ಉಡುಪಿ, ಸೆ.9: ಈಡಿ, ಐಟಿ, ಸಿಬಿಐಗಳು ಇಂದು ಬಿಜೆಪಿಗೆ ತನ್ನದೇ ಆದ ಯುವಮೋರ್ಚಾ, ಎಬಿವಿಪಿ ಸಂಘಟನೆಗಳಿದ್ದಂತೆ. ಬಿಜೆಪಿ ಸ್ಕೀಮ್ ಹಾಕಿ ಯಾರ ಮೇಲೆ ದಾಳಿ ಮಾಡಬೇಕು.. ಯಾರನ್ನು ದುರ್ಬಲ ಗೊಳಿಸಬೇಕು.. ಯಾರ ಮೇಲೆ ಒತ್ತಡ ಹೇರಬೇಕು.. ಯಾರನ್ನು ಪಕ್ಷಕ್ಕೆ ಎಳೆದುಕೊಳ್ಳಬೇಕು ಎಂದು ನಿರ್ಧರಿಸುತ್ತೊ ಅದನ್ನು ಈ ಸಂಸ್ಥೆಗಳು ಮಾಡುತ್ತವೆ. ಯುವಮೋರ್ಚಾ, ಎಬಿವಿಪಿ, ಮಹಿಳಾ ಮೋರ್ಚಾ ಯಾವ ರೀತಿ ಬಿಜೆಪಿಗೆ ಕೆಲಸ ಮಾಡುತ್ತಿವೆಯೋ ಅದೇ ರೀತಿ ಈಡಿ, ಐಟಿ, ಸಿಬಿಐ ಸಂಸ್ಥೆಗಳು ಬಿಜೆಪಿಗಾಗಿ ಕೆಲಸ ಮಾಡುತ್ತಿವೆ ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್ ವ್ಯಂಗ್ಯವಾಡಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಉಡುಪಿ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನವನ್ನು ಉದ್ಘಾಟಿಸಲು ಆಗಮಿಸಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೋಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಇಂದು ನಡೆದ ಈಡಿ ದಾಳಿಯ ಕುರಿತು ಸಚಿವ ರಿಝ್ವಾನ್‌ರನ್ನು ಪ್ರಶ್ನಿಸಿದಾಗ ಅವರು ಈ ಸಂಸ್ಥೆಗಳ ವಿರುದ್ಧ ವ್ಯಂಗ್ಯದ ಬಾಣ ಬಿಟ್ಟರು.

ಬಿಜೆಪಿ ಸೂಚಿಸಿದಾಗಲೆಲ್ಲಾ, ಸೂಚಿಸಿದವರ ಮೇಲೆಲ್ಲಾ ದಾಳಿ ಮಾಡ್ತಾನಾ ಇರುತ್ತವೆ. ಈ ಸಂಸ್ಥೆಗಳು ಈಗ ಬಿಜೆಪಿಗೋಸ್ಕರವೇ ಕೆಲಸ ಮಾಡೋದು. ಈ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಟ್ಟು ಕೊಟ್ಟು ನಾವು ಸುಸ್ತಾಗಿದ್ದೇವೆ. ಈಗ ನೀವೇ ಹೇಳ್ಕೊಬೇಕು ಅವುಗಳ ಬಗ್ಗೆ ಎಂದರು.

ವಿಜಯೇಂದ್ರ ಕುರ್ಚಿ ಉಳಿಸಿಕೊಳ್ಳಲು ಯಾತ್ರೆ!: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಲಿಂಗಸುಗೂರಿನಿಂದ ಬಳ್ಳಾರಿ ವರೆಗೆ ನಡೆಸುತ್ತಿರುವ ಪಾದಯಾತ್ರೆಯನ್ನು ಲೇವಡಿ ಮಾಡಿದ ರಿಝ್ವಾನ್, ತನ್ನ ಕುರ್ಚಿಯನ್ನು ಉಳಿಸಿಕೊಳ್ಳಲು ಅವರು ಈ ಯಾತ್ರೆ ಮಾಡುತಿದ್ದಾರೆ. ಅವರ ಪಾದಯಾತ್ರೆಗೆ ಯಾವುದೇ ವಿಷಯಗಳಿಲ್ಲ ಎಂದರು.

ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಪಟ್ಟದಿಂದ ಇಳಿಸಲು ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ. ಇದನ್ನು ಯತ್ನಾಳ್ ಸ್ಪಷ್ಟವಾಗಿ ಹೇಳಿದ್ದಾರೆ ಅವರನ್ನು ತೆಗೆಯುತಿದ್ದಾರೆ ಎಂದು. ತನ್ನ ಕುರ್ಚಿ ಬಚಾವ್ ಮಾಡಿಕೊಳ್ಳುವುದಕ್ಕೆ ವಿಜಯೇಂದ್ರ ಈ ಪಾದಯಾತ್ರೆ ಮಾಡುತಿದ್ದಾರೆ. ಅವರು ಯಾವ ಉದ್ದೇಶವನ್ನು ಇಟ್ಟುಕೊಂಡು ಪಾದಯಾತ್ರೆ ಘೋಷಣೆ ಮಾಡಿದ್ದರೋ, ಆ ವಿಷಯವೇ ಈಗಿಲ್ಲ. ಹೀಗಾಗಿ ರಾಜಕೀಯ ಇತಿಹಾಸ ದಲ್ಲಿ ಮೊದಲ ಬಾರಿಗೆ ಯಾವ ವಿಷಯಗೂ ಇಲ್ಲದೇ ಬಿಜೆಪಿ ಪಾದಯಾತ್ರೆ ಮಾಡುತ್ತಿದೆ. ಇದಕ್ಕಾಗಿ ನಾವು ಅವರಿಗೆ ಅಭಿನಂದನೆ ಹೇಳಬೇಕು ಎಂದು ರಿಝ್ವಾನ್ ಅರ್ಷದ್ ಲೇವಡಿ ಮಾಡಿದರು.

ಜನರ ಸಂಕಷ್ಟ ಕಾಣುವುದಿಲ್ಲವೇ...: ರಾಜ್ಯದಲ್ಲಿ ಬರಗಾಲವಿದೆ. ಪ್ರಕೃತಿ ನಮ್ಮ ಮೇಲೆ ಅವಕೃಪೆ ತೋರಿದೆ. ಮಳೆ ಆಗಿಲ್ಲ. ರೈತರಿಗೆ ಸಮಸ್ಯೆ ಇವೆ. 100ಕ್ಕೂ ಅಧಿಕ ತಾಲೂಕುಗಳಲ್ಲಿ ಬರಗಾಲದ ಘೋಷಣೆ ಮಾಡಿದ್ದೇವೆ. ಇನ್ನಷ್ಟು ತಾಲೂಕುಗಳ ಘೋಷಣೆಗೆ ಬಾಕಿ ಇದೆ. ನಾವೆಲ್ಲ ಸೇರಿ ಇದರ ಬಗ್ಗೆ ಚಿಂತೆ ಮಾಡಬೇಕಾ... ಅಥವಾ ರಾಜಕೀಯ ಉದ್ದೇಶವಿಟ್ಟುಕೊಂಡು ಪಾದೆಯಾತ್ರೆ ಘೋಷಣೆ ಮಾಡಿ, ವಿಷಯ ರಹಿತ ಪಾದಯಾತ್ರೆಗೆ ನಾನೇನು ಉತ್ತರ ಕೊಡಲಿ ಎಂದು ಸಚಿವರು ಪ್ರಶ್ನಿಸಿದರು.

ಇಂದಿರಾ ಕ್ಯಾಂಟಿನ್ ಟೆಂಡರ್‌ನ್ನು ರದ್ದು ಮಾಡಿರುವುದನ್ನು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿರುವುದಕ್ಕೆ ಉತ್ತರಿಸಿದ ರಿಝ್ವಾನ್, ನಾನು ಸಚಿವನಾಗಿ 23ದಿನವಷ್ಟೇ ಆಗಿದೆ. 22 ದಿನಕ್ಕೆ ಆರೋಪ ಮಾಡಿಬಿಟ್ಟಿದ್ದಾರೆ. ಇಂದಿರಾ ಕ್ಯಾಂಟೀನ್ ಟೆಂಡರ್ ರದ್ದು ಮಾಡಿದ್ದೇವೆ. ಮತ್ತೆ ಮಾಡುವುದಕ್ಕೆ ಹೇಳಿದ್ದೇವೆ ಎಂದು ಒಪ್ಪಿಕೊಂಜು ಅದಕ್ಕೆ ಕಾರಣವನ್ನೂ ವಿವರಿಸಿದರು.

ನಾವು ಟೆಂಡರ್ ಮಾಡುವಾಗ ಅಗತ್ಯ ವಸ್ತುಗಳ ಬೆಲೆ ಎಷ್ಟಿತ್ತು.. ಈಗ ಎಷ್ಟಿದೆ ಎಂಬುದನ್ನು ಅಶೋಕ್ ಪರಾಂಬರಿ ಸಲಿ ಎಂದರು. ಕುಕ್ಕಿಂಗ್ ಆಯಿಲೆ, ಬೇಳೆಕಾಳು, ಸಕ್ಕರೆ ಇವುಗಳ ಬೆಲೆ ಈಗ ಗಗನಕ್ಕೆ ಏರಿಬಿಟ್ಟಿದೆ. ಇದಕ್ಕೆ ಕಾರಣ ಯಾರು..? ಅಶೋಕ್ ನನ್ನ ವಿರುದ್ಧ ಮಾತನಾಡುವುದಕ್ಕಿಂತ ಮೊದಲು ಪ್ರಧಾನಮಂತ್ರಿ ಬಳಿ ಕೇಳಬೇಕು. ಬೆಲೆಏರಿಕೆಯಿಂದಾಗಿ ಬಡವರು ಬದುಕಬೇಕೋ, ಬೇಡವೊ ಎಂಬುದನ್ನು ಮೋದಿ, ಬಿಜೆಪಿ ತೀರ್ಮಾನ ಮಾಡಬೇಕು ಎಂದು ಕಟುವಾಗಿ ನುಡಿದರು.

ಪ್ರಧಾನಮಂತ್ರಿಗಳ ವಿರುದ್ಧ ಏನೂ ಹೇಳಕೋಕಾಗದೇ.. ಯಾರೋ ಒಬ್ಬ ಸಿಕ್ಕಿದ್ದಾನಲ್ಲ ಬಡವ ಅಂತ ನನ್ನ ಮೇಲೆ ಪ್ರಹಾರ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.

100ದಿನದ ಹೊಸ ಹುರುಪು: ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯದ ಹೊಸ ಸರಕಾರ ಅಧಿಕಾರ ವಹಿಸಿಕೊಂಡು 100ದಿನ ಪೂರ್ಣಗೊಳ್ಳುತ್ತಿರುವ ಬಗ್ಗೆ ಕೇಳಿದಾಗ,ಈ 100 ದಿನಗಳಲ್ಲಿ ಎಲ್ಲಾ ಇಲಾಖೆಗಳಲ್ಲೂ ಸಚಿವರು ಉತ್ಸಾಹದಿಂದ ಕೆಲಸ ಮಾಡುತಿದ್ದು ಜವಾಬ್ದಾರಿಯನ್ನು ನಿಭಾಯಿಸುತಿದ್ದಾರೆ. ಪ್ರತಿ ಇಲಾಖೆಗಳೂ ನೇರವಾಗಿ ಜನರೊಂದಿಗೆ ಸೇರಿ ಕೆಲಸ ಮಾಡಬೇಕೆಂದು ಪ್ರಜಾಸೇವಾ ಆಂದೋಲನವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿ ದ್ದೇವೆ. ಮುಂದೆ ನಾವು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ 100ದಿನಗಳ ಕೆಲಸ ದಿಕ್ಸೂಚಿ ಎಂದು ರಿಝ್ವಾನ್ ಅರ್ಷದ್ ತಿಳಿಸಿದರು.

ಸವಾಲಿಗೆ ಸವಾಲು

ಸರಕಾರವನ್ನು ವಿಸರ್ಜನೆ ಮಾಡಿ, ಮತ್ತೆ ಚುನಾವಣೆಗೆ ಬನ್ನಿ.. ಅಲ್ಲಿ ಜನರು ನಿಮಗೆ ಉತ್ತರ ಕೊಡುತ್ತಾರೆ ಎಂಬ ವಿಜಯೇಂದ್ರ ಅವರ ಸವಾಲಿನ ಕುರಿತು ಪ್ರಶ್ನಿಸಿದಾಗ ಉತ್ತರಿಸಿದ ರಿಝ್ವಾನ್, ಜನ ನಮಗೆ ಐದು ವರ್ಷ ಆಡಳಿತ ನಡೆಸಲು ಗೆಲ್ಲಿಸಿದ್ದಾರೆ. ಬಿಜೆಪಿಯ ಬೇಕು-ಬೇಡಗಳಿಗಾಗಿ ಗೆಲ್ಲಿಸಿದ್ದಲ್ಲ. ಐದು ವರ್ಷದ ಆಡಳಿತ ಪೂರ್ಣಗೊಳಿಸಿದ ಮೇಲೆ ಚುನಾವಣೆಗೆ ಬರ್ತಿವಿ. ಬರಲಿ ಅವರು. ಯಾರು ಮುಳುಗುತ್ತಾರೆ.. ಯಾರು ಉಳಿತಾರೆ ಎಂಬುದನ್ನು ಜನ ತೀರ್ಮಾನಿಸುತ್ತಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor