ಕಾರಂತರಿಗೆ ಇಡೀ ಲೋಕದ ಬಗ್ಗೆ ಅಪಾರ ಕಾಳಜಿ: ರಘುನಂದನ
ಉಡುಪಿ, ಜು.31: ಶಿವರಾಮ ಕಾರಂಂತರು ನಮ್ಮ ನಾಡು, ಕಾಡು, ಮತ್ತು ಇಡೀ ಲೋಕದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಹಾಗಾಗಿ ವಿಶ್ವ ಪರಿಸರ ಸಂಘಟನೆಯ ಎರಡು ವರದಿಗಳನ್ನು ಕನ್ನಡಕ್ಕೆ ಅನುವಾದಿಸಿ ದ್ದಾರೆ. ವಿಜ್ಞಾನದ ಕುರಿತಾದ ಬರಹಗಳು ಹೇಗೆ ಇರಬೇಕು ಎಂದು ಕಾರಂತರು ಬರೆದು ತೋರಿಸಿದ್ದಾರೆ ಎಂದು ಕವಿ, ನಾಟಕಕಾರ, ನಿರ್ದೇಶಕ ರಘುನಂದನ ಅಭಿಪ್ರಾಯ ಪಟ್ಟಿದ್ದಾರೆ.
ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ಮತ್ತು ರಥಬೀದಿ ಗೆಳೆಯರು ಉಡುಪಿ ವತಿಯಿಂದ ಉಡುಪಿ ರೆಡ್ಕ್ರಾಸ್ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ತಮ್ಮ ಹೊಸ ಕೃತಿಯ ಓದು ‘ಎಮ್ಮವರು ಬೆಸಗೊಂಡರೆ ಮದುವೆಯಾಗಲಿ ಹೀಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಎಮ್ಮವರು ಬೆಸಗೊಂಡರೆ ಮದುವೆಯಾಗಲಿ ಹೀಗೆ ಹೊತ್ತಿಗೆಯ ಆಕೃತಿ ಮತ್ತು ವಸ್ತು ಬೇರೆಯಾಗಿಲ್ಲ. ಪಂಚ ಭೂತಗಳಾದ ಮಣ್ಣು, ನೀರು, ಬೆಂಕಿ, ಗಾಳಿ ಮತ್ತು ಆಕಾಶಗಳ ಪ್ರಾಕೃತಿಕ ವಾದ ಕಾಳಜಿಯನ್ನಿಟ್ಟುಕೊಂದು ಹೊಸ ತಲೆಮಾರಿನ ಗಂಡು ಹೆಣ್ಣು ಮದುವೆಯಾಗಲು ಹೊಸ ರಹದಾರಿ ಇದು ಎಂದು ಅವರು ಹೇಳಿದರು.
ಡಾ.ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಆಶಯ ಭಾಷಣ ಮಾಡಿದರು. ಸದಸ್ಯ ಕಾರ್ಯ ದರ್ಶಿ ಪೂರ್ಣಿಮಾ ಸ್ವಾಗತಿಸಿದರು. ರಥಬೀದಿ ಗೆಳೆಯರು ಉಡುಪಿ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಷಿ ಉಪಸ್ಥಿತರಿದ್ದರು. ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಘುನಂದನ ಅವರಿಂದ ಎಮ್ಮವರು ಬೆಸಗೊಂಡರೆ ಮದುವೆ ಆಗಲಿ ಹೀಗೆ ಪುಸ್ತಕದ ಓದು ನಡೆಯಿತು.