ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಶೇ.76.06 ಮಂದಿಯಿಂದ ಮತ ಚಲಾವಣೆ

Update: 2024-04-26 16:34 GMT

ಉಡುಪಿ, ಎ.26: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಇಂದು ಶಾಂತಿಯುತವಾಗಿ ನಡೆದಿದ್ದು, ಎರಡು ಜಿಲ್ಲೆಗಳ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹರಡಿರುವ ಈ ಕ್ಷೇತ್ರದಲ್ಲಿ ಶೇ. 76.06 ರಷ್ಟು ಮಂದಿ ತಮ್ಮ ಮತಗಳನ್ನು ಚಲಾಯಿಸಿದ್ದಾರೆ ಎಂದು ಚುನಾವಣಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಬೈಂದೂರನ್ನು ಹೊರತು ಪಡಿಸಿ ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ ಶೇ.78.1075 ಮತದಾನವಾಗಿದ್ದರೆ, ಕಡೂರು ಹೊರತು ಪಡಿಸಿ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಾಸರಿ ಶೇ.74.38ರಷ್ಟು ಮತದಾನವಾಗಿದೆ ಎಂದು ವರದಿ ತಿಳಿಸಿದೆ.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.75.80, ಕುಂದಾಪುರದಲ್ಲಿ 79.10, ಕಾಪು 79.03, ಕಾರ್ಕಳ 78.50, ಚಿಕ್ಕಮಗಳೂರು ಶೇ.69, ಶೃಂಗೇರಿ 80.20, ಮೂಡಿಗೆರೆ 75.12 ಹಾಗೂ ತರೀಕೆರೆಯಲ್ಲಿ ಶೇ.73.20ರಷ್ಟು ಮತದಾನವಾಗಿದೆ. 2019ರಲ್ಲಿ ನಡೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ.76.07ರಷ್ಟು ಮತದಾನವಾಗಿತ್ತು. ಹೀಗಾಗಿ ಈ ಸಲವೂ ಕಳೆದ ಬಾರಿಯಷ್ಟೇ ಮತದಾನವಾದಂತಾಗಿದೆ.

ಈ ಬಾರಿ ಅತ್ಯಧಿಕ ಮತದಾನವಾಗಿರುವುದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ. ಅಲ್ಲಿ ಶೇ.80.20ರಷ್ಟು ಮತದಾನವಾಗಿದೆ. ನಂತರದ ಸ್ಥಾನ ಕುಂದಾಪುರ ವಿಧಾನಸಭಾ ಕ್ಷೇತ್ರದ್ದು. ಅಲ್ಲಿ 79.10ರಷ್ಟು ಮತದಾನವಾಗಿದೆ. ಅತಿ ಕಡಿಮೆ ಮತ ಬಿದ್ದಿರುವುದು ಚಿಕ್ಕಮಗಳೂರು ಕ್ಷೇತ್ರದಲ್ಲಿ. ಇಲ್ಲಿ ಶೇ.69ರಷ್ಟು ಮತ ಚಲಾವಣೆಯಾಗಿದೆ

ಜಿಲ್ಲೆಯಲ್ಲಿ ಈಗ ಕಾಣಿಸಿಕೊಂಡಿರುವ ಬಿರುಬಿಸಿಲು ಹಾಗೂ ಸಹಿಸಲಸಾಧ್ಯ ಸೆಖೆಯೊಂದಿಗೆ ಬೀಸುತಿರುವ ಬಿಸಿಗಾಳಿಯ ಕಾರಣಕ್ಕೆ ಜನತೆ ಇಂದು ಬೆಳಗ್ಗೆ ಮತದಾನ ಪ್ರಾರಂಭಗೊಂಡ ಕ್ಷಣದಿಂದಲೇ ಗುಂಪು ಗುಂಪಾಗಿ ಬಂದು ಮತ ಚಲಾಯಿಸಿದರು. ಇದರಿಂದ 7 ಗಂಟೆಗೆ ಪ್ರಾರಂಭಗೊಂಡ ಮತದಾನ ಒಂದು ಗಂಟೆ ಮುಗಿಯುವ ವೇಳೆಗೆ ಕೆಲವು ಕಡೆಗಳಲ್ಲಿ ಶೇ.12ಕ್ಕೂ ಅಧಿಕ ಮತದಾನವಾಗಿತ್ತು. ಹೆಚ್ಚಿನ ಮತಗಟ್ಟೆಯ ಎದುರು ಫರ್ಲಾಂಗ್ ಉದ್ದದ ಕ್ಯೂಗಳು ಕಂಡುಬಂದವು. ಹೀಗಾಗಿ ಜನರು 11-12ಗಂಟೆಯೊಳಗೆ ಬಂದು ಮತ ಚಲಾಯಿಸಿ ತೆರಳಿದರೆ, ಇನ್ನುಳಿದ ಮಂದಿ ಮಧ್ಯಾಹ್ನ ಮೂರು ಗಂಟೆಯ ಬಳಿಕ ತಾಪಮಾನ ಸ್ವಲ್ಪ ತಗ್ಗಿದ ಮೇಲೆ ಮನೆಯಿಂದ ಹೊರಬಂದು ಮತ ಹಾಕಿದರು. ಹೀಗಾಗಿ 11 ಗಂಟೆಯಿಂದ ಮೂರು ಗಂಟೆಯವರೆಗೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮತದಾನ ಭಾಗಶ: ಸ್ಥಗಿತಗೊಂಡ ರೀತಿಯಲ್ಲಿತ್ತು.

ಈ ಸನ್ನಿವೇಶ ಉಡುಪಿ ಜಿಲ್ಲೆಯ ಉದ್ದಗಲಕ್ಕೂ ಕಂಡುಬಂತು. ಹೆಚ್ಚಿನ ಕಡೆಗಳಲ್ಲಿ 11 ಗಂಟೆಯವರೆಗೆ ಬಿರುಸಿನ ಮತದಾನ ನಡೆದರೆ, ಕಾರ್ಕಳ ಮತ್ತು ಕುಂದಾಪುರ ತಾಲೂಕುಗಳ ನಕ್ಸಲ್ ಬಾಧಿತ ಪ್ರದೇಶಗಳ ಮತಗಟ್ಟೆಗಳಲ್ಲಿ ಈ ಅವಧಿಯಲ್ಲಿ ಶೇ.40ರಿಂದ 50ರಷ್ಟು ಮತದಾನವಾಗಿರುವುದು ಕಂಡುಬಂತು. ಹೆಬ್ರಿ ಸಮೀಪದ ಸೋಮೇಶ್ವರ ಪೇಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ 671 ಮಂದಿ ಮತದಾರರಲ್ಲಿ ಆಗಲೇ 372 (ಶೇ.55.43) ಮಂದಿ ಮತ ಚಲಾಯಿಸಿದ್ದರು.

ಇದೇ ಮೊದಲ ಬಾರಿ ಮತ ಹಾಕುವ ತರುಣ-ತರುಣಿಯರಲ್ಲಿ ವಿಶೇಷ ಉತ್ಸಾಹ ಕಂಡುಬಂತು. ದೇಶಕ್ಕೆ ಸಮರ್ಥ ರಾಜಕಾರಣಿಗಳನ್ನು ನೀಡುವಲ್ಲಿ ತಮ್ಮ ಪಾತ್ರವೂ ಇರುವ ಬಗ್ಗೆ ನಮಗೆ ಅತೀವ ಹೆಮ್ಮೆ ಇದೆ. ದೇಶ ಕಟ್ಟುವ, ದೇಶದ ಅಭಿವೃದ್ಧಿಗೆ ಇದು ತಮ್ಮ ಕಾಣಿಕೆ ಎಂಬುದು ಹೆಚ್ಚಿನ ಯುವ ಮತದಾರರ ಅಭಿಪ್ರಾಯವಾಗಿತ್ತು.

ಜಿಲ್ಲಾಧಿಕಾರಿ ಕೃತಜ್ಞತೆ

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯು ಯಾವುದೇ ಗೊಂದಲಗಳಿಲ್ಲದೇ, ಶಾಂತಿಯುತವಾಗಿ ನಡೆಯಲು ಸಹಕರಿಸಿದ ಎಲ್ಲಾ ಅಭ್ಯರ್ಥಿಗಳಿಗೆ, ರಾಜಕೀಯ ಪಕ್ಷದವರಿಗೆ, ಸಾರ್ವಜನಿಕರಿಗೆ ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗದವರು ಸೇರಿದಂತೆ ಪ್ರತಿಯೊಬ್ಬರಿಗೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಕೃತಜ್ಞತೆ ಸಲ್ಲಿಸಿದ್ದಾರೆ.






 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News