ಕಾರ್ಕಳ ಪುರಸಭೆಯಲ್ಲಿ ಕಚೇರಿ ಅವಧಿ ಮೀರಿ ಸಭೆ; ಮಹಿಳಾ ಸಿಬ್ಬಂದಿಗೆ ಅವಮಾನ, ಬೆದರಿಕೆ ಆರೋಪ
ಕಾರ್ಕಳ: ಕಾರ್ಕಳ ಪುರಸಭೆ ಸಿಬ್ಬಂದಿಗಳಿಗೆ ಕಚೇರಿ ಅವಧಿ ಮೀರಿ ಸಭೆ ನಡೆಸಿದ ಉಡುಪಿ ಜಿಲ್ಲಾ ಯೋಜನಾ ನಿರ್ದೇಶಕರು ಮಹಿಳಾ ಸಿಬ್ಬಂದಿಗಳನ್ನು ಗದರಿಸಿ, ಬೆದರಿಸಿ, ಏಕವಚನದಲ್ಲಿ ನಿಂದಿಸಿ ಅವಮಾನ ಮಾಡಿದ್ದಾರೆ ಹಾಗೂ ಕೆಲಸದಿಂದಲೇ ಕಿತ್ತು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬುಧವಾರ ಸಂಜೆ 5.15ಕ್ಕೆ ಕಾರ್ಕಳ ಪುರಸಭೆ ಕಚೇರಿಗೆ ಬಂದ ಯೋಜನಾ ನಿರ್ದೇಶಕ ಸುಬ್ರಮಣ್ಯ ಶೆಟ್ಟಿ ನೇತೃತ್ವದ ತಂಡ, ಕಚೇರಿ ಸಮಯ ಮುಗಿದ ಬಳಿಕವೂ ಸಿಬ್ಬಂದಿಗಳು ತೆರಳದಂತೆ ಸೂಚಿಸಿ ಪುರಸಭಾ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದೆ ಎನ್ನಲಾಗಿದೆ.
ಸಭೆಯಲ್ಲಿ ಪೌರ ಕಾರ್ಮಿಕರ ಕೊರತೆ ಇದ್ದರೂ, ಲಭ್ಯವಿರುವ ಸಿಬ್ಬಂದಿಯನ್ನು ಬಳಸಿಕೊಂಡು ಸ್ವಚ್ಛತೆ, ಮನೆ-ಮನೆ ಕಸ ಸಂಗ್ರಹಣೆ, ನಗರ ಸುಂದರೀಕರಣ ಹಾಗೂ ಚರಂಡಿ ಸ್ವಚ್ಛತೆ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ಸಿಬ್ಬಂದಿ ವಿವರಣೆ ನೀಡುತ್ತಿದ್ದ ವೇಳೆ, ಮಹಿಳಾ ಸಿಬ್ಬಂದಿಯೊಬ್ಬರನ್ನು ಏಕವಚನದಲ್ಲಿ ನಿಂದಿಸಿ, ಅವಮಾನಿಸಿ, ಇಲ್ಲಿಂದ ಓಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ, ತಮ್ಮ ಕಂಪ್ಯೂಟರ್ನಲ್ಲಿದ್ದ ಇಂಜಿನಿಯರಿಂಗ್ ವಿಭಾಗದ ಕಡತಗಳನ್ನು ಉದ್ದೇಶಪೂರ್ವಕವಾಗಿ ಅಳಿಸಲಾಗಿದೆ ಎಂದು ಕಿರಿಯ ಅಭಿಯಂತರರು (ಮಹಿಳಾ ಸಿಬ್ಬಂದಿ) ಮುಖ್ಯಾಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಲಾಗಿದೆ. ಸಭೆಯ ಸಂದರ್ಭ ದೂರು ನೀಡಿದ್ದ ಮಹಿಳಾ ಕಿರಿಯ ಅಭಿಯಂತರರನ್ನೇ ತರಾಟೆಗೆ ತೆಗೆದುಕೊಂಡ ಯೋಜನಾ ನಿರ್ದೇಶಕರು ಏಕವಚನದಲ್ಲಿ ನಿಂದಿಸಿ ಅವಮಾನಿಸಿದ್ದಾರೆ ಎನ್ನಲಾಗಿದೆ.
ರಾತ್ರಿ 8.30 ಆದರೂ ಮಹಿಳಾ ಸಿಬ್ಬಂದಿ ಮನೆಗೆ ತಲುಪದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಪುರಸಭೆ ಕಚೇರಿಗೆ ಬಂದಾಗ ಸಭೆ ನಡೆಯುತ್ತಿರುವುದು ಕಂಡುಬಂದಿದೆ. ರಾತ್ರಿ ವೇಳೆಯಲ್ಲಿಯೂ ಕಚೇರಿ ತೆರೆದಿರುವುದು ಹಾಗೂ ವಿದ್ಯುತ್ ದೀಪಗಳು ಉರಿಯುತ್ತಿರುವುದನ್ನು ಕಂಡ ಸಾರ್ವಜನಿಕರು ಮತ್ತು ಪತ್ರಕರ್ತರೊಬ್ಬರು ಕಚೇರಿಗೆ ತೆರಳಿದ ವೇಳೆ ಸಭೆ ಕೂಡಲೇ ಸಭೆ ಮುಗಿಸಿ ಅಧಿಕಾರಿಗಳು ತಮ್ಮ ಸರಕಾರಿ ವಾಹನಗಳಲ್ಲಿ ತೆರಳಿದ್ದಾರೆ ಎಂದು ಹೇಳಲಾಗಿದೆ.
ದೂರದ ಊರು ಹಾಗೂ ಹಳ್ಳಿಗಳಿಗೆ ತೆರಳಬೇಕಿದ್ದ ಸಿಬ್ಬಂದಿ, ವಿಶೇಷವಾಗಿ ಮಹಿಳಾ ಸಿಬ್ಬಂದಿ, ಬಸ್ ಸೌಲಭ್ಯ ಇಲ್ಲದೆ ಪರದಾಡಿದ್ದು, ಸಾರ್ವಜನಿಕರ ನೆರವಿನಿಂದ ಮನೆ ತಲುಪುವಂತಾಯಿತು ಎಂದು ತಿಳಿದುಬಂದಿದೆ.
ಈ ಹಿಂದೆಯೂ ಪುರಸಭೆಯ ಕೆಲ ಅಧಿಕಾರಿಗಳು ಮಹಿಳಾ ಸಿಬ್ಬಂದಿಯನ್ನು ಕಚೇರಿಗೆ ಕರೆಸಿ ನಿಂದಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ಆಗ್ರಹಿಸಿದ್ದಾರೆ.