×
Ad

ಕುಂದಾಪುರ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

Update: 2026-06-25 22:33 IST

ಕುಂದಾಪುರ, ಜೂ.25: ವಿದ್ಯುತ್ ಕ್ಷೇತ್ರದ ಖಾಸಗೀಕರಣ ಪ್ರಕ್ರಿಯೆ ಯನ್ನು ವಿರೋಧಿಸಿ, ಇದನ್ನು ಕೂಡಲೇ ರದ್ದುಪಡಿಸಬೇಕೆಂದು ಸರಕಾವನ್ನು ಒತ್ತಾಯಿಸಿ ಸಿಪಿಐ(ಎಂ) ಕುಂದಾಪುರ ತಾಲೂಕು ಸಮಿತಿ ವತಿಯಿಂದ ಗುರುವಾರ ಇಲ್ಲಿನ ಎಲ್‌ಐಸಿ ರಸ್ತೆಯ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಟಾಟಾ ಪವರ್ ಕಂಪೆನಿಗೆ ವಿದ್ಯುತ್ ವಿತರಣೆ ಲೈಸೆನ್ಸ್ ನೀಡಬಾರದು ಎಂದು ಆಗ್ರಹಿಸಿ, ಮೆಸ್ಕಾಂ ಅಧಿಕಾರಿಗಳ ಮೂಲಕ ಕೆಇಆರ್‌ಸಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಟಾಟಾ ಪವರ್ ಕಂಪನಿಯು ವಿದ್ಯುತ್ ಕಾಯ್ದೆ 2003ರ ಕಲಂ 14ರ ಸೆಕ್ಷನ್ 6ರ ಅಡಿಯಲ್ಲಿ ಸಲ್ಲಿಸಿರುವ ಕರ್ನಾಟಕ ರಾಜ್ಯದ ಬೆಸ್ಕಾಂ ವ್ಯಾಪ್ತಿಯ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ರಾಮ ನಗರ, ಚೆಸ್ಕಾಂ ವ್ಯಾಪ್ತಿಯ ಮೈಸೂರು, ಹಾಸನ, ಚಾಮರಾಜನಗರ, ಮೆಸ್ಕಾಂ ವ್ಯಾಪ್ತಿಯ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಹೆಸ್ಕಾಂ ವ್ಯಾಪ್ತಿಯ ಬೆಳಗಾವಿ, ಉತ್ತರ ಕನ್ನಡ, ಧಾರವಾಡ ಹಾಗೂ ಜೆಸ್ಕಾಂ ವ್ಯಾಪ್ತಿಯ ಬಳ್ಳಾರಿ, ರಾಯಚೂರು, ಕಲ್ಬುರ್ಗಿ, ಯಾದಗಿರಿ ಒಟ್ಟು 19 ಕಂದಾಯ ಜಿಲ್ಲೆಗಳಲ್ಲಿ ಈಗ ಇರುವ ಸಾರ್ವಜನಿಕ ವಿದ್ಯುತ್ ವಿತರಣಾ ಕಂಪನಿಗಳಿಗೆ ಸಮಾನಾಂತರವಾಗಿ ವಿದ್ಯುತ್ ವಿತರಣಾ ಲೈಸನ್ಸ್ ಕೋರಿರುವ ಅರ್ಜಿಗಳನ್ನು ತಿರಸ್ಕರಿಸಬೇಕೆಂದು ಆಗ್ರಹಿಸಿದರು.

ಜಿಲ್ಲಾ ಮುಖಂಡ ಹೆಚ್. ನರಸಿಂಹ ಮಾತನಾಡಿ, ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ವಿದ್ಯುತ್ ತಿದ್ದುಪಡಿ ಮಸೂದೆ ಗಳನ್ನು ಮಂಡಿಸುತ್ತಲೇ ಇದೆ. ಎನ್‌ಐಟಿಐ ಆಯೋಗವು 2021ರ ತನ್ನ ಪಾಲಿಸಿ ಹೇಳಿಕೆಯಲ್ಲಿ, ರಾಜ್ಯ ವಿತರಣಾ ಕಂಪನಿಗಳನ್ನು ಅಡ್ಡ ಮತ್ತು ಉದ್ದ ಎರಡೂ ರೀತಿಯಲ್ಲಿ ಕಳಚಿ ಹಾಕಬೇಕೆಂದು ಮತ್ತು ಡಿ-ಲೈಸೆನ್ಸಿಂಗ್ ಮಾಡಬೇಕೆಂದು ಮತ್ತು ಭಿಕ್ರಾಸ್-ಸಬ್ಸಿಡಿಗಳು ಮತ್ತು ಸರ್‌ಚಾರ್ಜ್‌ಗಳನ್ನು ನಿರಂತರವಾಗಿ ಕಡಿತಗೊಳಿಸಬೇಕು ಮತ್ತು ರದ್ದುಪಡಿಸಬೇಕು ಎಂದು ಹೇಳಿದೆ ಎಂದರು.

2022ರ ಆಗಸ್ಟ್ 8 ರಂದು ಬಿಜೆಪಿ ಮೋದಿ ಸರ್ಕಾರ ವಿದ್ಯುತ್ ತಿದ್ದುಪಡಿ ಮಸೂದೆ 2022ನ್ನು ಲೋಕಸಭೆಯನ್ನು ಮಂಡಿಸುವ ಮೂಲಕ ಈ ಸಂಘರ್ಷದ ಶವ ಪೆಟ್ಟಿಗೆಗೆ ಅಂತಿಮ ಮೊಳೆಯನ್ನು ಹೊಡೆದಿದೆ ಎಂದರು.

ಕುಂದಾಪುರ ತಾಲೂಕು ಸಮಿತಿ ಕಾರ್ಯದರ್ಶಿ ಚಂದ್ರಶೇಖರ ವಿ. ಮಾತನಾಡಿ, ಮಸೂದೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದನ್ನು ಪರಿಶೀಲಿಸಲು ಸಂಸದೀಯ ಸ್ಥಾಯಿ ಸಮಿತಿಗೆ ಒಪ್ಪಿಸಿದೆ. ಜೊತೆಗೆ ಪ್ರಿ-ಪೇಡ್ ಸ್ಮಾರ್ಟ್ ಮೀಟರುಗಳ ಬಳಕೆಗೆ ಸಂಬಂಧಿಸಿ ಒಕ್ಕೂಟ ಸರ್ಕಾರವು, ಗ್ರಾಹಕರ ಹಕ್ಕುಗಳ ಕರಡು ವಿದ್ಯುತ್ ತಿದ್ದುಪಡಿ ನಿಯಮಗಳನ್ನು 2023 ಮಾರ್ಚ್ ತಿಂಗಳಲ್ಲಿ ಪ್ರಕಟಿಸಿದೆ. ಸ್ಥಾಯಿ ಸಮಿತಿಯು ವರದಿಯನ್ನು ಪಡೆದು ಅಂಗೀಕರಿಸುವ ಬದಲಿಗೆ ಕೇಂದ್ರ ಇಂಧನ ಇಲಾಖೆಯು, ಕರಡು ವಿದ್ಯುತ್ (ತಿದ್ದುಪಡಿ) ಮಸೂದೆ 2025 ಎಂದು ಪರಿಷ್ಕರಿಸಲಾದ ಚೌಕಟ್ಟನ್ನು ಮಂಡಿಸಿದ್ದು ಇದರಿಂದ ವಿದ್ಯುತ್ ಕ್ಷೇತ್ರವನ್ನು ಪೂರ್ಣವಾಗಿ ಖಾಸಗಿ ಕಂಪನಿಗಳಿಗೆ ಒಪ್ಪಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

ತಾಲೂಕು ಸಮಿತಿಯ ಚಿಕ್ಕ ಮೊಗವೀರ, ಜಿಲ್ಲಾ ಸಮಿತಿ ಸದಸ್ಯರಾದ ಬಲ್ಕಿಸ್, ಸುರೇಂದ್ರ, ಶೀಲಾವತಿ, ಜಿ.ಡಿ. ಪಂಜು, ಪದಾಧಿಕಾರಿಗಳು, ಕಾರ್ಮಿಕರ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News