ವಿದೇಶಕ್ಕೆ ರಫ್ಪು ಕುಂಠಿತ; ತೆಂಗಿನಕಾಯಿ ಬೆಲೆಯಲ್ಲಿ ಭಾರೀ ಕುಸಿತ: ಆತಂಕದಲ್ಲಿ ತೆಂಗು ಬೆಳೆಗಾರರು
ಪಡುಬಿದ್ರಿ, ಮೇ 31: ಪಶ್ಚಿಮ ಏಷ್ಯಾ ದೇಶಗಳಲ್ಲಿ ಕಂಡುಬಂದ ಯುದ್ಧದ ಪರಿಸ್ಥಿತಿಯಲ್ಲಿ ಹಿನ್ನೆಲೆಯಲ್ಲಿ ಭಾರತ ಮತ್ತು ಆ ದೇಶಗಳ ನಡುವಿನ ರಫ್ತು ವ್ಯವಹಾರಗಳು ಹಠಾತ್ ಕುಂಠಿತಗೊಂಡ ಪರಿಣಾಮ ಅದರ ನೇರ ಪರಿಣಾಮ ಸ್ಥಳೀಯ ಮಾರುಕಟ್ಟೆಯ ಮೇಲೂ ಬಿದ್ದಿದೆ. ಇದರಿಂದ ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗ ತೆಂಗಿನಕಾಯಿಗೆ ಇದೀಗ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯುತ್ತಿರುವುದರಿಂದ ಅದರ ಬೆಲೆಯಲ್ಲಿ ಇಳಿಕೆಯಾಗುತ್ತಿದೆ.
ಕಳೆದೊಂದು ವರ್ಷದಲ್ಲಿ ತೆಂಗಿನಕಾಯಿ ಉತ್ಪಾದನೆ ಹೆಚ್ಚಾಗಿದ್ದರೂ, ಇದೀಗ ಬೇಡಿಕೆ ತೀವ್ರವಾಗಿ ಕುಸಿಯುತ್ತಿ ರುವುದರಿಂದ ತೆಂಗು ಬೆಳೆಗಾರರ ಆತಂಕಕ್ಕೊಳಗಾಗಿದ್ದಾರೆ. ಹಿಂದೆ ತೆಂಗಿನ ಉತ್ಪನ್ನಗಳಿಗೆ ವಿದೇಶಗಳಲ್ಲಿ ಉತ್ತಮ ಬೇಡಿಕೆ ಇತ್ತು. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಅನಿಶ್ಚಿತತೆ, ರಫ್ತು ವ್ಯವಹಾರದಲ್ಲಿ ಕಂಡುಬಂದ ಮಂದಗತಿಯಿಂದ ಮಾರುಕಟ್ಟೆ ಕುಸಿತ ಕಂಡಿದೆ. ಪರಿಣಾಮವಾಗಿ ಸ್ಥಳೀಯ ಮಟ್ಟದಲ್ಲೂ ಖರೀದಿ ಪ್ರಮಾಣ ಇಳಿಕೆಯಾಗಿದ್ದು, ಇದು ತೆಂಗಿನಕಾಯಿ ಬೆಲೆಯ ಕುಸಿತಕ್ಕೆ ಕಾರಣವಾಗಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅದರಲ್ಲೂ ಕರಾವಳಿ ತೀರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಇಲ್ಲಿನ ಬೆಳೆಗಾರರು ತಾಜಾ ತೆಂಗಿನಕಾಯಿಗೆ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ. ಮಾರ್ಚ್-ಎಪ್ರಿಲ್, ಆಗಸ್ಟ್-ಸೆಪ್ಟೆಂಬರ್ ಹಾಗೂ ಡಿಸೆಂಬರ್-ಜನವರಿ ತಿಂಗಳಲ್ಲಿ ತೆಂಗಿನಕಾಯಿಯ ಕಟಾವು ಪ್ರಮಾಣ ಹೆಚ್ಚಾಗುವುದರಿಂದ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ತೆಂಗಿನಕಾಯಿ ಬರುತ್ತವೆ. ಇದರಿಂದ ಸರಬರಾಜು ಹೆಚ್ಚಾಗಿ ಬೆಲೆ ಮೇಲೆ ಒತ್ತಡ ಉಂಟಾಗುತ್ತದೆ.
ಮನೆಗಳ ಎದುರೇ ರಾಶಿ: ಆದರೆ ಕಳೆದ ಕೆಲವು ತಿಂಗಳುಗಳಿಂದ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಬೆಲೆ ತೀವ್ರ ಕುಸಿತ ಕಂಡಿರುವುದರಿಂದ ರೈತರು ಬೆಲೆ ಏರಿಕೆಯಾಗುವ ನಿರೀಕ್ಷೆಯಲ್ಲಿ ಕಾಯಿಗಳನ್ನು ಮಾರಾಟ ಮಾಡದೆ ಮನೆಗಳಲ್ಲೇ ಸಂಗ್ರಹಿಸಿಟ್ಟಿರುವುದು ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ. ಮನೆಗಳ ಮುಂಭಾಗ, ಕೊಟ್ಟಿಗೆಗಳು ಹಾಗೂ ಗೋದಾಮುಗಳಲ್ಲಿ ತೆಂಗಿನಕಾಯಿಯನ್ನು ಸಿಪ್ಪೆ ಸಹಿತ ರಾಶಿರಾಶಿಯಾಗಿ ಸಂಗ್ರಹಿಸಿಟ್ಟಿರುವ ದೃಶ್ಯ ಈಗ ಸಾಮಾನ್ಯವಾಗಿದೆ.
ಇದೀಗ ಮಳೆಗಾಲವೂ ಸನ್ನಿಹಿತವಾಗಿರುವುದರಿಂದ ಬೆಳೆಗಾರರ ಆತಂಕ ಇನ್ನಷ್ಟು ಹೆಚ್ಚಿದೆ. ತೆಂಗಿನಕಾಯಿಯನ್ನು ಹೀಗೆ ಹೆಚ್ಚು ದಿನ ಕೂಡಿಟ್ಟಿರುವುದು ಕಷ್ಟ. ಕಾಯಿಗಳು ಮೊಳಕೆಯೊಡೆಯುವ ಅಥವಾ ಹಾಳಾಗುವ ಸಾಧ್ಯತೆ ಹೆಚ್ಚಾಗಿದ್ದು, ಇದು ರೈತರಿಗೆ ‘ಕೈಗೆ ಬಂದ ತುತ್ತು ಬಾಯಿಗೆ ಬಾರದ’ ಪರಿಸ್ಥಿತಿಗೆ ಕಾರಣವಾಗುತ್ತದೆ. ಹೀಗಾಗಿ ಅವರು ಅದನ್ನು ಹೇಗಾದರೂ ವಿಲೇವಾರಿ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ತೆಂಗಿನ ತೋಟಗಳ ನಿರ್ವಹಣೆಗೆ ಬೇಕಾಗುವ ರಾಸಾಯನಿಕ ಗೊಬ್ಬರ, ಕಾರ್ಮಿಕರ ಕೂಲಿ ಹಾಗೂ ನೀರಾವರಿ ವೆಚ್ಚಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಉತ್ಪನ್ನಕ್ಕೆ ಸಮರ್ಪಕ ಬೆಲೆ ಸಿಗದಿರುವುದು, ನಿಶ್ಚಿತ ಆದಾಯದ ಮೂಲವಾಗಿದ್ದ ತೆಂಗು ಸಹ ರೈತರ ಆತಂಕ ಹೆಚ್ಚಿಸುತ್ತಿದೆ.
16 ಸಾವಿರ ಹೆಕ್ಟೇರ್ನಲ್ಲಿ ತೆಂಗು: ಉಡುಪಿ ಜಿಲ್ಲೆಯಾದ್ಯಂತ ಸುಮಾರು 16,303 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಸುಮಾರು 98 ಸಾವಿರ ರೈತರು ತೆಂಗು ಕೃಷಿಯನ್ನು ಅವಲಂಬಿಸಿದ್ದಾರೆ. ‘ಇರಾನ್- ಅಮೆರಿಕ ಯುದ್ಧ ತೆಂಗು ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರಿದೆ. ಇದರಿಂದ ತೆಂಗು ಹಾಗೂ ತೆಂಗಿನ ಉತ್ಪನ್ನಗಳಿಗೆ ಬೇಡಿಕೆ ಇಲ್ಲದೆ ರಫ್ತು ಹೆಚ್ಚುಕಡಿಮೆ ಸಂಪೂರ್ಣ ನಿಂತಿದೆ. ಇದು ತೆಂಗಿನ ದರದಲ್ಲಿ ಕುಸಿತಕ್ಕೆ ಕಾರಣವಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್ ತಿಳಿಸಿದ್ದಾರೆ.
ತೆಂಗು ಬೆಳೆಗಾರರ ಆತಂಕ
ಒಮ್ಮೆ ಉತ್ತಮ ಆದಾಯ ತಂದುಕೊಡುತ್ತಿದ್ದ ತೆಂಗಿನಕಾಯಿ ಈಗ ರೈತರಿಗೆ ಹೊರೆಯಾಗತೊಡಗಿದೆ. ಕಳೆದ ವರ್ಷ ಉತ್ತಮ ಬೆಲೆ ದೊರೆತಿದ್ದರಿಂದ ಈ ಬಾರಿ ಸಹ ರೈತರು ಉತ್ತಮ ಆದಾಯ ನಿರೀಕ್ಷಿಸಿದ್ದರು. ಆದರೆ ಈಗ ಒಂದು ಕ್ವಿಂಟಲ್ ತೆಂಗಿನಕಾಯಿಗೆ ಹಿಂದಿನ ವರ್ಷಗಳಿಗಿಂತ ಬಹಳ ಕಡಿಮೆ ದರ ದೊರೆಯುತ್ತಿದ್ದು, ಸಾಗಾಟ ವೆಚ್ಚ ಮತ್ತು ಕೂಲಿ ಖರ್ಚುಗಳನ್ನು ಕಳೆದರೆ ರೈತರಿಗೆ ಲಾಭವೇ ಉಳಿಯದ ಸ್ಥಿತಿ ನಿರ್ಮಾಣ ವಾಗಿದೆ. ಈ ಬೆಲೆಗೆ ಮಾರಾಟ ಮಾಡಿದರೆ ಖರ್ಚು ಮರಳಿ ಬರುವುದಿಲ್ಲ ಎಂದು ತೆಂಗು ಬೆಳೆಗಾರ ಪ್ರಾಣೇಶ್ ಹೆಜಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ.