×
Ad

ಸಂಪೂರ್ಣ ಹದಗೆಟ್ಟ ಮೂಡುಗಲ್ಲು ಗುಹಾಂತರ ದೇಗುಲಸಂಪರ್ಕ ರಸ್ತೆ: ದುರಸ್ತಿಗೆ ಆಗ್ರಹ

ಕೆಸರುಮಯ ರಸ್ತೆಯಲ್ಲಿ ಭಕ್ತರ ಸಂಚಾರ

Update: 2026-06-18 20:45 IST

ಕುಂದಾಪುರ, ಜೂ.18: ಇತಿಹಾಸ ಪ್ರಸಿದ್ಧ ಕೆರಾಡಿ ಗ್ರಾಮದ ಮೂಡುಗಲ್ಲಿನ ಶ್ರೀಕೇಶವನಾಥೇಶ್ವರ ಗುಹಾಂತರ ದೇವಸ್ಥಾನವನ್ನು ಸಂಪರ್ಕಿಸುವ ಮಣ್ಣಿನ ರಸ್ತೆ ಆರಂಭದಲ್ಲಿ ಬಂದ ಮಳೆಗೆ ಸಂಪೂರ್ಣ ರಾಡಿಯಾಗಿದೆ. ಇದರಿಂದ ಇಲ್ಲಿಗೆ ಬರುವ ಭಕ್ತರು ಈ ಕೆಸರುಮಯ ರಸ್ತೆಯಲ್ಲಿ ಸಿಲುಕಿ ಪರದಾಟ ನಡೆಸುವಂತಾಗಿದೆ.

ಇತಿಹಾಸ ಪ್ರಸಿದ್ಧಿ ಹೊಂದಿರುವ ಮೂಡುಗಲ್ಲು ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಅದರಲ್ಲೂ 2 ವರ್ಷಗಳ ಹಿಂದೆ ತೆಲುಗು ಸೂಪರ್‌ಸ್ಟಾರ್ ನಟ ಜೂನಿಯರ್ ಎನ್ಟಿಆರ್, ನಿರ್ದೇಶಕ ಪ್ರಶಾಂತ್ ನೀಲ್ ಅವರು ನಟ, ನಿರ್ದೇಶಕ ರಿಷಬ್ ಶೆಟ್ಟಿ ಜತೆಗೂಡಿ ಇಲ್ಲಿಗೆ ಭೇಟಿ ನೀಡಿದ್ದರು.

ಅನಂತರ ಖ್ಯಾತ ನಟರಾದ ರಾಣಾ ದಗ್ಗುಬಾಟಿ, ನೇಹಾ ಶೆಟ್ಟಿ ಮತ್ತಿತರರು ಭೇಟಿ ನೀಡಿದ ಬಳಿಕ ಈ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ವಾದ ಹೆಚ್ಚಳ ಕಂಡುಬರುತ್ತಿದೆ. ಆದರೆ ದೇವಸ್ಥಾನದ ಸಂಪರ್ಕ ರಸ್ತೆಯ ಅವ್ಯವಸ್ಥೆಯಿಂದಾಗಿ ಭಕ್ತರಿಗೆ ತೊಂದರೆಯಾಗುತ್ತಿದೆ.

ರಜಾ ದಿನಗಳಲ್ಲಿ ವಾಹನ ದಟ್ಟಣೆ: ಈಗ ಮಳೆಗಾಲ ಶುರುವಾದ ಬಳಿಕ ಭಕ್ತಿಯ ಜೊತೆಗೆ ಇಲ್ಲಿನ ಸಹಜ ಸುಂದರ ಪ್ರಾಕೃತಿಕ ಸೌಂದರ್ಯವನ್ನು ಆಸ್ವಾದಿಸಲು, ವಾರಂತ್ಯ, ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಆದರೆ ಕೆಸರುಮಯ ರಸ್ತೆಯಿಂದಾಗಿ ವಾಹನಗಳು ಕೆಸರಲ್ಲಿ ಸಿಲುಕಿ, ಸಂಚರಿಸಲು ಸಾಧ್ಯವಾಗದೇ, ಪರದಾಟ ನಡೆಸುವಂತಹ ಪರಿಸ್ಥಿತಿಯೂ ಇದೆ.

ಅದ್ಭುತ ತಾಣ: ಸುಮಾರು 50 ಅಡಿ ದೂರದವರೆಗೆ ಹಬ್ಬಿರುವ ವಿಶಾಲ ಗುಹೆ. ಆ ಗುಹೆಯೊಳಗೆ ಉದ್ಭವವಾಗಿರುವ ಶ್ರೀಕೇಶವನಾಥೇಶ್ವರ ದೇವರ ಲಿಂಗ, ಅಲ್ಲಿ ಸದಾ ಹರಿಯುವ ನೀರು, ಕೈ ಮುಗಿದು ನಿಂತ ಭಕ್ತರ ಕಾಲಿಗೆ ಕಚಗುಳಿ ಇಡುವ ಹಲವು ಬಗೆಯ ಮೀನುಗಳು, ಗುಹೆಯೊಳಗೆ ತುಂಬಿರುವ ಕತ್ತಲು, ದೇವರ ದೀಪವೊಂದೇ ಬೆಳಕು. ನೀರಿನಲ್ಲಿ ನಿಂತುಕೊಂಡೇ ದೇವರ ದರ್ಶನ ಪಡೆಯುವ ವಿಶಿಷ್ಟ ಅನುಭವ. ಇದರೊಂದಿಗೆ ಸುತ್ತಲಿನ ಪ್ರಕೃತಿಯ ಸೊಬಗಿದೆ. ಇದು ಬರುವ ಭಕ್ತರಿಗೆ ಹಾಗೂ ಪ್ರಕೃತಿಪ್ರಿಯರಿಗೆ ಒಂದು ಅದ್ಭುತವಾದ, ಅಲೌಕಿಕ ಅನುಭವ ನೀಡುತ್ತದೆ.

ರಸ್ತೆ ದುರಸ್ತಿಗೆ ಆಗ್ರಹ

ಕೆರಾಡಿಯಿಂದ 4 ಕಿ.ಮೀ. ದೂರದಲ್ಲಿರುವ ಮೂಡುಗಲ್ಲು ಸಂಪರ್ಕಿಸುವ ಸುಮಾರು 3 ಕಿ.ಮೀ. ದೂರದವರೆಗೂ ಮಣ್ಣಿನ ರಸ್ತೆಯಾಗಿದೆ. ಅಲ್ಲಲ್ಲಿ ಕೆಸರುಮಯ ರಸ್ತೆಯಿಂದಾಗಿ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಭಕ್ತರ ಅನುಕೂಲಕ್ಕಾಗಿ ಈ ರಸ್ತೆಯನ್ನು ತುರ್ತಾಗಿ ದುರಸ್ತಿ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News