Karkala | ಕ್ರಿಯೇಟಿವ್ ಪುಸ್ತಕ ಧಾರೆ-3: 25 ಪುಸ್ತಕಗಳು ಬಿಡುಗಡೆ

Update: 2026-07-19 13:05 IST

ಕಾರ್ಕಳ: ಕ್ರಿಯೇಟಿವ್ ಪುಸ್ತಕ ಮನೆ ವತಿಯಿಂದ ರವಿವಾರ ಆಯೋಜಿಸಲಾಗಿರುವ "ಕ್ರಿಯೇಟಿವ್ ಪುಸ್ತಕ ಧಾರೆ-3" ಮೂಲಕ ಒಟ್ಟು 25 ಕನ್ನಡ ಕೃತಿಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಹಿರಿಯ ಪತ್ರಕರ್ತ ಅಜಿತ್ ಹನುಮಕ್ಕನವರ್ ಕನ್ನಡದ ವಿವಿಧ ಲೇಖಕರ ಪ್ರಸಿದ್ದ, ಯುವ ಹಾಗೂ ಹಿರಿಯ ಬರಹಗಾರರ "ಹೊಸಪಟ್ಟಣ", "ಖ್ಯಾತ ಶಿಕ್ಷಣ ಸಿದ್ಧಾಂತಿಗಳು", "ಪೀಯೂಷಾಮೃತ", "ಸುಭಾಷಿತ ಸಾಗರ", "ಬದುಕಿನ ಕನ್ನಡಿಯಲಿ", "ಭಾವಮುದ್ರೆ", "ದೇವಯಾನ", "ತರ್ಕಕ್ಕೆ ನಿಲುಕದ್ದು", "ಸಮುದ್ರ ಮಾತಾಡಿತು", "ನಿತ್ಯದ ನೋಟಗಳಿಗೆ ನಿರುತ್ತರ", "ಅಪ್ಪನ ಅಂಗಡಿ", "ಜಿಗುರು ಜಿವುಡಿದ ಫೇಸ್ಬುಕ್", "ಗೆಲುವಿನ ದಾರಿ", "ನದಿಯಂಚಿನ ನಡಿಗೆ", "ಜಂದನವ ಕಡಿದು ತೋದೊಡೆ", "ಜಗತ್ತಿನ ಪ್ರಸಿದ್ಧ ಮಕ್ಕಳ ಕಥೆಗಳು", "ಮೌನ ಈ ಮಳೆಬಿಲ್ಲು", "ನಂಬಿಕೆ", "ಗೆಲುವಿನ ಏಣಿ", "ಅಂತರಂಗ ಯಾನ", "ಮೌಲ್ಯದರಿವಿನ ಹೊಂಬೆಳಕು", "ನೀಲಿ", "ಒಲವೇ ಹಾಡಾಗಿದೆ", "ಸಾಹಿತ್ಯ ವಿಸ್ಮಯ" ಹಾಗೂ "ರಣರಂಗ" ಕೃತಿಗಳು ಸೇರಿದಂತೆ ಒಟ್ಟು 25 ಕನ್ನಡ ಕೃತಿಗಳನ್ನು ಬಿಡುಗಡೆಗೊಳಿಸಿದರು

ಬಳಿಕ ಮಾತನಾಡಿದ ಅಜಿತ್ ಹನುಮಕ್ಕನವರ್, ಮೊಬೈಲ್ ಫೋನ್ ಅನ್ನುವುದು ಬೆಂಕಿ ಪೆಟ್ಟಿಗೆ ಥರ. ಅದರಿಂದ ದೀಪನೂ ಹಚ್ಚಬಹುದು, ಮನೆಗೂ ಬೆಂಕಿ ಹಚ್ಚ ಬಹುದು ಆದರೆ ಅದು ಮೂರ್ಖರ ಕೈಗೆ ಸಿಗಬಾರದು. ಅವುಗಳನ್ನು ಬಳಸಿಕೊಳ್ಳುವ ಉದ್ದೇಶ ನಾವು ಬೆಳೆಸುವ ರೀತಿಯಲ್ಲಿದೆ ಎಂದರು.

ಸಿಕ್ಕಿರುವ ಸ್ವಾತಂತ್ರ್ಯವನ್ನುವನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ಕಲಿಯುವುದೇ ಶಿಕ್ಷಣ. ಇರುವ ಹಲವು ಮಾರ್ಗಗಳನ್ನು ಬಳಸಿಕೊಂಡು ಶಿಕ್ಷಣವನ್ನು ಸದುದ್ದೇಶಗೊಳಿಸಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಶಾಸಕ ವಿ.ಸುನೀಲ್ ಕುಮಾರ್, ಗೂಗಲ್ ಹಾಗೂ ಜಿಪಿಟಿ ಕೇವಲ ಮಾಹಿತಿಯನ್ನು ನೀಡುತ್ತವೆ. ಆದರೆ ಪುಸ್ತಕಗಳು ಮಾಹಿತಿ, ಜ್ಞಾನ, ಪ್ರೀತಿ, ದೇಶ ಪ್ರೇಮದ ಜೊತೆಗೆ ಬಾಂದವ್ಯವನ್ನು ಬೆಸೆಯುವ ಕೆಲಸವನ್ನು ಮಾಡುತ್ತವೆ ಎಂದರು.

ಹಿಂದೆ ಖಡ್ಗ ಕತ್ತಿಗಳಿಂದ ಯುದ್ಧಗಳನ್ನು ಗೆಲ್ಲುತ್ತಿದ್ದರೆ, ಈಗ ತಂತ್ರಜ್ಞಾನ ಮೂಲಕ ಯುದ್ಧ ಗೆಲ್ಲುವ ಪ್ರಯತ್ನ ನಡೆಸಿದರೂ ಅವುಗಳು ಬಹುಕಾಲ ಉಳಿಯುವುದಿಲ್ಲ. ಸಾಹಿತ್ಯ, ಜ್ಞಾನ, ಪುಸ್ತಕ ಮೂಲಕ ಗೆಲ್ಲುವ ಯುದ್ಧ ನಿರಂತರ ಗೆಲುವು ಹಾಗೂ ಉಳಿವು ಸಾಧ್ಯ ಎಂದು ಅಭಿಪ್ರಾಯಿಸಿದರು.

ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಶ್ವಥ್ ಎಸ್. ಎಲ್. ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕ್ರಿಯೇಟಿವ್ ಪುಸ್ತಕ ಮನೆ ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ಪ್ರಕಟಿಸುವುದರ ಜೊತೆಗೆ ನಾಡಿನ ಹೆಸರಾಂತ ಬರಹಗಾರರು, ಚಿಂತಕರು ಹಾಗೂ ಸಾಹಿತ್ಯಾಸಕ್ತರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ಅದರ ಮುಂದುವರಿದ ಭಾಗವಾಗಿ ಈ ವರ್ಷದ ಮೂರನೇ ಆವೃತ್ತಿಯ "ಕ್ರಿಯೇಟಿವ್ ಪುಸ್ತಕ ಧಾರೆ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ರಾಜ್ಯಮಟ್ಟದ ಕ್ರಿಯೇಟಿವ್ ಪುಸ್ತಕ ಪ್ರಶಸ್ತಿಯನ್ನು ಕುಂದಾಪುರದ ಲೇಖಕ ಶಶಿಧರ ಹಾಲಾಡಿಯವರ 'ನದಿದಾಟಿ ಬಂದವರು' ಕೃತಿಗೆ ಪ್ರದಾನ ಮಾಡಲಾಯಿತು.

ಕಸಾಪ ಕಾರ್ಕಳ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ್ ರಾವ್, ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಸಾಂದರ್ಭಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್, ಡಾ. ಗಣನಾಥ್ ಭಟ್, ಅಮೃತ್ ರೈ, ಆದರ್ಶ ಎಂ.ಕೆ., ವಿಮಲ್ ರಾಜ್, ಗಣಪತಿ ಕೆ.ಎಸ್. ಉಪಸ್ಥಿತರಿದ್ದರು

ಕಾರ್ಯಕ್ರಮದಲ್ಲಿ ರಾಜ್ಯದ ಅನೇಕ ಹಿರಿಯ ಸಾಹಿತಿಗಳು, ಬರಹಗಾರರು ಹಾಗೂ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News