ಮಳೆ ಕೊರತೆ; ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮುನ್ನೆಚ್ಚರಿಕೆ ಇರಲಿ: ಅಧಿಕಾರಿಗಳಿಗೆ ಶಾಸಕ ಕೊಡ್ಗಿ ಸೂಚನೆ
ಕುಂದಾಪುರ, ಜು.24: ವಾಡಿಕೆಯಂತೆ ಮಳೆಯಾಗದೇ ಇರುವ ಕಾರಣ ಮಳೆಗಾಲದಲ್ಲೇ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇದ್ದು, ಸಂಬಂಧಪಟ್ಟ ಎಲ್ಲಾ ಗ್ರಾಪಂಗಳು, ಪುರಸಭೆ, ಪಟ್ಟಣ ಪಂಚಾಯತ್ ನವರು ಈಗಿನಿಂದಲೇ ಅದಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕುಂದಾಪುರ ಶಾಸಕ ಎ.ಕಿರಣ್ಕುಮಾರ್ ಕೊಡ್ಗಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಶುಕ್ರವಾರ ಇಲ್ಲಿನ ತಾಪಂ ಸಭಾಂಗಣದಲ್ಲಿ ನಡೆದ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಟಾಸ್ಕ್ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಸದ್ಯ ಜನರಿಗೆ ನೀರಿನ ಸಮಸ್ಯೆಯಿಲ್ಲ ಆದರೆ ಸಂಭಾವ್ಯ ಸಮಸ್ಯೆಗಳ ಬಗ್ಗೆ ಜಾಗೃತರಾಗಿರಿ ಎಂದವರು ಹೇಳಿದರು.
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯೂ ನೀರಿನ ಸಮಸ್ಯೆ ಹೆಚ್ಚು ಇರಲಿಲ್ಲ. ಬಹುತೇಕ ಎಲ್ಲ ಗ್ರಾಪಂಗಳು ವಾರಾಹಿ ನೀರನ್ನೇ ಆಶ್ರಯಿಸಿ ದ್ದಾರೆ. ಆದಷ್ಟು ಬೇಗ ಬಾಕಿಯಿರುವ ಜೆಜೆಎಂ, ಅಮೃತ್ ಯೋಜನೆ ಕಾಮಗಾರಿ ಮುಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಕಾರ್ಯನಿರ್ವಹಿಸಬೇಕು. ನೀರಿನ ಕುರಿತಾದ ಬೇಡಿಕೆಗಳನ್ನು ಆದ್ಯತೆ ನೆಲೆಯಲ್ಲಿ ಬಗೆಹರಿಸಿ. ನಿರ್ಲಕ್ಷ್ಯ ವಹಿಸಿದರೆ ಆ ಬಗ್ಗೆ ಜಿಲ್ಲಾಧಿಕಾರಿಗಳು, ಸರಕಾರಕ್ಕೆ ವರದಿ ಕೊಡಿ ಎಂದು ತಹಶೀಲ್ದಾರ್ಗೆ ಶಾಸಕರು ತಿಳಿಸಿದರು.
ಆವರ್ಸೆಯಲ್ಲಿ 2 ಕಡೆ ಬೋರ್ವೆಲ್ಗೆ ಬೇಡಿಕೆ, ಬೀಜಾಡಿ, ಗೋಪಾಡಿ, ತೆಕ್ಕಟ್ಟೆ, ಕುಂಭಾಶಿಯಲ್ಲಿ ಹೆದ್ದಾರಿ ಕಾಮಗಾರಿ ಯಿಂದ ಪೈಪ್ಲೈನ್ಗೆ ಹಾನಿ, ಬೇಳೂರಲ್ಲಿ ಓವರ್ ಹೆಡ್ಟ್ಯಾಂಕ್, ಮೊಳಹಳ್ಳಿಯ ಕೋಣೆಹರ, ಹೆಬ್ಗೋಳಿ ಯಲ್ಲಿ ಟ್ಯಾಂಕ್ ಇದೆ- ನೀರಿನ ಸಂಪರ್ಕ ಆಗಿಲ್ಲ. ಕೆದೂರು ಹೊಸ ಟ್ಯಾಂಕ್, ಮಡಾಮಕ್ಕಿಯ ಶೇಡಿಮನೆಯಲ್ಲಿ ಬೋರ್ವೆಲ್ ಬೇಕಿದೆ ಎಂದು ಆಯಾ ಗ್ರಾಪಂನ ಪಿಡಿಒಗಳು ಬೇಡಿಕೆ ಪಟ್ಟಿ ಮುಂದಿಟ್ಟರು.
ಮಳೆಮಾಪನ ಕೇಂದ್ರ ಸರಿಯಾಗಲಿ: ಗ್ರಾಪಂಗಳ ವ್ಯಾಪ್ತಿಯಲ್ಲಿ ಇರುವಂತಹ ಮಳೆಮಾಪನ ಕೇಂದ್ರಗಳು ಇನ್ನೂ ಕೂಡ ಪೂರ್ಣ ಪ್ರಮಾಣ ದಲ್ಲಿ ಸರಿಯಾದಂತಿಲ್ಲ. ಇದರಿಂದಲೇ ಬೆಳೆ ವಿಮೆಯಡಿ ಪರಿಹಾರ ಪಡೆಯುವ ರೈತರಿಗೆ ನಷ್ಟ ಆಗುತ್ತಿದೆ. ಈ ಬಗ್ಗೆ ವಿಎಗಳು, ತಾಲೂಕು ಮಟ್ಟದ ಅಧಿಕಾರಿಗಳು ಗಮನಹರಿಸಿ, ಸರಿಪಡಿಸಿ ಎಂದು ಶಾಸಕರು ಸೂಚಿಸಿದರು.
ರೈತರಿಂದ ಈವರೆಗೆ ಬೆಳೆಹಾನಿ, ನಷ್ಟದ ಬಗ್ಗೆ ಯಾವುದೇ ಅರ್ಜಿ ಬಂದಿಲ್ಲ. ಎಂಒ 4 ಸಹಿತ ಅಲ್ಪಾವಧಿಯ ಬಿತ್ತನೆ ಬೀಜವನ್ನು ಸಹ ದಾಸ್ತಾನು ಇರಿಸಲಾಗಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ಕಾರ್ಯ ನಿರ್ವಹಣಾಧಿಕಾರಿ ರಾಮದಾಸ್, ಹೆಬ್ರಿ ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್, ತಾಪಂನ ಸಹಾಯಕ ನಿರ್ದೇಶಕ ದಿನೇಶ್, ವಿವಿಧ ಇಲಾಖಾಧಿಕಾರಿಗಳು, ಗ್ರಾಪಂ ಆಡಳಿತಾಧಿಕಾರಿಗಳು, ಪಿಡಿಒ, ವಿಎಗಳು ಉಪಸ್ಥಿತರಿದ್ದರು.
ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿ, ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಕೆ.ಜಿ. ವಂದಿಸಿದರು.
ಕಾಟಾಚಾರದ ಸಭೆಯಲ್ಲ: ಶಾಸಕರು ಗರಂ!
ಜೆಜೆಎಂನವರಿಗೆ ಜನಸಂಪರ್ಕ ಸಭೆ, ಗ್ರಾಪಂಗಳಿಂದ ಪತ್ರ ಬರೆದರೂ ಕೂಡ ಕಾಮಗಾರಿ ಮಾಡುತ್ತೇವೆ ಎಂಬ ಸಬೂಬು ಮಾತ್ರ ಬರುತ್ತಿದೆ. ಪ್ರತೀ ಸಲ ಇದೇ ಉತ್ತರ ಕೇಳಿ ಸಾಕಾಗಿದೆ. ಗೊತ್ತಿರುವವರನ್ನು ಸಭೆಗೆ ಕಳುಹಿಸಿ. 3 ವರ್ಷದಿಂದ ಇದೇ ಆಯಿತು. ನೀವು ಜವಾಬ್ದಾರಿ ತಗೊಳ್ಳದಿದ್ದರೆ, ನಾವು ಸಭೆ ನಡೆಸಿ ಏನು ಪ್ರಯೋಜನ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ನೀರಿನ ಸಮಸ್ಯೆ ಕುರಿತಂತೆ ಗಂಭೀರವಾಗಿ ಪರಿಗಣಿಸಿ, ಕೆಲಸ ಮಾಡಿ. ಕುಡಿಯುವ ನೀರಿಗೆ ತೊಂದರೆಯಾಗಬಾರದು ಅಂತ ಚರ್ಚೆ ಶುರು ಮಾಡಿ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಬಾರದಿದ್ದರೆ ಸಭೆ ಯಾರಿಗೆ ಮಾಡುವುದು. ಎಲ್ಲೆಲ್ಲ ಸಮಸ್ಯೆ ಇವೆ? ಏನೆಲ್ಲ ಕಾಮಗಾರಿ ಆಗಿದೆ ? ಅಂತ ನಿಮಗೆ ಗೊತ್ತಿದೆಯಾ? ನನಗೂ ಗೊತ್ತಿಲ್ಲ. ಅದನ್ನು ಸಭೆಗೆ ತಿಳಿಸುವವರೇ ಬಂದಿಲ್ಲವಾದರೆ ಸಭೆಯ ಉದ್ದೇಶ ಹಳ್ಳಹಿಡಿಯುತ್ತದೆ ಎಂದು ಸಭೆಯಲ್ಲಿ ಶಾಸಕ ಕಿರಣ್ಕುಮಾರ್ ಕೊಡ್ಗಿ ಅಧಿಕಾರಿಗಳ ಮೇಲೆ ಗರಂ ಆಗಿ ನುಡಿದರು.