ಭೋವಿ ಸಮುದಾಯದ ಸಮಸ್ಯೆ ಪರಿಹಾರಕ್ಕೆ ಸಚಿವರಿಗೆ ಮನವಿ
ಉಡುಪಿ, ಸೆ.6: ಉಡುಪಿ ಜಿಲ್ಲೆಯಲ್ಲಿ ಕಲ್ಲುವಡ್ಡರು, ಒಡ್ಡ ಭೋವಿ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರ ನಿರಾಕರಣೆ ಸಹಿತ ವಿವಿಧ ಸಮಸ್ಯೆಗಳ ಕುರಿತು ಸಮುದಾಯದ ಮುಖಂಡರ ನಿಯೋಗ ಇತ್ತೀಚೆಗೆ ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನೂತನ ಸಚಿವ ಶಿವರಾಜ್ ತಂಗಡಗಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಉಡುಪಿ ಜಿಲ್ಲೆಯಲ್ಲಿ ಸುಮಾರು 3000ಕ್ಕೂ ಹೆಚ್ಚು ಕುಟುಂಬಗಳು ಸುಮಾರು 3-4 ತಲೆಮಾರುಗಳಿಂದ ಸ್ಥಳೀಯ ವಾಗಿ ವಾಸ್ತವ್ಯವಿದ್ದು ಕಲ್ಲು ವಡ್ಡರು, ಮಣ್ಣು ವಡ್ಡರಾಗಿ ಕಲ್ಲು ಕೋರೆಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿದು ನಿತ್ಯ ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ಅಲ್ಲದೇ ಜನಾಂಗದಲ್ಲಿ ಶಿಕ್ಷಿತರ ಸಂಖ್ಯೆ ಕೆಲವೇ ಶೇಕಡದಷ್ಟು. ಯುವಕರು ಪರ್ಯಾಯ ಕೆಲಸಗಳನ್ನು ಮಾಡಿಕೊಂಡಿದ್ದಾರೆ ಹೊರತು ಯಾರೂ ಉನ್ನತವಾದ ಶಿಕ್ಷಣವಾಗಲಿ, ಹುದ್ದೇಯಾಗಲಿ ಪಡೆದುಕೊಂಡಿಲ್ಲ. ಕಾರಣ ಈ ಸಮುದಾಯಕ್ಕೆ ಸರಿಯಾದ ಜಾತಿ ಪ್ರಮಾಣ ಪತ್ರ ಸಿಗದೇ ಇರುವುದು ಎಂದು ಮನವಿಯಲ್ಲಿ ದೂರಲಾಗಿದೆ.
ಜಿಲ್ಲಾಡಳಿತವು ಜನಾಂಗಕ್ಕೆ ಸರಿಯಾದ ಜಾತಿ ಪ್ರಮಾಣ ನೀಡುವುದರಲ್ಲಿ ವಿಫಲವಾಗಿದೆ. ಈ ಬಗ್ಗೆ ಸರಕಾರ ಆಯೋಗದ ಮೂಲಕ ಉಡುಪಿ ಜಿಲ್ಲಾಧಿಕಾರಿಗಳು ಮತ್ತು ಎಲ್ಲಾ ತಾಲೂಕು ತಹಶೀಲ್ದಾರರಿಗೆ ಪತ್ರ ಬರೆದು ಸೂಕ್ತ ನಿರ್ದೇಶನ ನೀಡಿದ್ದೂ ಸಹ ಇದನ್ನು ಪರಿಗಣಿಸದೇ ಅಧಿಕಾರಿಗಳು ತಮ್ಮ ಇಚ್ಚಾನುಸಾರ ಪ್ರಮಾಣ ಪತ್ರಗಳನ್ನು ನೀಡುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಈ ಹಿಂದೆ ಅಧಿಕಾರಿಗಳು ಎಲ್ಲಾ ಗ್ರಾಮ ಪಂಚಾಯತಿನ ವ್ಯಾಪ್ತಿಯಲ್ಲಿ ವಾಸವಿರುವ ನಮ್ಮ ಜನರನ್ನು ಗುರುತಿಸಿ ಸ್ಥಳದಲ್ಲಿಯೇ ಪರಿಶಿಷ್ಟ ಜಾತಿಯಲ್ಲಿನ ಭೋವಿ ಪ್ರಮಾಣ ಪತ್ರವನ್ನು ನೀಡಿದ್ದರು. ಆದರೆ ಇದೇ ಜಾತಿ ಪ್ರಮಾಣ ಪತ್ರವನ್ನು ಹೊಸ ಕಂಪ್ಯೂಟರೀಕೃತ ಪ್ರಮಾಣ ಪತ್ರ ನೀಡುವಾಗ ಅಧಿಕಾರಿಗಳು ನಮ್ಮನ್ನು ಬೇರೆ ಬೇರೆ ಜಾತಿ ಗಳಲ್ಲಿ ನೀಡುತ್ತಿದ್ದು ನಮ್ಮ ಜನಾಂಗವನ್ನು ಪರಿಶಿಷ್ಟ ಜಾತಿಯಿಂದ ದೂರವಿಡಲಾಗುತ್ತಿದೆ. ಇದರಿಂದ ಸಮುದಾಯ ಸರಕಾರದ ಸೌಲಭ್ಯ, ಶಿಕ್ಷಣ, ಸರಕಾರಿ ಕೆಲಸ ಮುಂತಾದ ಜನಾಂಗದ ಅಭಿವೃದ್ಧಿ ಕಾರ್ಯಕ್ರಮಗಳಿಂದ ವಂಚಿತವಾಗುತ್ತಿದೆ ಎಂದು ಮನವಿ ತಿಳಿಸಲಾಗಿದೆ.
ಮನವಿಗೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೆ. ಮುನಿಯಪ್ಪ ಅವರೊಂದಿಗೆ ಇಲಾಖಾ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರವಿಕುರ್ಮಾ , ಉಡುಪಿ ಜಿಲ್ಲಾ ಭೋವಿ - ವರ್ಡ್ಡ ಮುಖಂಡರುಗಳಾದ ನಾರಾಯಣ ಪರ್ಕಳ, ಶಿವಕುರ್ಮಾ ಪರ್ಕಳ, ಮುರಳಿ ಕೊಡಂಕೂರು ಉಪಸ್ಥಿತರಿದ್ದರು.