ರಾಜಕೀಯ ಲಾಭಕ್ಕಾಗಿ ಪರ್ಯಾಯವನ್ನು ವಿವಾದವನ್ನಾಗಿಸುವ ಪ್ರಯತ್ನ ಅಪಾಯಕಾರಿ: ಸುನೀಲ್ ಬಂಗೇರ
ಉಡುಪಿ: ಪರ್ಯಾಯ ಶ್ರೀ ಕೃಷ್ಣ ಮಠದಂತಹ ಪವಿತ್ರ ಧಾರ್ಮಿಕ ಉತ್ಸವವನ್ನು ರಾಜಕೀಯ ಲಾಭಕ್ಕಾಗಿ ವಿವಾದದ ಕೇಂದ್ರ ಬಿಂದುಗೊಳಿಸುವ ಪ್ರಯತ್ನ ಅತ್ಯಂತ ಅಪಾಯಕಾರಿ ಹಾಗೂ ಖಂಡನೀಯ. ಪರ್ಯಾಯದಂತಹ ಪವಿತ್ರ ಉತ್ಸವಗಳನ್ನು ರಾಜಕೀಯ ಕಿತ್ತಾಟದ ಅಖಾಡವನ್ನಾಗಿ ಮಾಡುವ ಪ್ರಯತ್ನವನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಕ್ಷಣ ನಿಲ್ಲಿಸಬೇಕು ಎಂದು ಮಟ್ಟು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಸುನಿಲ್ ಡಿ. ಬಂಗೇರ ತಿಳಿಸಿದ್ದಾರೆ.
ಈ ಸಂಬಂಧ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ನೀಡಿರುವ ಹೇಳಿಕೆ ಶಾಂತಿ ಕಾಪಾಡುವ ಜವಾಬ್ದಾರಿಯುತ ನಡೆಗಿಂತಲೂ, ಸಮಾಜದಲ್ಲಿ ಗೊಂದಲ ಮತ್ತು ಧ್ರುವೀಕರಣ ಉಂಟುಮಾಡುವ ರಾಜಕೀಯ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಜನಪ್ರತಿನಿಧಿಯಾಗಿ ನಡೆದುಕೊಳ್ಳಬೇಕಾದ ವ್ಯಕ್ತಿಯೊಬ್ಬರು, ಧಾರ್ಮಿಕ ವಿಷಯಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಅಸಹಿಷ್ಣು ರಾಜಕೀಯ ಮನಸ್ಥಿತಿಯ ಪ್ರತಿಬಿಂಬ. ಇದು ಧರ್ಮ ರಕ್ಷಣೆ ಅಲ್ಲ; ಇದು ಧರ್ಮವನ್ನು ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸುವ ನಾಚಿಕೆಗೇಡಿತನ. ಯಶ್ ಪಾಲ್ ಸುವರ್ಣ ಪರ್ಯಾಯದಂತಹ ಸಂವೇದನಾಶೀಲ ಸಂದರ್ಭವನ್ನು ಆಯ್ಕೆ ಮಾಡಿಕೊಂಡು ಈ ರೀತಿಯ ಹೇಳಿಕೆ ನೀಡಿರುವುದು, ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಆತಂಕ ಮತ್ತು ಅನುಮಾನ ಬಿತ್ತುವ ತಂತ್ರದ ಭಾಗವೇ ಎಂಬ ಅನುಮಾನಕ್ಕೆ ಕಾರಣವಾಗುತ್ತದೆ. ಶಾಂತಿ ಮತ್ತು ಸೌಹಾರ್ದ ಕಾಪಾಡಬೇಕಾದ ಶಾಸಕರಿಂದ ಇಂತಹ ಪ್ರಚೋದನಾತ್ಮಕ ಭಾಷೆ ಹೊರಬರುವುದು ಅತೀವ ದುರದೃಷ್ಟಕರ ಎಂದು ಅವರು ಟೀಕಿಸಿದರು.
ಸಮಾಜದಲ್ಲಿ ಅಶಾಂತಿ ಉಂಟಾದಲ್ಲಿ ಅದರ ಸಂಪೂರ್ಣ ನೈತಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯಿಂದ ಯಶ್ ಪಾಲ್ ಸುವರ್ಣ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಂತರದ ದಿನಗಳಲ್ಲಿ ನೀಡುವ ಸ್ಪಷ್ಟೀಕರಣಗಳು ಅಥವಾ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಹೇಳಿಕೆಗಳಿಗೆ ಶಾಂತಿಪ್ರಿಯ ಜನತೆ ಮರುಳಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು. ಧಾರ್ಮಿಕ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯುವ ಇಂತಹ ಪ್ರಯತ್ನಗಳು ಮುಂದುವರಿದಲ್ಲಿ, ಸಮಾಜದ ಸಹನೆ ಮಿತಿಯನ್ನು ಮೀರುವ ದಿನ ದೂರವಿಲ್ಲ. ಶಾಂತಿ, ಸಂಪ್ರದಾಯ ಮತ್ತು ಸಹಬಾಳ್ವೆಯನ್ನು ಗೌರವಿಸುವ ಜನರು ಮೌನವಾಗಿರುತ್ತಾರೆ ಎಂದು ಯಾರೂ ತಪ್ಪಾಗಿ ಅಂದಾಜು ಮಾಡಬಾರದು. ಇದು ಯಾವುದೇ ವೈಯಕ್ತಿಕ ದ್ವೇಷದ ಹೇಳಿಕೆ ಅಲ್ಲ, ಇದು ಸಮಾಜದ ಶಾಂತಿ ಮತ್ತು ಸೌಹಾರ್ದವನ್ನು ಕಾಪಾಡುವ ದೃಷ್ಟಿಯಿಂದ ನೀಡುವ ಕಠಿಣ ಮತ್ತು ಅಂತಿಮ ಎಚ್ಚರಿಕೆ ಎಂದು ಸುನಿಲ್ ಬಂಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.