×
Ad

ಜನರ ಮತದಾನದ ಹಕ್ಕನ್ನು ಕಸಿಯಲು ಬಿಡುವುದಿಲ್ಲ: ವಿನಯಕುಮಾರ್ ಸೊರಕೆ

Update: 2026-06-18 20:03 IST

ಉಡುಪಿ, ಜೂ.18: ಈಗಾಗಲೇ ಎಸ್‌ಐಆರ್ ನಡೆಸಿದ ವಿವಿಧ ರಾಜ್ಯಗಳಲ್ಲಿ ಲಕ್ಷಾಂತರ ಮಂದಿಯ ಮತದಾನದ ಹಕ್ಕನ್ನು ಕೇಂದ್ರ ಸರಕಾರ ಕಸಿದಿದ್ದು, ಅದನ್ನು ಕರ್ನಾಟಕದಲ್ಲಿ ಆಗಲು ಬಿಡುವುದಿಲ್ಲ ಎಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ವಿನಯಕುಮಾರ್ ಸೊರಕೆ ಹೇಳಿದ್ದಾರೆ.

ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ತುರ್ತು ಸಭೆಯಲ್ಲಿ ಅವರು ಮಾತನಾಡುತಿದ್ದರು. ಕೇಂದ್ರ ಸರಕಾರ ದುರುದ್ದೇಶದಿಂದ ಎಸ್‌ಐಆರ್‌ನ್ನು ಅನುಷ್ಠಾನ ಗೊಳಿಸುತಿದ್ದರೆ ಅದನ್ನು ಪ್ರತಿಭಟಿಸಲಾಗುವುದು ಎಂದು ಹೇಳಿದರು.

ಮಾಜಿ ಸಚಿವ ಕೆ.ಜಯಪ್ರಕಾಶ ಹೆಗ್ಡೆ ಮಾತನಾಡಿ ಜಿಲ್ಲೆಯಲ್ಲಿ ಎಸ್‌ಐಆರ್ ಅನುಷ್ಠಾನದ ವೇಳೆ ಕೈಗೊಳ್ಳಬೇಕಾದ ಪೂರ್ವಸಿದ್ಧತೆ ಕುರಿತು ವಿವರಣೆ ನೀಡಿದರಲ್ಲದೇ, ಬೂತ್ ಮಟ್ಟದ ಏಜೆಂಟ್‌ಗಳಿಗೆ ಈ ಕುರಿತು ತರಬೇತಿ ನೀಡಿ ಅವರನ್ನು ಸಜ್ಜುಗೊಳಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೇಂದ್ರ ಸರಕಾರ ಎಸ್‌ಐಆರ್ ಮೂಲಕ ಎಲ್ಲರಿಗೂ ಮತದಾನದ ಹಕ್ಕನ್ನು ನೀಡಬೇಕೇ ಹೊರತು ಮತದಾನ ಹಕ್ಕು ಕಸಿಯು ವಂತಿಲ್ಲ. ಉಡುಪಿ ಜಿಲ್ಲೆಯ ಎಲ್ಲಾ ಅರ್ಹ ಮತದಾರರ ಹೆಸರು ಮತಪಟ್ಟಿ ಯಲ್ಲಿ ಇರುವಂತೆ ನಿಗಾ ವಹಿಸಲಾಗುವುದು ಎಂದರು.

ಇದಕ್ಕಾಗಿ ಎಲ್ಲಾ ಕಾರ್ಯಕರ್ತರು ಈಗಿಂದೀಗಲೆ ಈ ಬಗ್ಗೆ ಕಾರ್ಯಪ್ರವತ್ತ ರಾಗಬೇಕೆಂದು ಕರೆ ನೀಡಿದ ಕೊಡ ವೂರು, ಬೆಂಗಳೂರಿನಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಸಮಾರಂಭಕ್ಕೆ ಜಿಲ್ಲೆಯಿಂದ ಕನಿಷ್ಠ ಒಂದು ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ನಾಯಕ ಪ್ರಸಾದ್‌ರಾಜ್ ಕಾಂಚನ್ ಅವರು ಎಸ್‌ಐಆರ್ ಸಮರ್ಪಕವಾಗಿ ನಡೆಯಲು ಪಕ್ಷ ಕೈಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಣೆ ನೀಡಿದರು.

ಪ್ರಾರಂಭದಲ್ಲಿ ಇತ್ತೀಚೆಗೆ ಅಗಲಿದ ಕಾಂಗ್ರೆಸ್ ಬಂಧುಗಳಿಗೆ, ಎಂಐಸಿಸಿ ಕಾರ್ಯದರ್ಶಿ ಸೂರಜ್‌ಹೆಗ್ಡೆ ಒಳಗೊಂಡತೆ ಎಲ್ಲರಿಗೂ ಶ್ರದ್ಧಾಂಜಲಿಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಅರ್ಪಿಸಿದರು.

ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಲಾಡಿ ಶಿವರಾಮ ಶೆಟ್ಟಿ, ವೆರೋನಿಕ ಕರ್ನೆಲಿಯೋ, ರಾಜು ಪೂಜಾರಿ, ದಿನಕರ ಹೇರೂರು, ಪ್ರಶಾಂತ ಜತ್ತನ್ನ, ಪ್ರಖ್ಯಾತ ಶೆಟ್ಟಿ, ಶಬ್ಬೀರ್ ಅಹಮ್ಮದ್, ಶೇಖ್ ವಾಹೀದ್ ದಾವೂದ್, ಬಿ.ಭುಜಂಗ ಶೆಟ್ಟಿ, ಗೀತಾ ವಾಗ್ಲೆ, ಬ್ಲಾಕ್ ಅಧ್ಯಕ್ಷರಾದ ರಮೇಶ್ ಕಾಂಚನ್, ವೈ ಸುಕುಮಾರ್, ಸಂತೋಷ್ ಕುಲಾಲ್, ಶುಭದ ರಾವ್, ಗೋಪಿನಾಥ ಭಟ್, ಶಂಕರ್ ಕುಂದರ್, ಅರವಿಂದ ಪೂಜಾರಿ, ರಾಘವೇಂದ್ರ ಶೆಟ್ಟಿ, ಪ್ರಮುಖರಾದ ಹರೀಶ್ ಕಿಣಿ, ಕಿರಣ್ ಹೆಗ್ದೆ , ಕಿಶೋರ್ ಎರ್ಮಾಳ್, ಶರ್ಫುದ್ದಿನ್ ಶೇಖ್, ಜಯಕುಮಾರ್, ರೋಶನ್ ಶೆಟ್ಟಿ, ಶಶಿಧರ ಶೆಟ್ಟಿ ಎಲ್ಲೂರು, ಬಿಪಿನ್‌ಚಂದ್ರ ಪಾಲ್, ಮಹಾಬಲ ಕುಂದರ್, ಸರಸು ಬಂಗೇರ, ಉದ್ಯಾವರ ನಾಗೇಶ್ ಕುಮಾರ್ , ಕೀರ್ತಿ ಶೆಟ್ಟಿ, ರೋಶನಿ ಒಲಿವೆರಾ, ನವೀನ್‌ಚಂದ್ರ ಶೆಟ್ಟಿ, ಇಸ್ಮಾಯಿಲ್ ಆತ್ರಾಡಿ, ರೇವತಿ ಶೆಟ್ಟಿ, ಬಿ.ಹಿರಿಯಣ್ಣ, ಬಿ. ನರಸಿಂಹ ಮೂರ್ತಿ, ಸುನಿಲ್ .ಡಿ. ಬಂಗೇರ ಮಂತಾದವರು ಉಪಸ್ಥಿತರಿದ್ದರು.

ಡಿಸಿಸಿ ಉಪಾಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ ಸ್ವಾಗತಿಸಿದರೆ, ಜಿಲ್ಲಾ ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಕೆ. ಅಣ್ಣಯ್ಯ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು. ಕ್ರೈಸ್ತ ಅಭಿವೃದ್ದಿ ಮಂಡಳಿ ಉಪಾಧ್ಯಕ್ಷ ಪ್ರಶಾಂತ್ ಜತ್ತನ್ನ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News