 2008ರ ಬಳಿಕ ಉಡುಪಿ ನಗರದ ಸಮಗ್ರ ಮಾಸ್ಟರ್ ಪ್ಲ್ಯಾನ್ ತಯಾರಿಯಾಗದೇ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ 15 ದಿನದಲ್ಲಿ ಇಲಾಖೆಯ ಅಧಿಕಾರಿಗಳು, ಇಂಜಿನಿಯರ್ ಅಸೋಸಿಯೇಷನ್, ಬಿಲ್ಡರ್ಸ್ ಅಸೋಸಿಯೇ ಷನ್ ಹಾಗೂ ವಿವಿಧ ಪರಿಣಿತರ ಜೊತೆ ಸಭೆ ನಡೆಸಿ, ಮಾಸ್ಟರ್ ಪ್ಲ್ಯಾನ್ ರೂಪಿಸುವ ಸಂಸ್ಥೆಯ ಪ್ರತಿನಿಧಿ ಗಳೊಂದಿಗೆ ಸಮಾಲೋಚನೆ ನಡೆಸಿ ಅತೀ ಶೀಘ್ರದಲ್ಲೇ ಮಾಸ್ಟರ್ ಪ್ಲ್ಯಾನ್ ಅಂಗೀಕಾರಕ್ಕೆ ಕ್ರಮ ವಹಿಸುವುದಾಗಿ ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಂಜುನಾಥ ಆರ್., ಅಧಿಕಾರಿಗಳಾದ ಸಚಿನ್, ಸತ್ಯ, ನಗರಸಭೆ ಮಾಜಿ ಸದಸ್ಯರು, ಇಂಜಿನಿಯರ್ ಹಾಗೂ ಬಿಲ್ಡರ್ಸ್ ಅಸೋಸಿಯೇಷನ್ ಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News